ನವದೆಹಲಿ: ದೇಶದ ಆರ್ಥಿಕ ಪ್ರಗತಿಗೆ ರಿಯಲ್ ಎಸ್ಟೇಟ್ ಕ್ಷೇತ್ರದ ಕೊಡುಗೆ ಮಹತ್ವದ್ದಾಗಿದ್ದು, ಉದ್ದೇಶಿತ ಭೂಸ್ವಾಧೀನ ಮತ್ತು ಪುನರ್ವಸತಿ ಕಾಯ್ದೆಯ ಮೂಲಕ ರಿಯಲ್ ಎಸ್ಟೇಟ್ ಕ್ಷೇತ್ರದ ಮೇಲೆ ನಿಯಂತ್ರಣ ಹೇರುವ ಉದ್ದೇಶ ಸರ್ಕಾರಕ್ಕಿಲ್ಲ ಎಂದು ಕೇಂದ್ರ ನಗರಾಭಿವೃದ್ಧಿ ಸಚಿವ ಕಮಲ್ನಾಥ್ ಇಲ್ಲಿ ಸ್ಪಷ್ಟಪಡಿಸಿದರು.
ಕರಡು ಮಸೂದೆಗೆ ಸಂಬಂಧಿಸಿದಂತೆ ಈಗಾಗಲೇ ವ್ಯಕ್ತವಾಗಿರುವ ವಿರೋಧಗಳನ್ನು ಪರಿಶೀಲಿಸಲಾಗುವುದು. ಏಕಗವಾಕ್ಷಿ ಅನುಮೋದನೆ ವ್ಯವಸ್ಥೆ ಕುರಿತು ಹೆಚ್ಚಿನ ಗಮನ ನೀಡಲಾಗುವುದು ಎಂದರು.
ಗುರುವಾರ ಇಲ್ಲಿ ನಡೆದ ಭಾರತೀಯ ರಿಯಲ್ ಎಸ್ಟೇಟ್ ಅಭಿವೃದ್ಧಿದಾರರ ಸಂಘಗಳ ಒಕ್ಕೂಟದ (ಕ್ರೆಡಾಯ್) ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ನಗರ ಜನಸಂಖ್ಯೆ ಬೆಳೆದಂತೆ ಮೂಲಸೌಕರ್ಯ ವಿಸ್ತರಣೆ ಸವಾಲು ಕೂಡ ಹೆಚ್ಚಿದೆ. ಅಗ್ಗದ ಮನೆಗಳ ನಿರ್ಮಾಣಕ್ಕೆ ಸಂಬಂಧಿಸಿದಂತೆ ನಿಗಾ ವಹಿಸಲು ಶೀಘ್ರದಲ್ಲೇ ಸರ್ಕಾರ `ನಗರ ನಿಯಂತ್ರಣ ಪ್ರಾಧಿಕಾರ~ ರಚಿಸಲಿದೆ.
ಆದಾಗ್ಯೂ, ಹೊಸ ಭೂಸ್ವಾಧೀನ ಕಾಯ್ದೆಯ ಮುಖ್ಯ ಉದ್ದೇಶ ರಿಯಾಲ್ಟಿ ಕ್ಷೇತ್ರದಲ್ಲಿ ಹೆಚ್ಚಿನ ಪಾರದರ್ಶಕತೆ ತರುವುದಾಗಿದೆ ಎಂದರು. `ನಿರ್ಮಾಣ ಮತ್ತು ಅಭಿವೃದ್ಧಿಗೆ ಸಂಬಂಧಿಸಿದಂತೆ `ಕ್ರೆಡಾಯ್~ ಹೊರತಂದ ಮಾದರಿ ಕರಡು ಪ್ರತಿಯನ್ನು ಅವರು ಬಿಡುಗಡೆ ಮಾಡಿದರು.
`ವಿಳಂಬ ನೀತಿ ಮತ್ತು ಪಾರದರ್ಶಕತೆ ಕೊರತೆಯಿಂದ ಗ್ರಾಹಕರ ಆತ್ಮವಿಶ್ವಾಸವನ್ನು ರಿಯಾಲ್ಟಿ ಕ್ಷೇತ್ರ ಕಳೆದುಕೊಂಡಿದೆ. ಹೊಸ ನೀತಿಯ ಮೂಲಕ ಗ್ರಾಹಕರ ಮತ್ತು ಹೂಡಿಕೆದಾರರ ಆತ್ಮವಿಶ್ವಾಸವನ್ನು ಈ ಕ್ಷೇತ್ರ ಮರಳಿ ಪಡೆಯಲಿದೆ~ ಎಂದು ಗೃಹ ಮತ್ತು ನಗರ ಬಡತನ ನಿರ್ಮೂಲನಾ ಸಚಿವೆ ಕುಮಾರಿ ಸೆಲ್ಜಾ ಅಭಿಪ್ರಾಯಪಟ್ಟರು.
ಸಂಪೂರ್ಣ ಕಡೆಗಣನೆ: ಪ್ರಾಸ್ತಾವಿಕವಾಗಿ ಮಾತನಾಡಿದ `ಕ್ರೆಡಾಯ್~ ಅಧ್ಯಕ್ಷ ಲಲಿತ್ ಕುಮಾರ್ ಜೈನ್, ದೇಶದ `ಜಿಡಿಪಿ~ಗೆ ಶೇ 4ರಷ್ಟು ಕೊಡುಗೆ ನೀಡುವ ರಿಯಲ್ ಎಸ್ಟೇಟ್ ಕ್ಷೇತ್ರವನ್ನು ಸರ್ಕಾರ ಸಂಪೂರ್ಣವಾಗಿ ಕಡೆಗಣಿಸಿದೆ ಎಂದರ್ಲ್ಲಲದೆ, ರಿಯಾಲ್ಟಿ ಕ್ಷೇತ್ರದಲ್ಲಿ ಪಾರದರ್ಶಕತೆ ತರಲು ಏಕಗವಾಕ್ಷಿ ಅನುಮೋದನೆ ವ್ಯವಸ್ಥೆ ಜಾರಿಗೊಳಿಸಬೇಕು ಎಂದೂ ಆಗ್ರಹಿಸಿದರು.
ಕೇಂದ್ರ ಯೋಜನಾ ಆಯೋಗದ ಸದಸ್ಯ ಅರುಣ್ ಮೈರಾ ಮಾತನಾಡಿದರು. `ಕ್ರೆಡಾಯ್~ ಉಪಾಧ್ಯಕ್ಷ ಶೇಖರ್ ರೆಡ್ಡಿ ಉಪಸ್ಥಿತರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.