ಕೋಲಾರ: ಸರ್ದಾರ್ ವಲ್ಲಭಭಾಯಿ ಪಟೇಲ್ ಪುಣ್ಯತಿಥಿ ಪ್ರಯುಕ್ತ ನಗರದಲ್ಲಿ ಭಾನುವಾರ ಏರ್ಪಡಿಸಿದ್ದ ಏಕತಾ ಓಟದಲ್ಲಿ ಎಲ್ಲಾ ವಯಸ್ಸಿನವರೂ ಉತ್ಸಾಹದಿಂದ ಪಾಲ್ಗೊಂಡರು.
ಮಹಿಳೆಯರು, ಮಕ್ಕಳು ಸೇರಿದಂತೆ ಶಾಲಾ ಕಾಲೇಜು ವಿದ್ಯಾರ್ಥಿಗಳು, ಬಿಜೆಪಿ ಮುಖಂಡರು, ಕಾರ್ಯಕರ್ತರೆಲ್ಲರೂ ಏಕತಾ ಓಟದ ಮೂಲಕ ನಗರದಲ್ಲಿ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರನ್ನು ವಿಶೇಷವಾಗಿ ಸ್ಮರಿಸಿದರು.
‘ಏಕ್ ಭಾರತ್ -ಶ್ರೇಷ್ಠ್ ಭಾರತ್, ಜೈ ಜವಾನ್, -ಜೈ ಕಿಸಾನ್, ರೈತ ನಾಯಕ- ಲೋಹ ಪುರುಷ ಸರ್ದಾರ್ ವಲ್ಲಭಭಾಯಿ ಪಟೇಲ್ ಕಿ ಜೈ, ವಂದೇ ಮಾತರಂ,- ಭಾರತ್ ಮಾತಾಕಿ ಜೈ-, ಏಕತೆಗಾಗಿ ಓಟ’ ಘೋಷಣೆಗಳು ಓಟದುದ್ದಕ್ಕೂ ಮೊಳಗಿದವು. ಓಟಗಾರರು ಇವೇ ಘೋಷಣಾ ಬರಹಗಳುಳ್ಳ ಟೀ ಶರ್ಟ್ ತೊಟ್ಟು ಗಮನ ಸೆಳೆದರು.
ಓಟವು ಪೆಟ್ರೋಲ್ ಬಂಕ್ ವೃತ್ತ, ಶಾರದಾ ಟಾಕೀಸ್ ರಸ್ತೆ, ಬಸ್ ನಿಲ್ದಾಣ ವೃತ್ತ, ಕಾಳಮ್ಮ ಗುಡಿ ಬೀದಿ, ಪ್ರಭಾ ಟಾಕೀಸ್ ರಸ್ತೆ, ಎಂ.ಜಿ.ರಸ್ತೆ, ಕಠಾರಿಪಾಳ್ಯ ರಸ್ತೆ ಮೂಲಕ ಗಾಂಧಿವನದಲ್ಲಿ ಕೊನೆಗೊಂಡಿತು. ನಂತರ ಅಲ್ಲಿಯೇ ಬಹಿರಂಗ ಸಭೆ ನಡೆಯಿತು.
ಸಭೆಯಲ್ಲಿ ಮಾತನಾಡಿದ ಮುಖಂಡರು, ಏಕತಾ ಓಟದ ನಂತರದ ದಿನಗಳಲ್ಲಿ ಪಟೇಲರ ಕುರಿತು ಪ್ರೌಢಶಾಲೆ, ಕಾಲೇಜಿನಲ್ಲಿ ಭಾಷಣ, ಪ್ರಬಂಧ, ಚಿತ್ರ ರಚನೆ ಸ್ಪರ್ಧೆಗಳನ್ನೂ ಆಯೋಜಿಸಲಾಗುವುದು ಎಂದು ಹೇಳಿದರು.
ನಗರದ ಡೂಂಲೈಟ್ ವೃತ್ತದಲ್ಲಿ ಓಟಕ್ಕೆ ವಿಧಾನ ಪರಿಷತ್ ಸದಸ್ಯ ಡಿ.ಎಸ್.ವೀರಯ್ಯ ಚಾಲನೆ ನೀಡಿದರು. ಮಾಜಿ ಶಾಸಕರಾದ ವೈ.ಸಂಪಂಗಿ, ಎಂ.ನಾರಾಯಣಸ್ವಾಮಿ, ಎಟ್ಟಕೋಡಿ ಕೃಷ್ಣಾರೆಡ್ಡಿ, ಡಾ.ಶಿವಣ್ಣ, ಶಂಕರ ನಾರಾಯಣ ರೆಡ್ಡಿ, ಯಶ್ವಂತ್ ರಾವ್, ಜೆ.ಎಸ್.ಪಾರ್ಥಸಾರಥಿ, ಓಂಶಕ್ತಿ ಚಲಪತಿ, ಪ್ರಮೋದ್, ಶಿಳ್ಳಂಗೆರೆ ಮಹೇಶ್, ಮಾಗೇರಿ ನಾರಾಯಣಸ್ವಾಮಿ, ಗೂಟ್ಲೂರು ಮಂಜುನಾಥ್, ಚಲಪತಿ ಇತರರು ಮೊದಲಾದವರು ಭಾಗವಹಿಸಿದ್ದರು.