ಶಿವಮೊಗ್ಗ: ಶ್ರೀನಗರದಲ್ಲಿ ಜ. 26ರಂದು ರಾಷ್ಟ್ರ ಧ್ವಜಾರೋಹಣ ಮಾಡಲು ಹೊರಟಿದ್ದ ‘ಏಕತಾ ಯಾತ್ರೆ’ ರೈಲು ತಡೆದಿರುವುದನ್ನು ಖಂಡಿಸಿ ಬಿಜೆಪಿ ಯುವಮೋರ್ಚಾ ಜಿಲ್ಲಾ ಘಟಕದ ಕಾರ್ಯಕರ್ತರು ಸೋಮವಾರ ನಗರದ ಗೋಪಿ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.
ರಾಷ್ಟ್ರ ಧ್ವಜಾರೋಹಣಕ್ಕೆ ಹೊರಟಿದ್ದ ರೈಲನ್ನು ತಡೆದು ವಾಪಸ್ ಕಳಿಸಿರುವ ಮಹಾರಾಷ್ಟ್ರ ಸರ್ಕಾರದ ಧೋರಣೆ ಖಂಡನೀಯ. ಸಾವಿರಾರು ಕಾರ್ಯಕರ್ತರು ವಿಶೇಷ ರೈಲಿನಲ್ಲಿ ಶ್ರೀನಗರದ ಲಾಲ್ಚೌಕ್ನಲ್ಲಿ ದೇಶದ ಧ್ವಜ ಹಾರಿಸಲು ಹೊರಟಿದ್ದರೇ ಹೊರತು, ಯಾವುದೋ ಪಕ್ಷದ ಧ್ವಜವನ್ನಲ್ಲ. ಇದು ಪ್ರತಿಯೊಬ್ಬ ಭಾರತೀಯನ ಹಕ್ಕು.ಈ ನಿಟ್ಟಿನಲ್ಲಿ ಧ್ವಜಾರೋಹಣಕ್ಕೆ ಹೊರಟವರನ್ನು ತಡೆದಿರುವುದು ಅಕ್ಷಮ್ಯ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಾಶ್ಮೀರವನ್ನು ಮತ್ತೊಂದು ಪಾಕಿಸ್ತಾನ ಮಾಡುವಂತಹ ಶಕ್ತಿಗಳ ಒತ್ತಡಕ್ಕೆ ಮಣಿದು, ಕೇಂದ್ರ ಸರ್ಕಾರ ಈ ರೀತಿ ವರ್ತಿಸುತ್ತಿರುವುದು ವಿಷಾದದ ಸಂಗತಿ ಎಂದು ಆರೋಪಿಸಿದ ಕಾರ್ಯಕರ್ತರು, ಪ್ರತ್ಯೇಕತಾವಾದಿಗಳ ಪರವಾದ ನಿಲುವು ತಳೆಯುವ ಮೂಲಕ ಇಡೀ ದೇಶದ ಜನತೆಗೆ ಕೇಂದ್ರ ಸರ್ಕಾರ ಅನ್ಯಾಯ ಮಾಡುತ್ತಿದೆ ಎಂದು ದೂರಿದರು.
‘ಏಕತಾ ಯಾತ್ರೆ’ ವಿಶೇಷ ರೈಲಿಗೆ ಯುವಮೋರ್ಚಾ ಕಾರ್ಯಕರ್ತರು 58ಲಕ್ಷ ರೂ ಹಣ ಪಾವತಿಸಿದ್ದು, ಧ್ವಜಾರೋಹಣ ಮಾಡುವ ಸಂಕಲ್ಪ ತೊಟ್ಟು ಹೋಗುತ್ತಿದ್ದವರನ್ನು ಮಹಾರಾಷ್ಟ್ರ ಸರ್ಕಾರ ವಾಪಸ್ ಕಳುಹಿಸುವ ಔಚಿತ್ಯ ಏನಿತ್ತು? ಇದರ ಹಿಂದೆ ಓಲೈಕೆ ರಾಜಕಾರಣ ಇರುವುದು ಸ್ಪಷ್ಟವಾಗುತ್ತದೆ ಎಂದು ಆರೋಪಿಸಿದರು.ಇದೇ ಸಂದರ್ಭದಲ್ಲಿ ನಗರಕ್ಕೆ ಹಿಂತಿರುಗಿದ ಯುವ ಮೋರ್ಚಾ ಕಾರ್ಯಕರ್ತರನ್ನು ಸ್ವಾಗತಿಸಲಾಯಿತು.