ಶಿಡ್ಲಘಟ್ಟ: ಮುಂಬರುವ ದಿನಮಾನಗಳಲ್ಲಿ ರಾಗಿ, ತೊಗರಿಗೆ ಉತ್ತಮ ದರ ಸಿಗಲಿದೆ. ಅವುಗಳತ್ತ ರೈತರು ಗಮನ ನೀಡುವಂತೆ ಬೆಂಗಳೂರು ಗಾಂಧಿ ಕೃಷಿ ವಿಶ್ವವಿದ್ಯಾಲಯದ ಪ್ರೊ.ಕೆ.ಜಗದೀಶ್ವರ್ ಸಲಹೆ ನೀಡಿದರು.
ಸಮಗ್ರ ಬೇಸಾಯ ಪದ್ಧತಿ ಯೋಜನೆಯಡಿ ತಾಲ್ಲೂಕಿನ ಬೈಯಪ್ಪನಹಳ್ಳಿ ಗ್ರಾಮದಲ್ಲಿ ಬುಧವಾರ ಬಿತ್ತನೆ ಬೀಜಗಳ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಈಗಾಗಲೇ ಕಾಲಕ್ಕೆ ಸರಿಯಾಗಿ ಮಳೆಯಾಗದೆ ರೈತರು ಸಂಕಷ್ಟಕ್ಕೆ ಈಡಾಗುತ್ತಿದ್ದಾರೆ. ಕೃಷಿ ಉತ್ಪನ್ನಗಳನ್ನು ಹೆಚ್ಚುಮಾಡುವ ಕೂರಿಗೆ ಬಿತ್ತನೆ ಕಾರ್ಯದ ಬಗ್ಗೆ ತಿಳಿವಳಿಕೆ ನೀಡಬೇಕು. ಅದಕ್ಕಾಗಿ ಕೇಂದ್ರ ಸರ್ಕಾರದ ಯೋಜನೆಯಡಿ ಅನುದಾನ ಉಪಯೋಗಿಸಿಕೊಂಡು ಪರಿಶಿಷ್ಟ ಜಾತಿಯ ರೈತರಿಗೆ 5 ಕೆಜಿ ರಾಗಿ, ಮತ್ತು 2 ಕೆಜಿ ತೊಗರಿ ಬಿತ್ತನೆ ಬೀಜವನ್ನು ಪ್ರತಿ ಎಕರೆಗೆ ನೀಡಲಾಗುತ್ತಿದೆ ಎಂದರು.
`ರೈತರು ಪಡೆದುಕೊಂಡ ಬಿತ್ತನೆ ಬೀಜಗಳನ್ನು ಸಾಮೂಹಿಕವಾಗಿ ನಾಟಿ ಮಾಡಬೇಕು. ಸಾಲು ಪದ್ಧತಿಯಲ್ಲಿ ಕೂರಿಗೆಯನ್ನು ಬಳಕೆ ಮಾಡಿಕೊಂಡು ನಾಟಿ ಮಾಡುವುದರಿಂದ ಕಡಿಮೆ ವೆಚ್ಚದಲ್ಲಿ ಹೆಚ್ಚು ಉತ್ಪಾದನೆ ಮಾಡಬಹುದು~ ಎಂದು ಹೇಳಿದರು.
ಈ ಯೋಜನೆಗೆ ರೈತರಿಂದ ಹಣವನ್ನು ಪಡೆಯುವುದಿಲ್ಲ. ಯಾರೂ ಮಧ್ಯವರ್ತಿಗಳ ಹತ್ತಿರ ಹಣಕ್ಕಾಗಿ ಮೋಸಹೋಗಬಾರದು~ ಎಂದು ತಿಳಿಸಿದರು. ದಿಬ್ಬೂರಹಳ್ಳಿ, ತಿಮ್ಮನಾಯಕನಹಳ್ಳಿ, ಮದ್ದೆೀನಹಳ್ಳಿ, ಬೈಯಪ್ಪನಹಳ್ಳಿ, ಶೆಟ್ಟಿಗೆರೆ, ದಡಂಘಟ್ಟ, ದೊಡ್ಡತೇಕಹಳ್ಳಿ, ಚೆಂದಗಾನಹಳ್ಳಿ, ಗ್ರಾಮಗಳ ಪರಿಶಿಷ್ಟ ಜಾತಿ ರೈತರಿಗೆ ಬಿತ್ತನೆ ಬೀಜಗಳನ್ನು ವಿತರಣೆ ಮಾಡಲಾಯಿತು.
ಅಧಿಕಾರಿಗಳಾದ ಕಂಬದಹಳ್ಳಿ ಕದಿರಪ್ಪ, ಜಿ.ಕೆ.ವಿ.ಕೆ.ನಾಗರಾಜು, ಮಧುಕಿರಣ್, ತಾ.ಪಂ.ಸದಸ್ಯ ರಾಜಣ್ಣ, ನಿವೃತ್ತ ಶಿಕ್ಷಕ ಕೇಶವಾರ ತಿರುಮಳಪ್ಪ, ಮುಖಂಡರಾದ ಬಿ.ಜೆ.ಗಣೇಶ್, ವೆಂಕಟರೆಡ್ಡಿ, ಸೀತರೆಡ್ಡಿ, ಮುನಿರಾಜು, ದ್ಯಾವಪ್ಪ ಹಾಜರಿದ್ದರು.