ಬೆಂಗಳೂರು: ಕರ್ನಾಟಕ ಸೇರಿದಂತೆ ದೇಶದ ಎಲ್ಲ ರಾಜ್ಯಗಳಲ್ಲಿಯೂ ಏಕರೂಪ ನೀತಿಯಡಿ ಪೆಟ್ರೋಲ್-ಡೀಸೆಲ್ ದರ ನಿಗದಿಪಡಿಸುವಂತೆ ಸಾರಿಗೆ ಹಾಗೂ ಗೃಹ ಸಚಿವ ಆರ್. ಅಶೋಕ ಗುರುವಾರ ಇಲ್ಲಿ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದರು.
ಬಿಬಿಎಂಪಿಯ ಹನ್ನೊಂದು ಸ್ಥಾಯಿ ಸಮಿತಿಗಳ ಅಧ್ಯಕ್ಷರ ಕಚೇರಿಗಳ ವಿಶೇಷ ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಂಡ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
`ಪೆಟ್ರೋಲ್ ಹಾಗೂ ಡೀಸೆಲ್ ದರ ಒಂದೊಂದು ರಾಜ್ಯದಲ್ಲಿ ಒಂದೊಂದು ರೀತಿಯಿದೆ. ಹಾಗಾಗಿ, ಪೆಟ್ರೋಲ್-ಡೀಸೆಲ್ ದರದಲ್ಲಿ ರಾಜ್ಯ ರಾಜ್ಯಗಳಿಗೂ ವ್ಯತ್ಯಾಸ ಕಂಡು ಬರುತ್ತಿದೆ. ಹೀಗಾಗಿ, ದೇಶವ್ಯಾಪಿ ಏಕರೂಪ ನೀತಿಯಡಿ ಪೆಟ್ರೋಲ್- ಡೀಸೆಲ್ ದರ ನಿಗದಿಪಡಿಸಲು ಕೇಂದ್ರಕ್ಕೆ ನಾಲ್ಕು ಬಾರಿ ಪತ್ರ ಬರೆದಿದ್ದರೂ ಯಾವುದೇ ಪ್ರಯೋಜನವಾಗಿಲ್ಲ~ ಎಂದು ಅವರು ವಿಷಾದಿಸಿದರು.
ನೆರೆಯ ಗೋವಾದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಸೆಸ್ ಕಡಿಮೆಯಿರುವ ಬಗ್ಗೆ ಗಮನಸೆಳೆದು ರಾಜ್ಯದಲ್ಲಿಯೂ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಸೆಸ್ ಕಡಿಮೆ ಮಾಡುತ್ತೀರಾ ಎಂಬ ಪ್ರಶ್ನೆಗೆ, `ಕಾದು ನೋಡಿ~ ಎಂದಷ್ಟೇ ಸಚಿವರು ಪ್ರತಿಕ್ರಿಯಿಸಿದರು.