ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏಕರೂಪ ಶಿಕ್ಷಣ ಜಾರಿಗೆ ಬರಲಿ

Last Updated 1 ಜುಲೈ 2012, 8:05 IST
ಅಕ್ಷರ ಗಾತ್ರ

ಚನ್ನಗಿರಿ: ಸರ್ಕಾರ ಏಕರೂಪ ಶಿಕ್ಷಣವನ್ನು ಜಾರಿಗೆ ತಂದರೆ ಮಾತ್ರ ಶಿಕ್ಷಣದಲ್ಲಿ ಬದಲಾವಣೆ ಸಾಧ್ಯ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಸಾಹಿತಿ ರಾಘವೇಂದ್ರ ಪಾಟೀಲ್ ಅಭಿಪ್ರಾಯ ವ್ಯಕ್ತಪಡಿಸಿದರು.
ಪಟ್ಟಣದ ಹಾಲಸ್ವಾಮಿ ಸಮುದಾಯ ಭವನದಲ್ಲಿ ಶನಿವಾರ ನಡೆದ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಘಟಕದ ನೂತನ ಪದಾಧಿಕಾರಿಗಳ ಪದಗ್ರಹಣ ಹಾಗೂ ವಾರ್ಷಿಕ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಒಂದನೇ ತರಗತಿಯಿಂದ ಇಂಗ್ಲಿಷ್ ಕಲಿಸಿದರೆ ತಪ್ಪಿಲ್ಲ. ಆದರೆ, ಖಾಸಗಿ ಶಾಲೆಗಳನ್ನು ಮುಚ್ಚಿ ಸರ್ಕಾರಿ ಶಾಲೆಗಳಲ್ಲಿ ಏಕರೂಪ ಶಿಕ್ಷಣ ಜಾರಿಗೆ ತಂದರೆ ಶಿಕ್ಷಣದ ಪ್ರಗತಿ ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ಸರ್ಕಾರ ಯೋಚಿಸಬೇಕಾಗಿದೆ ಎಂದರು.

ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಮಾತನಾಡಿ, ಇಂಗ್ಲಿಷ್ ಮಾಧ್ಯಮದ ಶಾಲೆಗಳನ್ನು ಪ್ರಾರಂಭಿಸಲು ವಿರೋಧಿಸಿದ ಸಾಹಿತಿಗಳು ಮಾತ್ರ ತಮ್ಮ ಮಕ್ಕಳನ್ನು ಇಂಗ್ಲಿಷ್ ಶಾಲೆಗಳಲ್ಲಿ ಓದಿಸುತ್ತಿರುವುದು ಸರಿಯೇ? ಎಲ್ಲಾ ಭಾಷೆಗಳ ಜ್ಞಾನ ನಮಗೆ ಬೇಕು. ಆದರೆ, ಕನ್ನಡ ಭಾಷೆಗೆ ಕುತ್ತು ಬಂದಾಗ ಹೋರಾಟ ಮಾಡುವ ಮನೋಭಾವನೆ ನಮ್ಮದಾಗಬೇಕು ಎಂದರು.

ಕವಿ ಪ್ರೊ.ಚಂದ್ರಶೇಖರ್ ತಾಳ್ಯ ಮಾತನಾಡಿದರು.ತಾಲ್ಲೂಕು ಕನ್ನಡ ಸಾಹಿತ್ಯ  ಪರಿಷತ್‌ನ ನಿಕಟಪೂರ್ವ ಅಧ್ಯಕ್ಷ ಎಸ್. ಶಂಕರಪ್ಪ ನೂತನ ಅಧ್ಯಕ್ಷರಾದ ಓ.ಎಸ್. ನಾಗರಾಜ್ ಅವರಿಗೆ ಪರಿಷತ್‌ನ ಬಾವುಟ ನೀಡುವ ಮೂಲಕ ಅಧಿಕಾರ ಹಸ್ತಾಂತರಿಸಿದರು.

ಪತ್ರಕರ್ತ ಜಿ. ಸುರೇಶ್‌ಗೌಡ, ಜಿಲ್ಲಾ ಪರಿಷತ್ ಗೌರವ ಕಾರ್ಯದರ್ಶಿ  ಎಚ್. ಮಲ್ಲಿಕಾರ್ಜುನ್, ಕೋಶಾಧ್ಯಕ್ಷ ಎಂ.ಪಿ. ಚಂದ್ರಪ್ಪ, ಸಲಹಾ ಸಮಿತಿ ಸದಸ್ಯ ಎಂ. ಮಲ್ಲೇಶಪ್ಪ, ಪಟ್ಟಣ ಪಂಚಾಯ್ತಿ ಸದಸ್ಯ ಕೆ.ಪಿ.ಎಂ. ಶಿವಲಿಂಗಯ್ಯ ಉಪಸ್ಥಿತರಿದ್ದರು. ಪ್ರಿಯಾಂಕಾ ಪ್ರಾರ್ಥಿಸಿದರು. ಕೆ. ಸಿರಾಜ್ ಅಹಮದ್ ಸ್ವಾಗತಿಸಿದರು. ಅಣ್ಣೋಜಿರಾವ್ ಪವಾರ್ ಕಾರ್ಯಕ್ರಮ ನಿರೂಪಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT