ಮಡಿಕೇರಿ: ರಾಜ್ಯದಾದ್ಯಂತ ಏಕರೂಪ ಸಮಾನ ಶಿಕ್ಷಣ ನೀತಿಯನ್ನು ಜಾರಿಗೆ ತರುವಂತೆ ಆಗ್ರಹಿಸಿ ಜಯ ಕರ್ನಾಟಕ ವೇದಿಕೆಯ ವತಿಯಿಂದ ಹಮ್ಮಿಕೊಂಡಿರುವ ಜಾಗೃತಿ ಆಂದೋಲನ ರಥ ಯಾತ್ರೆ ಬುಧವಾರ ನಗರಕ್ಕೆ ಆಗಮಿಸಿತ್ತು.
ನಗರದ ಎ.ವಿ. ಶಾಲೆಯಿಂದ ಹೊರಟ ಜಾಗೃತಿ ರಥಯಾತ್ರೆ ಇಲ್ಲಿನ ವಿವಿಧ ರಸ್ತೆಯಲ್ಲಿ ತೆರಳಿದ ಜನರಲ್ ತಿಮ್ಮಯ್ಯ ವೃತ್ತದ ಬಳಿ ಜನರನ್ನು ಉದ್ದೇಶಿ ಸಂಘಟಟನೆಯ ಪ್ರಮುಖರು ಮಾತನಾಡಿದರು.
ರಾಜ್ಯದಾದ್ಯಂತ ಏಕರೂಪ ಶಿಕ್ಷಣ ಜಾರಿಗ ತಂದು ಕನ್ನಡ ಮಾಧ್ಯಮವನ್ನು ಬಲಿಷ್ಠಗೊಳಿಸುವ ನಿಟ್ಟಿನಲ್ಲಿ ಪ್ರಾಥಮಿಕ ಶಾಲಾ ಹಂತದಲ್ಲಿ ಕನ್ನಡ ಶಿಕ್ಷಣವನ್ನು ಕಡ್ಡಾಯಗೊಳಿಸಬೇಕು ಎಂದು ಆಗ್ರಹಿಸಿದರು.
ಕೃಷಿ ಕ್ಷೇತ್ರದ ಹಿತದೃಷ್ಟಿಯಿಂದ ಪೂರಕವಾದ ಪ್ರೌಢಶಿಕ್ಷಣ ಹಂತದಿಂದ ಕೃಷಿ ಪಠ್ಯಕ್ರಮ ಅಳವಡಿಸಸಬೇಕು. ಸರ್ಕಾರಿ ಶಾಲೆಗಳಲ್ಲಿ ಮೂಲ ಸೌಕರ್ಯ ಒದಗಿಸುವಂತೆ ಅವರು ಒತ್ತಾಯಿಸಿದರು.
ಏಕರೂಪ ಶಿಕ್ಷಣ ಜಾರಿಮಾಡುವಂತೆ ಒತ್ತಾಯಿಸಿ ಸಂಘಟನೆ ಸೆ.11 ರಿಂದ ಬೆಂಗಳೂರಿನಿಂದ ಈ ಕುರಿತು ಜಾಗೃತಿ ಕಾರ್ಯಕ್ರಮ ಆರಂಭಿಸಿದ್ದು, ರಾಜ್ಯದಾದ್ಯಂತ ಈ ಜಾಗೃತಿ ರಥಯಾತ್ರೆ ಸಂಚರಿಸಲಿದೆ ಎಂದರು.
ಬಳಿಕ ಜಿಲ್ಲಾಧಿಕಾರಿ ಅನುರಾಗ್ ತಿವಾರಿ ಅವರ ಮೂಲಕ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಿದರು. ನಂತರ ಕುಶಾಲನಗರಕ್ಕೆ ಈ ಜಾಥಾ ತೆರಳಿತು. ಸಂಘಟನೆಯ ಕೊಡಗು ಜಿಲ್ಲಾಧ್ಯಕ್ಷ ಎಂ.ಡಿ. ರಾಬಿನ್ ಕುಟ್ಟಪ್ಪ, ರಾಜ್ಯಾ ಉಪಾಧ್ಯಕ್ಷ ಹಾಗೂ ಕೊಡಗು ಉಸ್ತುವಾರಿ ಎಸ್. ನಾರಾಯಣ್, ರಾಜ್ಯ ಕಾರ್ಯದರ್ಶಿ ಪ್ರಕಾಶ್ ರೈ, ಮಡಿಕೇರಿ ತಾಲ್ಲೂಕು ಅಧ್ಯಕ್ಷ ನಾಣಯ್ಯ, ವಿರಾಜಪೇಟೆ ತಾಲ್ಲೂಕು ಅಧ್ಯಕ್ಷ ಅನಿಲ್ ಅಯ್ಯಪ್ಪ, ಸೋಮವಾರಪೇಟೆ ತಾಲ್ಲೂಕು ಅಧ್ಯಕ್ಷ ಶಬೀರ್ ಖಾನ್ ಹಾಜರಿದ್ದರು.