ಬೆಂಗಳೂರು: ಏಕಲವ್ಯ ಪ್ರಶಸ್ತಿ ವಿವಾದಕ್ಕೆ ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಯ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ ಎಂದು ಕರ್ನಾಟಕ ಒಲಿಂಪಿಕ್ ಸಂಸ್ಥೆ ಅಧ್ಯಕ್ಷ ಕೆ.ಗೋವಿಂದರಾಜ್ ಆರೋಪಿಸಿದ್ದಾರೆ.
`ಇಲಾಖೆ ಅಧಿಕಾರಿಗಳು ಏಕಾಏಕಿ ಮೂರು ಮಂದಿ ಹೆಸರನ್ನು ಕೈಬಿಟ್ಟು ಈಗ ವಿಚಾರಣೆ ನಡೆಸುತ್ತಿದ್ದಾರೆ. ಅದು ಪ್ರಶಸ್ತಿಯ ಆಯ್ಕೆ ಸಮಿತಿ ಗಮನಕ್ಕೆ ಬಂದಿಲ್ಲ. ಈ ಸಮಿತಿಯಲ್ಲಿ ಕೆಒಎನ ಇಬ್ಬರು ಸದಸ್ಯರು ಇದ್ದಾರೆ. ಆದರೆ ಇಲಾಖೆಯ ಅಧಿಕಾರಿಗಳೇ ದರ್ಬಾರ್ ನಡೆಸುತ್ತಿದ್ದಾರೆ. ಈ ಬಗ್ಗೆ ಮತ್ತೆ ಆಯ್ಕೆ ಸಮಿತಿ ಸಭೆ ನಡೆಸಿ ಚರ್ಚಿಸಬೇಕು. ಮುಖ್ಯಮಂತ್ರಿಗಳು ಮಧ್ಯ ಪ್ರವೇಶಿಸಿ ತಪ್ಪಿಗೆ ಕಾರಣರಾದವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು~ ಎಂದು ಅವರು ಆಗ್ರಹಿಸಿದ್ದಾರೆ.
ಆದರೆ ಈ ಸಂಬಂಧ ಪ್ರತಿಕ್ರಿಯೆ ನೀಡಿರುವ ಇಲಾಖೆಯ ಪ್ರಧಾನ ಕಾರ್ಯದರ್ಶಿ ಐ.ಆರ್.ಪೆರುಮಾಳ್, `ಸರ್ಕಾರದ ನಿಯಮದ ಪ್ರಕಾರ ಪರಿಶೀಲನಾ ಸಮಿತಿ ಸಭೆಗೆ ಕ್ರೀಡಾ ಸಂಸ್ಥೆಗಳ ಪದಾಧಿಕಾರಿಗಳನ್ನು ಆಹ್ವಾನಿಸುವಂತಿಲ್ಲ. ನಾವು ಈ ಮೊದಲು ನಡೆಸಿದ ಸಭೆಗಳಿಗೆ ಕೆಒಎನ ಇಬ್ಬರು ಸದಸ್ಯರು ಬಂದಿರಲಿಲ್ಲ~ ಎಂದಿದ್ದಾರೆ.