ದೊಡ್ಡಬಳ್ಳಾಪುರ: ಏಡ್ಸ್ ತಡೆಗಟ್ಟುವಲ್ಲಿ ಯುವಜನರ ಪಾತ್ರ ಮಹತ್ವದ್ದಾಗಿದ್ದು, ಏಡ್ಸ್ ಕುರಿತ ತಪ್ಪು ಕಲ್ಪನೆ ಹೋಗಲಾಡಿಸಲು ಜಾಗೃತಿ ಅವಶ್ಯಕ ಎಂದು ಜಿಲ್ಲಾ ಏಡ್ಸ್ ತಡೆ ಮತ್ತು ನಿಯಂತ್ರಣ ಸೊಸೈಟಿ ಜಿಲ್ಲಾ ಮೇಲ್ವಿಚಾರಕ ಹನುಮಂತರಾಯ ಹೇಳಿದರು.
ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಜಿಲ್ಲಾ ಏಡ್ಸ್ ನಿಯಂತ್ರಣ ಸೊಸೈಟಿ ಹಾಗೂ ಕರ್ನಾಟಕ ರಾಜ್ಯ ರಕ್ತಚಾಲನಾ ಪರಿಷತ್ತಿನ ಸಹಯೋಗದಲ್ಲಿ ಇತ್ತೀಚೆಗೆ ನಡೆದ ಅಂತರ ಕಾಲೇಜು ವಿಚಾರ ಸಂಕಿರಣದಲ್ಲಿ ಏಡ್ಸ್ ನಿಯಂತ್ರಣ ಮತ್ತು ರಕ್ತದಾನದ ಮಹತ್ವ ಕುರಿತು ಮಾತನಾಡಿದರು.
ವೈಜ್ಞಾನಿಕ ಆವಿಷ್ಕಾರಗಳಾಗಿದ್ದರೂ ಕೃತಕ ರಕ್ತ ಸೃಷ್ಟಿಸಲು ಸಾಧ್ಯವಾಗಿಲ್ಲ. ರಕ್ತವನ್ನು ರಕ್ತದಾನದಿಂದ ಮಾತ್ರ ಪಡೆಯಬಹುದಾಗಿದೆ.
ಆರೋಗ್ಯವಂತರಾದ 18 ರಿಂದ 60 ವರ್ಷದೊಳಗಿನವರು ರಕ್ತದಾನ ಮಾಡಲು ಹಿಂಜರಿಯುವ ಅಗತ್ಯ ಇಲ್ಲ. ರಕ್ತದಾನ ನೀಡಿದ 24 ಗಂಟೆಯಲ್ಲಿ ಅಷ್ಟೆ ಪ್ರಮಾಣದ ರಕ್ತ ದೇಹದಲ್ಲಿ ಉತ್ಪತ್ತಿಯಾಗಲಿದೆ. ಈ ದಿಸೆಯಲ್ಲಿ ಯುವಕರು ರಕ್ತದಾನ ಮಾಡಿ ಜೀವಗಳನ್ನು ಉಳಿಸಲು ಕಾರ್ಯ ಪ್ರವೃತ್ರರಾಗಬೇಕು ಎಂದರು.
ಪ್ರಾಂಶುಪಾಲ ಎಸ್.ಪಿ.ರಾಜಣ್ಣ ಅಧ್ಯಕ್ಷತೆವಹಿಸಿದ್ದರು. ಎನ್ಎಸ್ಎಸ್ ಅಧಿಕಾರಿ ಎನ್.ಶ್ರೀನಿವಾಸಯ್ಯ, ಉಪನ್ಯಾಸಕ ಸಿ.ರಾಮಚಂದ್ರ ಾಜರಿದ್ದರು.
ಸ್ಪರ್ಧೆ: ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ, ಜಿಲ್ಲಾ ಏಡ್ಸ್ ತಡೆ ಮತ್ತು ನಿಯಂತ್ರಣ ಸೊಸೈಟಿ ಹಾಗೂ ಕರ್ನಾಟಕ ರಾಜ್ಯ ರಕ್ತಚಾಲನಾ ಪರಿಷತ್ತಿನ ಸಹಯೋಗದಲ್ಲಿ ಮಂಗಳವಾರ ಅಂತರ ಕಾಲೇಜು ಭಾಷಣ ಸ್ಪರ್ಧೆ, ಪ್ರಬಂಧ ಸ್ಪರ್ಧೆ, ಸ್ಪರ್ಧಾ ಪರೀಕ್ಷೆಗಳು ನಡೆಯಲಿದೆ ಎಂದು ಪ್ರಾಂಶುಪಾಲ ಪ್ರೊ.ಎಸ್.ಪಿ.ರಾಜಣ್ಣ ತಿಳಿಸಿದ್ದಾರೆ.