ವಿಜಾಪುರ: `ರಾಜ್ಯದ ಅತಿ ಹೆಚ್ಚು ಎಚ್.ಐ.ವಿ. ಸೋಂಕಿತರ ಸಾಲಿನಲ್ಲಿ ವಿಜಾಪುರ ಜಿಲ್ಲೆಯೂ ಒಂದಾಗಿದೆ. ಜಿಲ್ಲೆಯಲ್ಲಿ ವಿಜಾಪುರ ಮತ್ತು ಬಸವನ ಬಾಗೇವಾಡಿ ತಾಲೂಕಿನಲ್ಲಿ ಈ ಸೋಂಕಿನಿಂದ ಬಳಲುತ್ತಿರುವವರ ಸಂಖ್ಯೆ ಹೆಚ್ಚಿದೆ~ ಎಂದು ಜಿಲ್ಲಾಧಿಕಾರಿ ಶಿವಯೋಗಿ ಕಳಸದ ಹೇಳಿದರು.
ಎಚ್.ಐ.ವಿ. ಸೋಂಕಿಗೆ 15ರಿಂದ 49 ವರ್ಷದ ವಯೋಮಾನದವರು ಹೆಚ್ಚು ಬಲಿಯಾಗುತ್ತಿದ್ದಾರೆ. ರಾಜ್ಯದಲ್ಲಿ 2.5ಲಕ್ಷ ಜನ ಎಚ್.ಐ.ವಿ. ಸೋಂಕಿನಿಂದ ಬಳಲುತ್ತಿದ್ದು, ಆ ಪೈಕಿ ಜಿಲ್ಲೆಯಲ್ಲಿ 17,208 ಜನರಿದ್ದಾರೆ ಎಂದು ಶುಕ್ರವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಕರ್ನಾಟಕ ರಾಜ್ಯ ಏಡ್ಸ್ ಪ್ರತಿಬಂಧಕ ಹಾಗೂ ನಿಯಂತ್ರಣ ಘಟಕದ ಸಂಪನ್ಮೂಲ ಅಧಿಕಾರಿ ಡಾ. ಸಾಹುಕಾರ ಮಾತನಾಡಿ, `ವಿಜಾಪುರ ಜಿಲ್ಲೆಯಲ್ಲಿ 2011ರ ಏಪ್ರಿಲ್ನಿಂದ ಡಿಸೆಂಬರ್ವರೆಗೆ 2.34 ಲಕ್ಷ ಜನ ಎಚ್.ಐ.ವಿ. ಪರೀಕ್ಷೆ ಮಾಡಿಸಿಕೊಂಡಿದ್ದಾರೆ. ಅವರಲ್ಲಿ ಶೇ. 5.70ರಷ್ಟು ಪುರುಷರು ಹಾಗೂ 4.24 ರಷ್ಟು ಮಹಿಳೆಯರಲ್ಲಿ ಎಚ್.ಐ.ವಿ. ಸೋಂಕು ಪತ್ತೆಯಾಗಿದೆ. 6217 ಜನರು ಎ.ಆರ್.ಟಿ. ಕೇಂದ್ರದ ಸಹಾಯ ಪಡೆಯುತ್ತಿದ್ದಾರೆ~ ಎಂದರು.
ಜಿಲ್ಲಾ ಏಡ್ಸ್ ಪ್ರತಿಬಂಧಕ ಹಾಗೂ ನಿಯಂತ್ರಣ ಘಟಕದ ಸಹಯೋಗದಲ್ಲಿ ಇದೇ 6ರಿಂದ 11ರ ವರೆಗೆ ವಿಜಾಪುರ ಮತ್ತು ಬಸವನ ಬಾಗೇವಾಡಿ ತಾಲ್ಲೂಕುಗಳಲ್ಲಿ ಎಚ್.ಐ.ವಿ. ಬಗ್ಗೆ ಅರಿವು ಮೂಡಿಸುವ ವಿಶೇಷ ಆಂದೋಲನ ನಡೆಸಲಾಗುತ್ತಿದೆ. ಜಿಲ್ಲೆಯಲ್ಲಿ ಎಚ್.ಐ.ವಿ. ತಪಾಸಣೆ ಮಾಡಿಸಿಕೊಳ್ಳುವವರ ಪ್ರಮಾಣ ಶೇ.5ರಷ್ಟು ಮಾತ್ರವಿದ್ದು, ಎಲ್ಲರೂ ಸ್ವಯಂ ಪ್ರೇರಿತರಾಗಿ ಈ ತಪಾಸಣೆ ಮಾಡಿಸಿಕೊಳ್ಳಲು ಅರಿವು ಮೂಡಿಸಲಾಗುವುದು ಎಂದರು.
ಇದೇ ಸಂದರ್ಭದಲ್ಲಿ ಅವರು ಪ್ರಚಾರ ಸಾಮಗ್ರಿ ಬಿಡುಗಡೆಮಾಡಿದರು.ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ವಿಶ್ವನಾಥ ಗಲಗಲಿ, ಜಿಲ್ಲಾ ಏಡ್ಸ ನಿಯಂತ್ರಣಾಧಿಕಾರಿ ಡಾ.ಹಡಗಲಿ, ಎ.ಆರ್.ಟಿ. ಕೇಂದ್ರದ ರವಿ ಕಿತ್ತೂರ ಪತ್ರಿಕಾಗೋಷ್ಠಿಯಲ್ಲಿದ್ದರು.