ಲಿಂಗಸುಗೂರು: ಈ ಭಾಗದ ರೈತರ ಬಹು ವರ್ಷಗಳ ಕನಸಾದ ನಂದವಾಡಗಿ ಏತ ನೀರಾವರಿ ಯೋಜನೆ ಅನುಷ್ಠಾನಕ್ಕೆ ಆಗ್ರಹಿಸಿ ಮೂರು ದಿನಗಳಿಂದ ನಡೆಯುತ್ತಿರುವ ಪಾದಯಾತ್ರೆಗೆ ಭಾರಿ ಪ್ರಮಾಣದ ಜನಬೆಂಬಲ ದೊರೆಯುತ್ತಿರುವುದು ಹೋರಾಟದ ಯಶಸ್ಸಿನ ಸಂಕೇತ ಎಂದು ಸಂತೆಕೆಲ್ಲೂರಿನ ಗುರುಬಸವ ಸ್ವಾಮೀಜಿ ಅಭಿಪ್ರಾಯಪಟ್ಟರು.ಪಾದಯಾತ್ರೆ ಶನಿವಾರ ತಾಲ್ಲೂಕಿನ ಮಾವಿನಭಾವಿ ಗ್ರಾಮಕ್ಕೆ ಆಗಮಿಸಿದಾಗ ಮಾತನಾಡಿದ ಅವರು, “ಬಾಗಲಕೋಟೆ ಜಿಲ್ಲೆಯ ಹುನಗುಂದ, ರಾಯಚೂರು ಜಿಲ್ಲೆಯ ಲಿಂಗಸುಗೂರ ಮತ್ತು ಮಾನ್ವಿ ತಾಲ್ಲೂಕಿನ 40ಕ್ಕೂ ಹೆಚ್ಚು ಗ್ರಾಮಗಳ 53ಸಾವಿರಕ್ಕೂ ಅಧಿಕ ಹೆಕ್ಟೇರ್ ಜಮೀನಿಗೆ ನೀರು ಹರಿಸುವ ಮಹತ್ವಾಕಾಂಕ್ಷಿ ಯೋಜನೆ ಇದಾಗಿದೆ. ಮುಖ್ಯಮಂತ್ರಿಗಳು ಪ್ರಸಕ್ತ ಬಜೆಟ್ನಲ್ಲಿಯೇ ಇದಕ್ಕೆ ಅನುದಾನ ನೀಡಿ ಯೋಜನೆ ಅನುಷ್ಠಾನಕ್ಕೆ ಮುಂದಾಗಬೇಕು’ ಎಂದರು.
ಕರ್ನಾಟಕ ರಾಜ್ಯ ರೈತ ಸಂಘದ ಮುಖಂಡ ಅಮರಣ್ಣ ಗುಡಿಹಾಳ, ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷ ರಮೇಶ ಜೋಷಿ, ಎಚ್.ಬಿ. ಮುರಾರಿ, ರಮೇಶ ಶಾಸ್ತ್ರಿ, ಶರಣಗೌಡ ಬಸ್ಸಾಪುರ, ತಾಲ್ಲೂಕು ರೈತ ಸಂಘದ ಅಧ್ಯಕ್ಷ ಹನುಮಪ್ಪ ಯಡಹಳ್ಳಿ, ಮಾವಿನಭಾವಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಅಮರೇಶ ಮತ್ತಿತರರು ಪಾಲ್ಗೊಂಡಿದ್ದರು.