ಸಿರುಗುಪ್ಪ: ಬಾಗವಾಡಿ ಕಾಲುವೆಯ ಕೊನೆ ಭಾಗದ ಅಚ್ಚುಕಟ್ಟು ಪ್ರದೇಶಕ್ಕೆ ಪ್ರತ್ಯೇಕ ಏತ ನೀರಾವರಿ ಯೋಜನೆಗೆ ಒತ್ತಾಯಿಸಿ ರೈತ ಹೋರಾಟ ಸಮಿತಿಯ ಐದು ಜನ ರೈತರು ಇಲ್ಲಿಯ ತಾಲ್ಲೂಕು ಕಚೇರಿ ಮುಂದೆ ಗುರುವಾರದಿಂದ ಆಮರಣ ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾರೆ.
ಹೋರಾಟ ಸಮಿತಿಯ ಅಧ್ಯಕ್ಷ ಎನ್.ಮೋಹನ್ಕುಮಾರ್, ಪೊಪ್ಪನಹಾಳು ಗ್ರಾಮದ ರೈತ ಇ.ಕಾಳಿಂಗಪ್ಪ, ಗಜಿಗಿನಹಾಳು ಗ್ರಾಮದ ಎಸ್.ಬಸವನಗೌಡ, ಸಿರುಗುಪ್ಪದ ವೈ. ರಾಘವೇಂದ್ರ, ತೊಂಡೆಹಾಳು ಗ್ರಾಮದ ಎ.ಮಲ್ಲನಗೌಡ ಗುರುವಾರ ಮುಂಜಾನೆಯಿಂದ ಉಪವಾಸ ನಡೆಸಿದ್ದಾರೆ.
`ತುಂಗಭದ್ರಾ ಜಲಾಶಯದ ಎಲ್ಎಲ್ಸಿ ಮುಖ್ಯ ಕಾಲುವೆಯಿಂದ ಬಾಗವಾಡಿ ಉಪ ಕಾಲುವೆಯ 12,000 ಎಕರೆ ಜಮೀನುಗಳಿಗೆ ನೀರಾವರಿ ಸೌಲಭ್ಯ ಕಲ್ಪಿಸಿದ್ದು, ಕೊನೆ ಭಾಗದ 3,600 ಎಕರೆ ರೈತರ ಜಮೀನುಗಳಿಗೆ ಕಳೆದ 25 ವರ್ಷಗಳಿಂದ ಸಮರ್ಪಕ ನೀರು ದೊರೆಯದೇ ನೀರಾವರಿ ಸೌಲಭ್ಯದಿಂದ ವಂಚಿತರಾಗಿದ್ದೇವೆ. ಕಳೆದ ಮೂರು ವರ್ಷಗಳಿಂದ ಕಾಲುವೆಯಲ್ಲಿ ನೀರು ಬಾರದೇ ರೈತರು ಕಂಗಾಲಾಗಿದ್ದೇವೆ~ ಎಂದು ಉಪವಾಸ ನಿರತ ರೈತರು ಹೇಳಿದರು.