ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏಳು ತಿಂಗಳಲ್ಲಿ 385 ಅಪರಾಧ ಪ್ರಕರಣ!

ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಎಸ್‌.ಟಿ, ಎಸ್‌.ಸಿ ದೌರ್ಜನ್ಯ ದೂರು
Last Updated 14 ಸೆಪ್ಟೆಂಬರ್ 2013, 5:02 IST
ಅಕ್ಷರ ಗಾತ್ರ

ದಾವಣಗೆರೆ: ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಅಪರಾಧ ಪ್ರಕರಣಗಳು ನಾಗರಿಕರ ನಿದ್ದೆಗೆಡಿಸಿವೆ. ಅಪರಾಧ ಪ್ರಕರಣ ಹೆಚ್ಚುತ್ತಿರುವ ಬಗ್ಗೆ ಪೊಲೀಸ್‌ ಇಲಾಖೆ ಅಂಕಿ–ಅಂಶಗಳು ದೃಢೀಕರಿಸುತ್ತವೆ.

2011–12ನೇ ಸಾಲಿನ ಇಡೀ ವರ್ಷದಲ್ಲಿ ಇಡೀ ಜಿಲ್ಲೆಯಲ್ಲಿ ಒಟ್ಟು 363 ಅಪರಾಧ ಪ್ರಕರಣ ನಡೆದಿವೆ. ಆದರೆ, ಪ್ರಸಕ್ತ ವರ್ಷದ ಆಗಸ್ಟ್‌ವರೆಗೆ ಜಿಲ್ಲೆಯಲ್ಲಿ 385 ಅಪರಾಧ ಪ್ರಕರಣಗಳು ಘಟಿಸಿವೆ.

ಕಳೆದ ವರ್ಷದಲ್ಲಿ 1 ಡಕಾಯಿತಿ, 31 ದರೋಡೆ, 41 ಹಗಲು ಕಳವು, 100 ರಾತ್ರಿ ಕಳವು, 19 ಮನೆ ಕಳವು, 165 ಸಾಮಾನ್ಯ ಕಳವು ಹಾಗೂ 6 ಇತರ ಕಳವು ಪ್ರಕರಣಗಳು ಜಿಲ್ಲೆಯ ವಿವಿಧ ಪೊಲೀಸ್‌ ಠಾಣೆಯಲ್ಲಿ ದಾಖಲಾಗಿವೆ. ಈ ಪ್ರಕಣಗಳಿಂದಾಗಿ
ಒಟ್ಟು ` 34,37,5,384 ಅಷ್ಟು ನಗದು, ಆಭರಣ ನಷ್ಟ ನಾಗರಿಕರಿಗೆ ಆಗಿದೆ. ಈ ಪ್ರಕರಣಗಳ ತನಿಖೆ ನಡೆಸಿರುವ ಪೊಲೀಸ್‌ ಇಲಾಖೆ ವಿವಿಧ ಪ್ರಕರಣಗಳನ್ನು ಭೇದಿಸಿ ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸುವ ಮೂಲಕ ` 17,63,1,592
ಕೋಟಿ ಮೊತ್ತದ ನಗದು, ಆಭರಣ ಕಳೆದುಕೊಂಡವರಿಗೆ ಹಿಂದಿರುಗಿಸಿದೆ.

ಪ್ರಸಕ್ತ ವರ್ಷದ ಆಗಸ್ಟ್‌ ತಿಂಗಳಿನ ಅಂತ್ಯದವರೆಗಿನ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕಚೇರಿ ವರದಿ ಪ್ರಕಾರ 2 ಕೊಲೆ, 9 ಡಕಾಯಿತಿ ಪ್ರಕಣಗಳು ನಡೆದಿವೆ. 20 ದರೋಡೆ, 25 ಹಗಲು ದರೋಡೆ, 95 ರಾತ್ರಿ ಕಳವು, 23 ಮನೆ ಕಳವು, 186 ಸಾಮಾನ್ಯ ಕಳವು ಹಾಗೂ 17 ಇತರೆ ಅಪರಾಧ ಪ್ರಕರಣಗಳು ನಡೆದಿವೆ. ನಾಗರಿಕರಿಗೆ ಒಟ್ಟು ` 30,84,5,042 ಅಷ್ಟು ನಷ್ಟ ಸಂಭವಿಸಿದೆ. ಘಟಿಸಿರುವ 385 ಪ್ರಕರಣಗಳಲ್ಲಿ ಪೊಲೀಸ್‌ ಇಲಾಖೆ ಕೇವಲ 135 ಪ್ರಕರಣಗಳನ್ನು ಮಾತ್ರ ಭೇದಿಸಲು ಶಕ್ತವಾಗಿದೆ. ಹಾಗಾಗಿ, ` 96,58,823 ನಾಗರಿಕರ ನಷ್ಟ ಮರಳಿಸಿದೆ.

ದಾವಣಗೆರೆ ನಗರದಲ್ಲಿ ನಡೆದಿರುವ ಹಲವು ಸರಣಿ ಕಳವು ಪ್ರಕರಣಗಳನ್ನು ಪೊಲೀಸ್‌ ಇಲಾಖೆಗೆ ಇದುವರೆಗೂ ಭೇದಿಸಲು
ಆಗಿಲ್ಲ. ಆಗಸ್ಟ್‌ 7ರಂದು ನಗರದ ಶ್ರಮಜೀವಿ ಕಟ್ಟಡದಲ್ಲಿ ನಡೆದ ಸರಣಿ ಕಳವು ಪ್ರಕರಣ ನಡೆದು ಒಂದು ತಿಂಗಳಾದರೂ ಆರೋಪಿಗಳು ಪತ್ತೆಯಾಗಿಲ್ಲ. ಇಂತಹ ಅನೇಕ ಪ್ರಕರಣಗಳು ತನಿಖೆ ಹಂತದಲ್ಲೇ ಕಾಲ ತಳ್ಳುತ್ತಿರುವುದರಿಂದ ನಾಗರಿಕರು ಪೊಲೀಸ್‌ ಇಲಾಖೆ ಕಾರ್ಯ ವೈಖರಿಯನ್ನು ಪ್ರಶ್ನಿಸುವಂತಾಗಿದೆ.

ಹೆಚ್ಚುತ್ತಿರುವ ಎಸ್‌ಸ್ಸಿ, ಎಸ್‌ಟಿ ದೌರ್ಜನ್ಯ ಪ್ರಕರಣಗಳು!: ಜಿಲ್ಲೆಯಲ್ಲಿ ಪರಿಶಿಷ್ಟ ಜಾತಿ, ಪಂಗಡದ ಮೇಲಿನ ದೌರ್ಜನ್ಯ ಪ್ರಕರಣಗಳು ಹೆಚ್ಚುತ್ತಿದೆ. 1989ರ ಎಸ್‌ಸಿ/ಎಸ್‌ಟಿ ಪೊಲೀಸ್‌ ಕಾಯ್ದೆ ಅಡಿ ಈ ವರ್ಷದಲ್ಲಿ ಸುಮಾರು 30ಕ್ಕೂ ಹೆಚ್ಚು ಪ್ರಕರಣಗಳು ವಿವಿಧ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿವೆ. ಅವುಗಳಲ್ಲಿ 17 ಪ್ರಕರಣಗಳು ತನಿಖೆ ಹಂತದಲ್ಲಿವೆ. ಕೆಲವೊಂದು ಪ್ರಕರಣಗಳ ತನಿಖೆ ಪೂರ್ಣಗೊಂಡಿದ್ದು, ನ್ಯಾಯಾಲಯಕ್ಕೆ ದೋಷಾರೋಪಪಟ್ಟಿ ಸಲ್ಲಿಸಲಾಗಿದೆ ಎಂದು ಪೊಲೀಸ್ ಇಲಾಖೆ ಮೂಲಗಳು ‘ಪ್ರಜಾವಾಣಿ’ಗೆ ಮಾಹಿತಿ ನೀಡಿವೆ.

ಅಪರಾಧ ನಿಯಂತ್ರಣಕ್ಕೆ ಕ್ರಮ
ಜಿಲ್ಲೆಯಲ್ಲಿ ಅಪರಾಧ ಪ್ರಕರಣಗಳು ಹೆಚ್ಚುತ್ತಿರುವುದು ನನ್ನ ಗಮನಕ್ಕೆ ಬಂದಿದೆ. ಪ್ರಕರಣ ಹೆಚ್ಚಳಕ್ಕೆ ಅನೇಕ ಕಾರಣಗಳಿವೆ. ಹಿಂದೆ ಶುಲ್ಕ ವಿಧಿಸುತ್ತಿದ್ದರಿಂದ ಹಲವು ಪ್ರಕರಣಗಳು ದಾಖಲಾಗುತ್ತಿರಲಿಲ್ಲ. ಈಗ ಪ್ರಕರಣಗಳು ಹೆಚ್ಚಲು ಉಚಿತ ದಾಖಲಾತಿ ಒಂದು ಕಾರಣ ಎನ್ನಬಹುದು. ಜತೆಗೆ ನಮ್ಮ ಸಿಬ್ಬಂದಿ ಬಲಾಬಲದ ಕೊರತೆಯೂ ಇದೆ. ಜತೆಗೆ, ಹೆಚ್ಚುತ್ತಿರುವ ಜನಸಂಖ್ಯೆ ಅಪರಾಧ ಹೆಚ್ಚಲು ಅವಕಾಶ ಮಾಡಿಕೊಟ್ಟಿದೆ ಎನ್ನಬಹುದು.
ಇರುವ ಸಿಬ್ಬಂದಿ ಬಲಾಬಲದಲ್ಲಿ ಅಪರಾಧ ಪ್ರಕರಣಗಳ ಕಡಿವಾಣಕ್ಕೆ ಯೋಜನೆಗಳನ್ನು ರೂಪಿಸಲಾಗುತ್ತಿದೆ. ರಾತ್ರಿಗಸ್ತು ವಿಶೇಷ ತಂಡಗಳನ್ನು ಹಾಗೂ ಅಪರಾಧ ಪತ್ತೇದಾರಿ ತನಿಖಾ ತಂಡಗಳನ್ನು ರಚಿಸಲಾಗಿದೆ. ಈ ತಂಡಗಳು ಸಾಕಷ್ಟು ಶ್ರಮಿಸುತ್ತಿವೆ. ಮುಂದಿನ ದಿನಗಳಲ್ಲಿ ಅಪರಾಧ ಪ್ರಕರಣಗಳು ನಿಯಂತ್ರಣವಾಗಲಿದೆ.
–ಡಿ.ಪ್ರಕಾಶ್‌, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT