ವಿಯೆನ್ನಾ(ಎಪಿ/ಐಎಎನ್ಎಸ್): ಅಣ್ವಸ್ತ್ರಗಳಿಗೆ ಸಂಬಂಧಿಸಿದಂತೆ ಅಂತರ ರಾಷ್ಟ್ರೀಯ ಪರಮಾಣು ಕಾವಲು ಸಮಿತಿ ಯಾದ `ಐಎಇಎ~ (ಇಂಟರ್ನ್ಯಾಷನಲ್ ಅಟಾಮಿಕ್ ಎನರ್ಜಿ ಏಜೆನ್ಸಿ) ಹಾಗೂ ಇರಾನ್ ನಡುವಿನ ಎರಡನೇ ಸುತ್ತಿನ ಮಾತುಕತೆಯೂ ಮುರಿದುಬಿದ್ದಿದ್ದು, ಆ ದೇಶ ತನ್ನ ಪರಮಾಣು ನೆಲೆಗಳನ್ನು `ಐಎಇಎ~ ಪರಿಶೀಲನೆಗೆ ಒಳಪಡಿಸಲು ನಿರಾಕರಿಸಿದೆ.
ಮಾತುಕತೆ ವಿಫಲವಾಗಿದೆ ಎಂದು `ಐಎಇಎ~ ಬಹಿರಂಗಪಡಿಸುವ ಕೆಲ ಗಂಟೆಗಳ ಮುಂಚೆ ಇರಾನ್ನ ಸೇನಾಧಿಕಾರಿಯೊಬ್ಬರು ತನಗೆ ಬೆದರಿಕೆಯೊಡ್ಡುವ ಯಾವುದೇ ದೇಶದ ಮೇಲೆ ಇರಾನ್ ದಾಳಿ ನಡೆಸುವ ಸಾಧ್ಯತೆ ಇದೆ ಎಂದು ಎಚ್ಚರಿಸಿದ್ದಾರೆ.
ಮೂರು ವಾರಗಳ ಹಿಂದೆ `ಐಎಇಎ~ ಇರಾನ್ ಜತೆ ನಡೆಸಿದ ಮೊದಲ ಸುತ್ತಿನ ಮಾತುಕತೆ ವಿಫಲವಾಗಿತ್ತು. ಇರಾನ್ನ ಅಣ್ವಸ್ತ್ರ ಚಟುವಟಿಕೆಗಳಿಗೆ ತಡೆಯೊಡ್ಡಬೇಕೆಂದು ಅಮೆರಿಕ ಸೇರಿದಂತೆ ಹಲವು ದೇಶಗಳು ಆ ದೇಶದ ಮೇಲೆ ಆರ್ಥಿಕ ದಿಗ್ಬಂಧನ ವಿಧಿಸಿದರೂ ಇರಾನ್ ಪರಮಾಣು ಚಟುವಟಿಕೆ ನಿಲ್ಲಿಸಿರಲಿಲ್ಲ.
ಈ ವಾರ `ಐಎಇಎ~ ತಜ್ಞರ ತಂಡ, ಅಣ್ವಸ್ತ್ರ ಚಟುವಟಿಕೆ ನಿಲ್ಲಿಸಲು ಇರಾನ್ ಮನವೊಲಿಸುವ ಉದ್ದೇಶದಿಂದ ಮತ್ತೆ ಟೆಹರಾನ್ಗೆ ಭೇಟಿ ನೀಡಿತ್ತು.
ಮಂಗಳವಾರ ಮಧ್ಯರಾತ್ರಿ ಈ ತಂಡ ಟೆಹರಾನ್ನಿಂದ ಹೊರಟ ಕೆಲವೇ ಕ್ಷಣಗಳಲ್ಲಿ `ಐಎಇಎ~ ಎರಡನೇ ಸುತ್ತಿನ ಮಾತುಕತೆ ವಿಫಲವಾದ ಕುರಿತು ಪ್ರಕಟಣೆ ಹೊರಡಿಸಿದೆ.
ಇರಾನ್ ಜತೆಗಿನ ಎರಡೂ ಮಾತುಕತೆಗಳಲ್ಲೂ `ಐಎಇಎ~ ತಂಡ, ಪರ್ಚಿನ್ ಸೇನಾ ನೆಲೆಗೆ ಭೇಟಿ ನೀಡಲು ಅವಕಾಶ ನೀಡುವಂತೆ ಕೇಳಿಕೊಂಡಿತ್ತು. ಆದರೆ, ಎರಡೂ ಸಂದರ್ಭಗಳಲ್ಲೂ ಇರಾನ್ ಅನುಮತಿ ನಿರಾಕರಿಸಿದೆ.
ಇದು ನಿರಾಶಾದಾಯಕ ಎಂದು `ಐಎಇಎ~ ಹೇಳಿದೆ. ಇರಾನ್ ಆ ಸೇನಾ ನೆಲೆಯಲ್ಲಿಯೇ ಅಣ್ವಸ್ತ್ರ ತಯಾರಿಸುತ್ತಿದೆ ಎಂಬ ಗುಮಾನಿ ಇದೆ.
ನಾವು ರಚನಾತ್ಮಕವಾಗಿ ಮಾತುಕತೆಯಲ್ಲಿ ತೊಡಗಿಸಿಕೊಂಡಿದ್ದೆವು. ಆದರೆ, ಯಾವುದೇ ಒಪ್ಪಂದಕ್ಕೆ ಬರಲು ಸಾಧ್ಯವಾಗಿಲ್ಲ ಎಂದು `ಐಎಇಎ~ ನಿರ್ದೇಶಕ ಯುಕಿಯಾ ಅಮಾನೊ ತಿಳಿಸಿದ್ದಾರೆ. ಮಾತುಕತೆ ವಿಫಲವಾಗಲು ಇರಾನ್ ಕಾರಣ ಎಂಬ ಧಾಟಿಯಲ್ಲಿ ಈ ಪ್ರಕಟಣೆ ಇದೆ.
ಆದರೆ, ಇರಾನ್ ವಿದೇಶಾಂಗ ಇಲಾಖೆ ವಕ್ತಾರ ರಮಿನ್ ಮೆಹಮಾನ್ಪರಸ್ತ್, `ಐಎಇಎ~ ಜತೆ ಸಹಕಾರ ಮುಂದುವರಿಸುತ್ತೇವೆ ಎಂದು ಹೇಳಿದ್ದಾರೆ.
ತೈಲ ಖರೀದಿ: ಭಾರತದ ಮೇಲೆ ಒತ್ತಡ
ವಾಷಿಂಗ್ಟನ್(ಐಎಎನ್ಎಸ್): ಕಚ್ಚಾ ತೈಲಕ್ಕಾಗಿ ಇರಾನ್ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಿಕೊಳ್ಳುವಂತೆ ಅಮೆರಿಕ ಭಾರತದ ಮೇಲೆ ಒತ್ತಡ ಹೇರುತ್ತಲೇ ಇದೆ.
ಈ ಕುರಿತು ನಾವು ಎಲ್ಲ ದೇಶಗಳ ಜತೆ ಮಾತನಾಡುತ್ತಲೇ ಇದ್ದೇವೆ. ಭಾರತ, ಚೀನಾ, ಯುರೋಪ್ ದೇಶಗಳು, ಏಷ್ಯಾ, ಆಫ್ರಿಕಾದ ದೇಶಗಳ ಜತೆ ಚರ್ಚೆ ಮುಂದುವರಿದಿದೆ.
ಇರಾನ್ ಮೇಲೆ ಒತ್ತಡ ಹೆಚ್ಚಿಸುವುದು ಈ ಎಲ್ಲ ಮಾತುಕತೆಗಳ ಉದ್ದೇಶ ಎಂದು ಅಮೆರಿಕ ವಿದೇಶಾಂಗ ಇಲಾಖೆ ವಕ್ತಾರರಾದ ವಿಕ್ಟೋರಿಯಾ ನಲಂಡ್ ಹೇಳಿದ್ದಾರೆ.
`ಇರಾನ್ನ ತೈಲ ಆಮದು ನಿಲ್ಲಿಸಲು ನಿರಾಕರಿಸಿರುವ ಭಾರತ ಅಮೆರಿಕದ ಮುಖಕ್ಕೆ ಬಾರಿಸಿದೆ~ ಎಂದು ನಿವೃತ್ತ ರಾಜತಾಂತ್ರಿಕ ನಿಕ್ ಬರ್ನ್ಸ್ ನೀಡಿರುವ ಹೇಳಿಕೆ ಬಗ್ಗೆ ಪ್ರಶ್ನಿಸಿದಾಗ, `ಅದು ಅವರ ವೈಯಕ್ತಿಕ ಅಭಿಪ್ರಾಯವಷ್ಟೇ~ ಎಂದ ನಲಂಡ್, ಭಾರತದ ಜತೆ ಸಂವಹನವನ್ನು ನಾವು ಮುಂದುವರಿಸುತ್ತೇವೆ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.