ನವದೆಹಲಿ (ಪಿಟಿಐ): ಕಳೆದ 16 ತಿಂಗಳುಗಳಿಂದ ಬಂಧನದಲ್ಲಿರುವ ಹಿರಿಯ ಐಎಎಸ್ ಅಧಿಕಾರಿ ಪ್ರದೀಪ್ ಶರ್ಮ ಜಾಮೀನು ಕೋರಿ ಸಲ್ಲಿಸಿರುವ ಅರ್ಜಿಯ ವಿಚಾರಣೆ ನಡೆಸುತ್ತಿರುವ ಸುಪ್ರೀಂಕೋರ್ಟ್, ಗುರುವಾರ ಗುಜರಾತ್ ಸರ್ಕಾರಕ್ಕೆ ನೋಟಿಸ್ ಜಾರಿಗೊಳಿಸಿದೆ.
ಶರ್ಮ ಮೇಲೆ ಹಲವು ಕ್ರಿಮಿನಲ್ ಆರೋಪಗಳನ್ನು ನರೇಂದ್ರ ಮೋದಿ ಸರ್ಕಾರ ಹೊರಿಸಿದೆ. ನ್ಯಾಯಮೂರ್ತಿ ಆಫ್ತಾಬ್ ಅಲಂ ನೇತೃತ್ವದ ಪೀಠವು ಶರ್ಮ ಸಲ್ಲಿಸಿರುವ ಅರ್ಜಿಯ ವಿಚಾರಣೆ ನಡೆಸಲು ಸಮ್ಮತಿಸಿತು. ಆದರೆ ಅವರಿಗೆ ಕುಟುಂಬದವರೊಂದಿಗೆ ದೀಪಾವಳಿ ಹಬ್ಬ ಆಚರಿಸಲು ಮಧ್ಯಂತರ ಜಾಮೀನು ನೀಡಲು ನಿರಾಕರಿಸಿತು.
ಕಛ್ ಜಿಲ್ಲೆಯಲ್ಲಿ ಖಾಸಗಿ ಕಂಪೆನಿಗಳಿಗೆ ಭೂ ಮಂಜೂರಾತಿಯಲ್ಲಿ ಅಕ್ರಮ ಎಸಗಿರುವುದು ಸೇರಿದಂತೆ ಹಲವು ಆರೋಪಗಳನ್ನು ಶರ್ಮ ಮೇಲೆ ಸರ್ಕಾರ ಹೊರಿಸಿದೆ.
ಐಪಿಎಸ್ ಅಧಿಕಾರಿಯಾದ ತಮ್ಮ ಕಿರಿಯ ಸಹೋದರ ಕುಲದೀಪ್ ಶರ್ಮ, ಮೋದಿ ಸರ್ಕಾರದ ಅವ್ಯವಹಾರಗಳನ್ನು ಬಯಲಿಗೆ ಎಳೆಯುತ್ತಿದ್ದಾರೆ. ಇದಕ್ಕೆ ಸೇಡು ತೀರಿಸಿಕೊಳ್ಳಲು ಸರ್ಕಾರ ತಮ್ಮ ವಿರುದ್ಧ ಮೊಕದ್ದಮೆ ಹೂಡಿದೆ ಎಂದು ಪ್ರದೀಪ್ ಶರ್ಮ ವಾದಿಸಿದ್ದಾರೆ.