ಹೈದರಾಬಾದ್ (ಪಿಟಿಐ): ಬಳ್ಳಾರಿ ಜಿಲ್ಲೆಯ ಮೀಸಲು ಅರಣ್ಯ ಪ್ರದೇಶದಲ್ಲಿ ಓಬಳಾಪುರಂ ಕಂಪೆನಿಯು ಅಕ್ರಮವಾಗಿ ಗಣಿಗಾರಿಕೆ ನಡೆಸಿದೆ ಎಂಬ ಆರೋಪಗಳಿಗೆ ಸಂಬಂಧಿಸಿದಂತೆ ಆಂಧ್ರಪ್ರದೇಶ ಸರ್ಕಾರದ ಹಿರಿಯ ಐಎಎಸ್ ಅಧಿಕಾರಿಗಳನ್ನು ಸಿಬಿಐ ಅಧಿಕಾರಿಗಳು ಶುಕ್ರವಾರ ಪ್ರಶ್ನಿಸಿದರು.
ಕರ್ನಾಟಕದ ಪ್ರವಾಸೋದ್ಯಮ ಸಚಿವ ಜನಾರ್ದನ ರೆಡ್ಡಿ ಅವರ ಒಡೆತನದ ಓಬಳಾಪುರಂ ಗಣಿಗಾರಿಕೆ ಕಂಪೆನಿಗೆ ಅರಣ್ಯ ಪ್ರದೇಶದಲ್ಲಿ 2005ರಿಂದ 2009ರವರೆಗೆ ಗುತ್ತಿಗೆ ನೀಡಿದ್ದರ ಬಗ್ಗೆ ಆಗ ಕೈಗಾರಿಕಾ ಇಲಾಖೆ ಕಾರ್ಯದರ್ಶಿ ಆಗಿದ್ದ (ಈಗ ಆರೋಗ್ಯ ಇಲಾಖೆಯ ಕಾರ್ಯದರ್ಶಿ) ವೈ.ಶ್ರೀಲಕ್ಷ್ಮಿ ಅವರನ್ನು ಅಧಿಕಾರಿಗಳ ತಂಡ ವಿಚಾರಣೆ ಮಾಡಿದೆ. ಗಣಿಗಾರಿಕೆಗೆ ಭೂಮಿಯನ್ನು ಗುತ್ತಿಗೆ ನೀಡುವಾಗ ನಿಯಮಗಳನ್ನು ಪಾಲಿಸಲಾಗಿದೆಯೇ ಎಂಬುದನ್ನು ಪ್ರಶ್ನಿಸಲಾಗಿದೆ.ಓಬಳಾಪುರಂ ಕಂಪೆನಿಯು ಕರ್ನಾಟಕ ಮತ್ತು ಆಂಧ್ರಪ್ರದೇಶ ಗಡಿಯಲ್ಲಿ ಗುತ್ತಿಗೆ ನೀಡಿದ ಪ್ರದೇಶಕ್ಕಿಂತ ಹೆಚ್ಚಿನ ಭೂಮಿಯಲ್ಲಿ ಅಕ್ರಮವಾಗಿ ಗಣಿಗಾರಿಕೆ ನಡೆಸಿದೆ ಎಂಬ ಆಪಾದನೆಯ ಬಗ್ಗೆ ಸಿಬಿಐ ತನಿಖೆ ನಡೆಯುತ್ತಿದೆ.