ಬೆಂಗಳೂರು: ವಾಣಿಜ್ಯ ತೆರಿಗೆ ಇಲಾಖೆಯ ಹೆಚ್ಚುವರಿ ಆಯುಕ್ತ ಡಿ.ಕೆ.ರವಿ ಅವರು ನಗರದ ಕೋರಮಂಗಲದಲ್ಲಿರುವ ಸೇಂಟ್ ಜಾನ್ಸ್ವುಡ್ ಅಪಾರ್ಟ್ಮೆಂಟ್ನಲ್ಲಿ ಸೋಮವಾರ ಅನುಮಾನಾಸ್ಪದವಾಗಿ ಮೃತಪಟ್ಟಿದ್ದಾರೆ.
ಅಪಾರ್ಟ್ ಮೆಂಟ್ ನ 9ನೇ ಮಹಡಿಯ ಮಲಗುವ ಕೋಣೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ರವಿ ಅವರ ಶವ ಪತ್ತೆಯಾಗಿದೆ. ಸ್ಥಳಕ್ಕೆ ಪೊಲೀಸ್ ಸಿಬ್ಬಂದಿ, ಶ್ವಾನ ದಳ ಮತ್ತು ಬೆರಳಚ್ಚು ತಜ್ಞರ ತಂಡ ಆಗಮಿಸಿದ್ದು ಪರಿಶೀಲನೆ ನಡೆಸುತ್ತಿದೆ..
ಸಂಜೆ ಘಟನೆ ನಡೆದಿದ್ದು, ರವಿ ಅವರ ಪತ್ನಿ ಕುಸುಮಾ ಹಾಗೂ ಸಂಬಂಧಿಗಳು ಅಪಾರ್ಟ್ಮೆಂಟ್ಗೆ ಧಾವಿಸಿದ್ದಾರೆ. ಪೊಲೀಸರು ಸದ್ಯ ಯಾರನ್ನೂ ಅಪಾರ್ಟ್ಮೆಂಟ್ ಒಳಗೆ ಬಿಡುತ್ತಿಲ್ಲ. ಕೆಲ ಪ್ರಾಥಮಿಕ ಮಾಹಿತಿ ಸಂಗ್ರಹಣೆ ಆಗುವವರೆಗೆ ಯಾರನ್ನೂ ಒಳಗೆ ಬಿಡಲು ಸಾಧ್ಯವಿಲ್ಲ ಎಂದು ಪೊಲೀಸರು ಹೇಳಿದ್ದಾರೆ.
ಡಿ.ಕೆ.ರವಿ ಅವರು ಈ ಹಿಂದೆ ಕೋಲಾರ ಜಿಲ್ಲೆಯ ಜಿಲ್ಲಾಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದರು. ದಕ್ಷ ಹಾಗೂ ಪ್ರಾಮಾಣಿಕ ಅಧಿಕಾರಿ ಎಂದು ಹೆಸರನ್ನು ಗಳಿಸಿದ್ದರು. 2009ನೇ ಬ್ಯಾಚ್ ನ ಐಎಎಸ್ ಅಧಿಕಾರಿ. ಕೆರೆ ಒತ್ತುವರಿ ತೆರವು, ದೊಡ್ಡ ಬಿಲ್ಡರ್ ಗಳ ಅಕ್ರಮಗಳನ್ನು ಅವರು ಬಯಲಿಗೆಳೆದಿದ್ದಾರೆ.