ನವದೆಹಲಿ (ಐಎಎನ್ಎಸ್): ಭ್ರಷ್ಟಾಚಾರ ವಿರೋಧಿ ಆಂದೋಲನ (ಐಎಸಿ) ದ ಮೂವರು ಪ್ರಮುಖ ಸದಸ್ಯರ ಮೇಲೆ ಭ್ರಷ್ಟಾಚಾರದ ಆರೋಪಗಳು ಕೇಳಿಬರುತ್ತಿದ್ದು, ಈ ಕುರಿತು ಸಂಘಟನೆಯ `ಆಂತರಿಕ ಲೋಕಪಾಲ~ರಿಂದ ತನಿಖೆ ನಡೆಸಲಿದೆ ಎಂದು ಸಂಘಟನೆಯ ಮುಖ್ಯಸ್ಥ ಅರವಿಂದ ಕೇಜ್ರಿವಾಲ್ ತಿಳಿಸಿದ್ದಾರೆ.
ಪ್ರಶಾಂತ ಭೂಷಣ್, ಅಂಜಲಿ ದಾಮನಿಯಾ ಮತ್ತು ಮಯಾಂಕ ಗಾಂಧಿ ಈ ಮೂವರ ಮೇಲೆ ಭ್ರಷ್ಟಾಚಾರದ ಆರೋಪಗಳು ಕೇಳಿಬಂದಿವೆ. ಅದಕ್ಕೆ ಸಂಬಂಧಿಸಿದಂತೆ ಎಲ್ಲ ಸಾಕ್ಷ್ಯಗಳನ್ನು ಲೋಕಪಾಲ್ ಎದುರು ಹಾಜರುಪಡಿಸುತ್ತೇವೆ. ಯಾರಾದರೂ ತಪ್ಪಿತಸ್ಥರಾಗಲಿ, ಅಂಥವರು ನಮ್ಮ ಸಂಘಟನೆಯಿಂದ ಹೊರ ನಡೆಯಬೇಕಾಗುತ್ತದೆ~ ಎಂದು ಕೇಜ್ರಿವಾಲ್ ಸುದ್ದಿಗಾರರಿಗೆ ತಿಳಿಸಿದ್ದಾರೆ. `ಆಂತರಿಕ ಲೋಕಪಾಲ~ದಲ್ಲಿ ಇಬ್ಬರು ನಿವೃತ್ತ ನ್ಯಾಯಮೂರ್ತಿಗಳಾದ ಎ.ಪಿ.ಷಾ ಮತ್ತು ಜಸ್ಪಾಲ್ ಸಿಂಗ್ ಅವರು ಇದ್ದಾರೆ.
`ಭ್ರಷ್ಟಾಚಾರ ವಿರೋಧಿ ಸಂಸ್ಥೆಯು ಈ ಮೂವರ ವಿರುದ್ಧ `ಆಂತರಿಕ ಲೋಕಪಾಲ~ ತನಿಖೆಗೆ ಸೋಮವಾರ ದೂರು ದಾಖಲಿಸಲಿದೆ. ಮೂರು ತಿಂಗಳಲ್ಲಿ ತನಿಖೆ ನಡೆಸುವಂತೆ ಲೋಕಪಾಲವನ್ನು ವಿನಂತಿಸಲಾಗುತ್ತದೆ~ ಎಂದು ಅವರು ಹೇಳಿದ್ದಾರೆ.
ಈ ವಿರುದ್ಧದ ಆರೋಪ ಕುರಿತು ಯಾರ ಬಳಿಯಾದರೂ ಸಾಕ್ಷ್ಯವಿದ್ದರೆ, ಅವರು ಲೋಕಪಾಲ ತಂಡದಲ್ಲಿರುವ ಮೂವರು ನ್ಯಾಯಮೂರ್ತಿಗಳನ್ನು ಸಂಪರ್ಕಿಸಬಹುದು ಎಂದಿದ್ದಾರೆ.