ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಐಎಸ್‌ಸಿಯಲ್ಲಿ ಗಣ್ಯರ ಸೈಕಲ್ ವಿಹಾರ

Last Updated 6 ಆಗಸ್ಟ್ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: ಹವಾನಿಯಂತ್ರಿತ ಕಾರುಗಳಲ್ಲಿ ಕೂತು ಸಂಚರಿಸುವ ಗಣ್ಯರು ಸೋಮವಾರ ಭಾರತೀಯ ವಿಜ್ಞಾನ ಸಂಸ್ಥೆಯ ಆವರಣದಲ್ಲಿ  ಸೈಕಲ್‌ಗಳನ್ನೇರಿ ವಿಹಾರ ನಡೆಸಿದರು.

`ರೈಡ್-ಎ-ಸೈಕಲ್ ಫೌಂಡೇಷನ್~ ಮತ್ತು ಭಾರತೀಯ ವಿಜ್ಞಾನ ಸಂಸ್ಥೆಯ ಮೂಲಸೌಕರ್ಯ, ಸುಸ್ಥಿರ ಸಾರಿಗೆ ಹಾಗೂ ನಗರ ಯೋಜನಾ ಕೇಂದ್ರವು ಸೈಕಲ್‌ಗಳನ್ನು ಸಮುದಾಯ ಸಾರಿಗೆಯಾಗಿ ರೂಪಿಸುವ ಮೊದಲ ಹೆಜ್ಜೆಯಾಗಿ ಆರಂಭಿಸಿರುವ `ನಮ್ಮ ಸೈಕಲ್ ಕ್ಯಾಂಪಸ್~ ಜಾಥಾಗೆ ಚಾಲನೆ ನೀಡಿದ ಮಲ್ಲೇಶ್ವರ ಕ್ಷೇತ್ರದ ಡಾ.ಸಿ.ಎನ್. ಅಶ್ವತ್ಥನಾರಾಯಣ, ಬಿಬಿಎಂಪಿ ಆಯುಕ್ತ ಎಂ.ಕೆ. ಶಂಕರಲಿಂಗೇಗೌಡ, `ಮ್ಯಾಪ್‌ಯೂನಿಟಿ~ ಸಿಇಒ ಡಾ. ಅಶ್ವಿನ್ ಮಹೇಶ್ ಮತ್ತಿತರರು `ಜಾಲಿ ರೈಡ್~ ನಡೆಸಿದರು.

ಹೆಚ್ಚುತ್ತಿರುವ ವಾಹನಗಳ ಸಂಖ್ಯೆ ಹಾಗೂ ಮಾಲಿನ್ಯದಿಂದ ಪರಿಸರದ ಮೇಲಾಗುತ್ತಿರುವ ದುಷ್ಪರಿಣಾಮಗಳನ್ನು ತಡೆಗಟ್ಟುವ ಉದ್ದೇಶದಿಂದ ಸೈಕಲ್‌ಗಳನ್ನು ಸಮುದಾಯ ಸಾರಿಗೆಯಾಗಿ ಪರಿವರ್ತಿಸುವ ಉದ್ದೇಶದಿಂದ `ರೈಡ್-ಎ-ಸೈಕಲ್ ಫೌಂಡೇಷನ್~ ಪ್ರಾಯೋಗಿಕವಾಗಿ ಭಾರತೀಯ ವಿಜ್ಞಾನ ಸಂಸ್ಥೆಯ ಕ್ಯಾಂಪಸ್‌ನಲ್ಲಿ ಈ ಕಾರ್ಯಕ್ರಮ ಆರಂಭಿಸಿದೆ.

`ಪ್ರಸ್ತುತ ಐಐಎಸ್‌ಸಿ ಕ್ಯಾಂಪಸ್‌ನಲ್ಲಿ 40 ಸೈಕಲ್‌ಗಳನ್ನು ವಿದ್ಯಾರ್ಥಿಗಳ ಬಳಕೆಗಾಗಿ ಒದಗಿಸಲಾಗಿದೆ. ಇನ್ನೆರಡು ತಿಂಗಳೊಳಗೆ ಒಟ್ಟು 150 ಬೈಸಿಕಲ್‌ಗಳನ್ನು ಒದಗಿಸಲಾಗುತ್ತದೆ. ವಿದ್ಯಾರ್ಥಿಗಳು ಕೇವಲ ಕ್ಯಾಂಪಸ್‌ನಲ್ಲಷ್ಟೇ ಅಲ್ಲದೆ ಹೊರಗೆ ಹೋಗಲು ಈ ಸೈಕಲ್‌ಗಳನ್ನು ಬಳಸಬಹುದು~ ಎಂದು ರೈಡ್-ಎ-ಸೈಕಲ್ ಫೌಂಡೇಷನ್~ನ ನಿರ್ದೇಶಕ ಎಚ್.ಆರ್. ಮುರಳಿ `ಪ್ರಜಾವಾಣಿ~ಗೆ ತಿಳಿಸಿದರು.

`ಚೆನ್ನೈನ ಮುರುಗಪ್ಪನ್ ಗ್ರೂಪ್‌ನ ಅಂಗ ಸಂಸ್ಥೆಯಾದ ಟಿ.ಐ. ಗ್ರೂಪ್ 150 ಸೈಕಲ್‌ಗಳನ್ನು ಫೌಂಡೇಷನ್‌ಗೆ ಒದಗಿಸಿದೆ. ಟಾಟಾ ಸ್ಟೀಲ್ ಸೇರಿದಂತೆ ಇನ್ನಿತರ ಕಂಪೆನಿಗಳ ಪ್ರಾಯೋಜಕತ್ವ ಪಡೆಯಲು ಪ್ರಯತ್ನ ನಡೆಸಲಾಗುತ್ತಿದೆ. ನಮ್ಮ ನಿರೀಕ್ಷೆಗೆ ತಕ್ಕಂತೆ ಕಂಪೆನಿಗಳು ಸ್ಪಂದಿಸಿದಲ್ಲಿ ಇತರೆಡೆಗಳಲ್ಲಿಯೂ ಸೈಕಲ್‌ಗಳನ್ನು ಸಮೂಹ ಸಾರಿಗೆಯನ್ನಾಗಿಸಲು ಪ್ರಯತ್ನಿಸಲಾಗುವುದು~ ಎಂದು ಅವರು ಹೇಳಿದರು.

ಸೈಕಲ್ ಪಥಗಳ ನಿರ್ಮಾಣ ಯೋಜನೆ: ಇದೇ ಸಂದರ್ಭದಲ್ಲಿ ಮಾತನಾಡಿದ ಬಿಬಿಎಂಪಿ ಆಯುಕ್ತ ಎಂ.ಕೆ. ಶಂಕರಲಿಂಗೇಗೌಡ, `ಜಯನಗರದಲ್ಲಿ ಸೈಕಲ್ ಪಥ ನಿರ್ಮಾಣ ಇನ್ನು 15 ದಿನಗಳಲ್ಲಿ ಪೂರ್ಣಗೊಳ್ಳಲಿದೆ.

ಮಲ್ಲೇಶ್ವರ ಹಾಗೂ ಅರಮನೆ ಮೈದಾನದ ಸುತ್ತಮುತ್ತಲಿನ ರಸ್ತೆಗಳಲ್ಲಿಯೂ ಸೈಕಲ್ ಪಥ ನಿರ್ಮಿಸುವ ಯೋಜನೆ ಹಾಕಿಕೊಳ್ಳಲಾಗಿದೆ~ ಎಂದರು.

`ನಗರದಲ್ಲಿ ವಾಹನ ದಟ್ಟಣೆ, ವಾಯುಮಾಲಿನ್ಯದಿಂದ ವಾತಾವರಣ ಹದಗೆಡುತ್ತಿದೆ. ಹೀಗಾಗಿ, ಸಾರ್ವಜನಿಕರು ಪರಿಸರ ಸ್ನೇಹಿ ಸೈಕಲ್‌ಗಳನ್ನು ಬಳಸುವುದು ಅನಿವಾರ್ಯ. ಮಾಲಿನ್ಯ ನಿಯಂತ್ರಣಕ್ಕೆ ಸೈಕಲ್ ಬಳಕೆಯೊಂದೇ ಪರಿಹಾರ~ ಎಂದರು.

ಶಾಸಕ ಡಾ.ಸಿ.ಎನ್. ಅಶ್ವತ್ಥನಾರಾಯಣ ಮಾತನಾಡಿ, `ನಗರದಲ್ಲಿ ದಿನದಿಂದ ದಿನಕ್ಕೆ ವಾಹನಗಳ ಸಂಖ್ಯೆ ಹೆಚ್ಚುತ್ತಿದೆ. ಜನಸಂಖ್ಯೆಗೆ ಅನುಗುಣವಾಗಿ ಮೂಲ ಸೌಕರ್ಯಗಳನ್ನು ಕಲ್ಪಿಸಿಕೊಡುವುದೇ ಸವಾಲಿನ ಕೆಲಸ.

ಆದರೂ, ರೋಗಮುಕ್ತವಾದ ಜೀವನಕ್ಕೆ ಪರಿಸರ ಅತ್ಯಂತ ಮುಖ್ಯ. ಈ ಹಿನ್ನೆಲೆಯಲ್ಲಿ ನಾಗರಿಕರು ಇಂಧನ ಬಳಸುವ ವಾಹನಗಳ ಬದಲಿಗೆ ಪರಿಸರ ಸ್ನೇಹಿ ಸೈಕಲ್‌ಗಳನ್ನು ಬಳಸಲು ಮುಂದಾಗಬೇಕು~ ಎಂದು ಕೋರಿದರು.

`ಮ್ಯಾಪ್‌ಯೂನಿಟಿ~ಯ ಸಿಇಒ ಡಾ. ಅಶ್ವಿನ್ ಮಹೇಶ್, ಭಾರತೀಯ ವಿಜ್ಞಾನ ಸಂಸ್ಥೆಯ ಮೂಲಸೌಕರ್ಯ, ಸುಸ್ಥಿರ ಸಾರಿಗೆ ಹಾಗೂ ನಗರ ಯೋಜನಾ ಕೇಂದ್ರದ ಮುಖ್ಯಸ್ಥ ಪ್ರೊ.ಟಿ.ಜಿ. ಸೀತಾರಾಂ, `ಎಂಬಾರ್ಕ್ ಇಂಡಿಯಾ~ದ ಸಂದೇಶ್ ಶ್ರೀಧರ್ ಮತ್ತಿತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT