ನವದೆಹಲಿ (ಪಿಟಿಐ): ಭಾರತೀಯ ಒಲಿಂಪಿಕ್ ಸಂಸ್ಥೆ (ಐಒಎ) ರವಾನಿಸಿರುವ ನೂತನ `ಸಂವಿಧಾನ' ಬಗ್ಗೆ ಸಲಹೆ ಸೂಚನೆಗಳನ್ನು ಆಗಸ್ಟ್ ತಿಂಗಳ ಮಧ್ಯಭಾಗದವರೆಗೆ ನೀಡುವುದಾಗಿ ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿ (ಐಒಸಿ) ಶನಿವಾರ ತಿಳಿಸಿದೆ. ಈ ಮೂಲಕ ಭಾರತ ಮೇಲಿನ ನಿಷೇಧ ತೆರವು ಪ್ರಕ್ರಿಯೆ ಮತ್ತಷ್ಟು ವಿಳಂಬವಾಗಲಿದೆ.
ಈ ಸಂಬಂಧ ಭಾರತಕ್ಕೆ ಪತ್ರ ಬರೆದಿರುವ ಐಒಸಿ ಮಹಾ ನಿರ್ದೇಶಕ ಕ್ರಿಸ್ಟೋಫ್ ಡಿ ಕೆಪರ್, `ನೂತನ ಸಂವಿಧಾನದ ಬಗ್ಗೆ ಆಗಸ್ಟ್ 15ರ ವೇಳೆಗೆ ಸಲಹೆ-ಸೂಚನೆಗಳನ್ನು ರವಾನಿಸುವುದಾಗಿ ಎಂದು ಐಒಸಿ ಖಚಿತ ಪಡಿಸುತ್ತದೆ' ಎಂದು ತಿಳಿಸಿದ್ದಾರೆ.
ಅಮಾನತುಗೊಂಡಿರುವ ಐಒಎನ ಹಾಲಿ ಅಧ್ಯಕ್ಷ ವಿಜಯ್ ಕುಮಾರ್ ಮಲ್ಹೋತ್ರಾ, ಪ್ರಧಾನ ಕಾರ್ಯದರ್ಶಿ ರಾಜಾ ರಣಧೀರ್ ಸಿಂಗ್ ಮತ್ತು ಕೇಂದ್ರ ಕ್ರೀಡಾ ಸಚಿವ ಜಿತೇಂದ್ರ ಸಿಂಗ್, ಕ್ರೀಡಾ ಇಲಾಖೆ ಕಾರ್ಯದರ್ಶಿ ಪಿ.ಕೆ. ದೇಬ್ ಹಾಗೂ ಅಮಾನತುಗೊಂಡಿರುವ ಐಒಎನ ಇತರ ಸದಸ್ಯರಿಗೆ ಐಒಸಿ ಪತ್ರ ರವಾನಿಸಿದೆ.
`ಪರಿಷ್ಕೃತ ಸಂವಿಧಾನವನ್ನು ಅಳವಡಿಸಿಕೊಳ್ಳಲು, ಸ್ವತಂತ್ರ ಚುನಾವಣಾ ಆಯೋಗ ಆಯ್ಕೆ ಮಾಡುವ, ಪದಾಧಿಕಾರಿಗಳ ನೇಮಕದ ದಿನಾಂಕವನ್ನು ನಿರ್ಧರಿಸುವ ವಿಶೇಷ ಸಾಮಾನ್ಯ ಸಭೆಯನ್ನು ಸ್ವಲ್ಪ ಮಟ್ಟಿಗೆ ಮುಂದೂಡಲಾಗಿದೆ. ಇದು ಈ ವರ್ಷದ ಆಗಸ್ಟ್ 22 ರಿಂದ 28ರ ಒಳಗೆ ನಡೆಯಲಿದೆ. ಇದಾದ ಒಂದು ತಿಂಗಳು ಅಂದರೇ ಸೆಪ್ಟಂಬರ್ 22 ರಿಂದ 28 ರ ಅವಧಿಯಲ್ಲಿ ಚುನಾವಣೆ ನಡೆಯಲಿದೆ' ಎಂದೂ ಪತ್ರದಲ್ಲಿ ಕೆಪರ್ ತಿಳಿಸಿದ್ದಾರೆ.
ಕಳೆದ ಡಿಸೆಂಬರ್ 4 ರಂದು ಐಒಎ ಮೇಲೆ ಹೇರಿದ್ದ ನಿಷೇಧ ತೆರವುಗೊಳಿಸಲು ಸೆಪ್ಟಂಬರ್ 1ರ ವೇಳೆಗೆ ಚುನಾವಣೆಗೆ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಜುಲೈ 15 ರೊಳಗೆ `ಸಂವಿಧಾನ' ತಿದ್ದುಪಡಿ ಮಾಡುವಂತೆ ಐಒಸಿ ಈ ಮೊದಲು ಗಡುವು ವಿಧಿಸಿತ್ತು.