ನವದೆಹಲಿ (ಪಿಟಿಐ): ವಾರ್ಷಿಕ ರೂ 5 ಲಕ್ಷದವರೆಗೆ ಆದಾಯ ಗಳಿಸುವ ವೇತನದಾರರು, ಆದಾಯ ತೆರಿಗೆ ಲೆಕ್ಕಪತ್ರ (ಐ.ಟಿ ರಿಟರ್ನ್ಸ್) ಸಲ್ಲಿಸುವ ಅಗತ್ಯ ಇಲ್ಲದಿರುವುದು ಈ ವರ್ಷವೂ ಮುಂದುವರೆಯಲಿದೆ.
2011-12ನೇ ಸಾಲಿನ ಹಣಕಾಸು ವರ್ಷಕ್ಕೂ ಈ ಸೌಲಭ್ಯ ಮುಂದುವರೆಯಲಿದೆ ಎಂದು ಹಣಕಾಸು ಸಚಿವಾಲಯವು ಅಧಿಸೂಚನೆ ಹೊರಡಿಸಿದೆ.
ದೇಶದಲ್ಲಿ ಸದ್ಯಕ್ಕೆ ವಾರ್ಷಿಕ ಆದಾಯ ರೂ 5 ಲಕ್ಷದ ಗಡಿ ದಾಟದ 85 ಲಕ್ಷದಷ್ಟು ನೌಕರರು ಇದ್ದಾರೆ ಎನ್ನುವ ಅಂದಾಜು ಇದೆ. ಇತರ ಮೂಲಗಳಾದ ಬ್ಯಾಂಕ್ ಠೇವಣಿಗಳ ಮೇಲಿನ ಬಡ್ಡಿ ವರಮಾನವೂ ಸೇರಿದಂತೆ ಇವರ ವಾರ್ಷಿಕ ವರಮಾನವು ಹಣಕಾಸು ವರ್ಷವೊಂದರಲ್ಲಿ ರೂ 5 ಲಕ್ಷ ದಾಟದವರಿಗೆ ಈ ಸೌಲಭ್ಯ ದೊರೆಯಲಿದೆ.ಆದಾಯ ತೆರಿಗೆ ವ್ಯಾಪ್ತಿಗೆ ಒಳಪಡುವ ವ್ಯಕ್ತಿಯೊಬ್ಬನ ವಾರ್ಷಿಕ ಆದಾಯವು ರೂ 5 ಲಕ್ಷಕ್ಕಿಂತ ಮೀರಿರದಿದ್ದರೆ ಮತ್ತು ಬ್ಯಾಂಕ್ ಉಳಿತಾಯ ಖಾತೆಯಿಂದ ಬರುವ ಬಡ್ಡಿ ವರಮಾನವು ರೂ 10 ಸಾವಿರ ಮೀರಿರದಿದ್ದರೆ ಅವರನ್ನು 2012-13ರ `ಅಂದಾಜು ವರ್ಷ~ದ ಮತ್ತು 2011-12ರ `ಹಣಕಾಸು ವರ್ಷ~ದ ಐ.ಟಿ ರಿಟರ್ನ್ಸ್ ಸಲ್ಲಿಕೆಯಿಂದ ವಿನಾಯ್ತಿ ನೀಡಲಾಗುತ್ತಿದೆ.
ನಿಬಂಧನೆ ಪಾಲನೆ: ಈ ವೇತನದಾರರು ಈ ವಿನಾಯ್ತಿಗಳನ್ನು ಪಡೆಯಲು ಕೆಲ ನಿಬಂಧನೆಗಳನ್ನೂ ಪಾಲಿಸಬೇಕಾಗುತ್ತದೆ. ವ್ಯಕ್ತಿಗತ ಆದಾಯ ತೆರಿಗೆ ಪಾವತಿದಾರರು ತಮ್ಮ `ಶಾಶ್ವತ ಖಾತೆ ಸಂಖ್ಯೆ~ (ಪ್ಯಾನ್) ಬಗ್ಗೆ ಆದಾಯ ತೆರಿಗೆ ಇಲಾಖೆಯ ಗಮನಕ್ಕೆ ತಂದಿರಬೇಕು. ಬ್ಯಾಂಕ್ಗಳ ಉಳಿತಾಯ ಖಾತೆಯಿಂದ ಬರುವ ಬಡ್ಡಿ ವರಮಾನದ ವಿವರಗಳನ್ನು ತಾವು ಕೆಲಸ ಮಾಡುವ ಸಂಸ್ಥೆಯ ಮಾಲೀಕರ ಗಮನಕ್ಕೆ ತರಬೇಕು. ಆದಾಯ ತೆರಿಗೆಯನ್ನು ಮೂಲದಲ್ಲಿಯೇ ತೆರಿಗೆ ಕಡಿತದ (ಟಿಡಿಸಿ) ಮೂಲಕ ಪಾವತಿಸಬೇಕು. ತೆರಿಗೆ ಕಡಿತದ `ಫಾರ್ಮ್ ನಂಬರ್ 16~ ಪ್ರಮಾಣಪತ್ರವನ್ನು ಮಾಲೀಕರಿಂದ ಪಡೆದುಕೊಂಡಿರಬೇಕು.
ಒಬ್ಬರಿಗಿಂತ ಹೆಚ್ಚು ಮಾಲೀಕರಿಂದ ವೇತನ ಪಡೆಯುವವರು, ಸಂಬಳಕ್ಕೆ ಹೊರತಾದ ಇತರ ಮೂಲಗಳಿಂದ ಆದಾಯ ಪಡೆದವರು ಮತ್ತು ಬ್ಯಾಂಕ್ ಉಳಿತಾಯ ಖಾತೆ ಬಡ್ಡಿಯಿಂದ ್ಙ 10 ಸಾವಿರಕ್ಕಿಂತ ಹೆಚ್ಚು ಬಡ್ಡಿ ಪಡೆದವರು ಈ ವಿನಾಯ್ತಿ ಪಡೆಯಲು ಅರ್ಹರಾಗಿರುವುದಿಲ್ಲ. ಆದಾಯ ತೆರಿಗೆ ಮರು ಪಾವತಿ ಬಯಸಿದವರು ಮಾತ್ರ, ಐ.ಟಿ ರಿಟನ್ಸ್ ಸಲ್ಲಿಸಬಹುದಾಗಿದೆ.