ಮೈಸೂರು: ದ್ವಿತೀಯ ಶ್ರೇಯಾಂಕದ ಆಟಗಾರ ಭಾರತದ ವಿಷ್ಣುವರ್ಧನ್ ಮತ್ತು ಏಳನೇ ಶ್ರೇಯಾಂಕದ ಶ್ರೀರಾಮ್ ಬಾಲಾಜಿ ಮೈಸೂರು ಟೆನಿಸ್ ಕ್ಲಬ್ನಲ್ಲಿ ಸೋಮವಾರ ಆರಂಭವಾದ `ಜುವಾರಿ ಗಾರ್ಡನ್ ಸಿಟಿ ಐಟಿಎಫ್ ಟೆನಿಸ್ ಟೂರ್ನಿ -2012~ ಸಿಂಗಲ್ಸ್ನ ಮೊದಲ ಸುತ್ತಿನಲ್ಲಿ ಸುಲಭ ಜಯ ಸಾಧಿಸಿದರು.
ಹತ್ತು ಸಾವಿರ ಡಾಲರ್ ಮೊತ್ತದ ಪ್ರಶಸ್ತಿಯಿರುವ ಟೂರ್ನಿಯ ಮೊದಲ ಪಂದ್ಯದಲ್ಲಿಯೇ ವಿಷ್ಣುವರ್ಧನ್ 6-1,6-2ರಿಂದ ಭಾರತದವರೇ ಆದ ಕುನಾಲ್ ಆನಂದ್ ವಿರುದ್ಧ ಗೆದ್ದರು.ಇನ್ನೊಂದು ಪಂದ್ಯದಲ್ಲಿ ಏಳನೇ ಶ್ರೇಯಾಂಕದ ಎನ್. ಶ್ರೀರಾಮ ಬಾಲಾಜಿ 6-3, 6-2ರಿಂದ ಭಾರತದ ಫರೀಜ್ ಮಹಮ್ಮದ್ ವಿರುದ್ಧ ಗೆಲುವು ಸಾಧಿಸಿದರು. ಜೂನಿಯರ್ ಡೆವಿಸ್ ಕಪ್ ಆಟಗಾರ ಒಂದು ತಾಸು ನಡೆದ ಪಂದ್ಯದಲ್ಲಿ ಫರೀಜ್ ಅವರನ್ನು ಮಣಿಸಿದರು.
ಸಿಂಗಲ್ಸ್ ವಿಭಾಗದ ಇನ್ನುಳಿದ ಪಂದ್ಯಗಳಲ್ಲಿ ಭಾರತದ ಸಿದ್ಧಾರ್ಥ್ ರಾವತ್ 6-4, 6-4ರಿಂದ ಇಟಲಿಯ ಫ್ರಾನ್ಸಿಸ್ಕೋ ವಿಲಾರ್ಡೋ ವಿರುದ್ಧ ಭಾರತದ ಅಭಿಜಿತ್ ತಿವಾರಿ 6-1, 6-2ರಿಂದ ತೇಜಸ್ ಚುಕುಲ್ಕರ್ ವಿರುದ್ಧ ಜಯ ಸಾಧಿಸಿದರು.
ಬಾಲಾಜಿ-ರಾಜಗೋಪಾಲನ್ಗೆ ಜಯ: ಡಬಲ್ಸ್ನ ಮೊದಲ ಸುತ್ತಿನಲ್ಲಿ ಭಾರತದ ಎನ್. ಶ್ರೀರಾಮ ಬಾಲಾಜಿ ಮತ್ತು ಎ. ರಾಜಗೋಪಾಲನ್ ಜೋಡಿಯು 6-3, 6-3, ಫ್ರಾನ್ಸ್ನ ಸೆಬಾಸ್ಟಿಯನ್ ಬೋಲ್ಟ್ಸ್ ಮತ್ತು ಇಟಲಿಯ ಫ್ರಾನ್ಸಿಸ್ಕೋ ವಿಲಾರ್ಡೋ ಜೋಡಿಯನ್ನು ಮಣಿಸಿತು.
ಭಾರತದ ಶಹಬಾಜ್ ಖಾನ್ ಮತ್ತು ಸುಮೀತ್ ಶಿಂಧೆ 6-2, 7-5ರಿಂದ ಸಾಗರ್ ಅಹುಜಾ, ಸೌರಭ್ ಪಾಟೀಲ ವಿರುದ್ಧ ಜಯಿಸಿದರು. ಇನ್ನೊಂದು ಪಂದ್ಯದಲ್ಲಿ ಖಾಜಾ ವಿನಾಯಕ ಶರ್ಮಾ ಮತ್ತು ಅಭಿಜಿತ್ ತಿವಾರಿ 7-5, 7-5ರಿಂದ ಸಿದ್ಧಾರ್ಥ ರಾವತ್ ಮತ್ತು ಆದಿತ್ಯ ತಿವಾರಿ ವಿರುದ್ಧ ಜಯಿಸಿದರು.