ಶ್ರೀರಂಗಪಟ್ಟಣ: ಮುಚ್ಚಿ ಹೋಗುವ ಸ್ಥಿತಿಯಲ್ಲಿದ್ದ, ಇಲ್ಲಿಗೆ ಸಮೀಪದ ಗಂಜಾಂ ರಸ್ತೆ ಪಕ್ಕದ ಶತಮಾನಗಳಷ್ಟು ಹಳೆಯದಾದ ದಾಸಪ್ಪನ ಕೊಳವನ್ನು ಪುರಸಭೆ ವತಿಯಿಂದ ಬುಧವಾರ ಸ್ವಚ್ಛಗೊಳಿಸಲಾಯಿತು.
ಜೆಸಿಬಿ ಯಂತ್ರದ ಸಹಾಯದಿಂದ ಕೊಳದ ಬದುವಿನಲ್ಲಿ ಬೆಳೆದಿದ್ದ ಗಿಡಗಂಟಿಗಳನ್ನು ತೆಗೆಯಲಾಯಿತು. ಕೊಳದ ಒಳ ಭಾಗದಲ್ಲಿ ಬೆಳೆದಿದ್ದ ಕಳೆ ಗಿಡಗಳು ಹಾಗೂ ಪಾಚಿಯನ್ನು ಸ್ವಚ್ಛ ಮಾಡಲಾಯಿತು. ಕೊಳದಲ್ಲಿನ ನೀರು ಮಲೆತು ಗಬ್ಬು ವಾಸನೆ ಬರುತ್ತಿತ್ತು. ಸ್ಥಳೀಯರು ಈ ಕೊಳ ಸ್ವಚ್ಛ ಮಾಡುವಂತೆ ಪುರಸಭೆಗೆ ಮನವಿ ಸಲ್ಲಿಸಿದ್ದರು.
ಹಳೆಯ ಕೊಳಗಳನ್ನು ಸುಸ್ಥಿತಿಯಲ್ಲಿ ಇಡುವಂತೆ ಜಿಲ್ಲಾಧಿಕಾರಿಗಳು ಸೂಚನೆ ನೀಡಿದ್ದಾರೆ. ಹಾಗಾಗಿ ದಾಸಪ್ಪ ಕೊಳದ ಸ್ವಚ್ಛತಾ ಕಾರ್ಯ ಕೈಗೊಂಡಿದ್ದೇವೆ. ಮುಂದಿನ ದಿನಗಳಲ್ಲಿ ಕೊಳದ ಸುತ್ತ ಕಲ್ಲಿನ ಕಟ್ಟಡ ಹಾಗೂ ಮೆಟ್ಟಿಲು ನಿರ್ಮಾಣ ಕಾರ್ಯವನ್ನು ಕೈಗೆತ್ತಿಕೊಳ್ಳಲು ಉದ್ದೇಶಿಸಲಾಗಿದೆ ಎಂದು ಪುರಸಭೆ ಮುಖ್ಯಾಧಿಕಾರಿ ಎಂ.ರಾಜಣ್ಣ ತಿಳಿಸಿದರು.
ಪರಿಸರ ಎಂಜಿನಿಯರ್ ರೂಪಾ, ಆರೋಗ್ಯ ಪರಿವೀಕ್ಷಕಿ ಸುಷ್ಮಾ ಇತರರು ಇದ್ದರು. ಕೊಳದ ಸಂರಕ್ಷಣಾ ಕಾರ್ಯಕ್ಕೆ ಕೈ ಜೋಡಿಸುವುದಾಗಿ ಜಯಕರ್ನಾಟಕ ಸಂಘಟನೆ ಕಾರ್ಯಕರ್ತರು ತಿಳಿಸಿದರು.