ಶಿಗ್ಗಾವಿ: ಕೃಷಿ ಸಾಗುವಳಿ ಮಾಡುತ್ತಿ ರುವ ಭೂಮಿಯನ್ನು ಸಕ್ರಮಗೊಳಿಸಿ ಪಟ್ಟಾ ನೀಡಬೇಕೆಂದು ಆಗ್ರಹಿಸಿ ಪಟ್ಟಣದ ತಹಸೀಲ್ದಾರ ಕಚೇರಿ ಎದುರಿಗೆ ಕಳೆದ ಐದು ದಿನಗಳಿಂದ ತಾಲ್ಲೂಕಿನ ಬಸವನಕೊಪ್ಪ ಗ್ರಾಮದ ನೂರಾರು ರೈತರು ಉಪವಾಸ ನಡೆಸುತ್ತಿದ್ದು ಮಂಗಳವಾರವೂ ನಿರಂತರ ಉಪವಾಸ ಸತ್ಯಾಗ್ರಹ ಮುಂದುವರಿಸಿದ್ದಾರೆ.
ಕರ್ನಾಟಕ ಪ್ರಾಂತ ರೈತ ಸಂಘದ ಮುಖಂಡರಾದ ಬಿ.ಎಸ್.ಸೊಪ್ಪಿನ ಹಾಗೂ ಗಂಗಾಧರ ಗಾಡದ ಪ್ರತಿಭಟನಾ ನಿರತ ರೈತಿಗೆ ಭೇಟಿ ನೀಡಿ ಅವರು ಮಾತನಾಡಿ, 1974 ಕಾಯ್ದೆ ಪ್ರಕಾರ ಭೂಮಿ ಉಳುವವನೆ ಒಡೆಯ ಎಂದು ಕಾನೂನು ಹೊರಡಿಸಲಾಗಿದೆ. ಆದರೂ ಸರ್ಕಾರ ಕೆಲವು ಅಧಿಕಾರಿಗಳ ನಿರ್ಲಕ್ಷತೆಯಿಂದ ಅಂತಹ ರೈತರಿಗೆ ನ್ಯಾಯ ಸಿಗುತ್ತಿಲ್ಲ.
ಹೀಗಾಗಿ ರೈತರು ಭೂಮಿ ಕಳೆದುಕೊಳ್ಳುವಂತಾಗಿದೆ. ಸರ್ಕಾರ ತಕ್ಷಣ ಭೂಮಿಯನ್ನು ಊಳುವ ರೈತನ ಹೆಸರಿಗೆ ಪಟ್ಟಾ ಬಿಡುಗಡೆ ಮಾಡಬೇಕು ಇಲ್ಲವಾದಲ್ಲಿ ರಾಜ್ಯಾದಂತ ಉಗ್ರವಾದ ಹೋರಾಟ ಮಾಡುವದಾಗಿ ಎಚ್ಚರಿಸಿದರು.
ರೈತರಾದ ಅನ್ವಸಾಬ ಮುಲ್ಲಾನವರ, ಬಾಬಾಸಾಬ ಮುಲ್ಲಾನವರ, ಪರಶುರಾಮ ಬಸವನಕೊಪ್ಪ, ಮುಕ್ತಮ್ಸಾಬ ಬಾಳಿಕಾಯಿ, ಯಲ್ಲಪ್ಪ ಹರಿಜನ, ಸಿದ್ದಪ್ಪ ವಿಠಲಾಪೂರ, ಅಕ್ಕಮ್ಮಾ ವಾಲೀಕಾರ, ನಾಗರಾಜ ಹಿರಳ್ಳಿ, ಶಾಂತವ್ವ ಗಾಡದಾಳ, ಪ್ರೇಮಾ ಕಬನೂರ, ಯಲ್ಲವ್ವ ಪೂಜಾರ ಸೇರಿದಂತೆ ಅನೇಕ ರೈತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಬೆಂಬಲ: ತಾಲ್ಲೂಕು ಎಸ್ಎಫ್ಐ ಘಟಕದ ಅಧ್ಯಕ್ಷ ಸುಭಾಸ ಮಾದರ, ಕಾರ್ಯದರ್ಶಿ ಮಲ್ಲೇಶಪ್ಪ ಗೊಟನವರ ಸೇರಿದಂತೆ ಅನೇಕ ಪದಾಧಿಕಾರಿಗಳು ರೈತರ ಸತ್ಯಾಗ್ರಹಕ್ಕೆ ಬೆಂಬಲ ವ್ಯಕ್ತಪಡಿಸಿದ್ದಾರೆ.