ನವದೆಹಲಿ (ಪಿಟಿಐ): ಈ ಬಾರಿಯ ಐಪಿಎಲ್ ಟೂರ್ನಿಯ ಫೈನಲ್ ಪಂದ್ಯವನ್ನು ಚೆನ್ನೈನಿಂದ ಬೇರೆಡೆಗೆ ಸ್ಥಳಾಂತರಿಸುವ ಬಗ್ಗೆ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಚಿಂತನೆ ನಡೆಸುತ್ತಿದೆ. ಇದಕ್ಕೆ ಕಾರಣ ಎಂ.ಎ.ಚಿದಂಬರಂ ಕ್ರೀಡಾಂಗಣದಲ್ಲಿ ಕಾಡುತ್ತಿರುವ ಪ್ರೇಕ್ಷಕರ ಕೊರತೆ.
ಈ ಕ್ರೀಡಾಂಗಣದ ಎಲ್ಲಾ ಸ್ಟ್ಯಾಂಡ್ಗಳಲ್ಲಿ ಪ್ರೇಕ್ಷಕರು ಕುಳಿತು ಪಂದ್ಯ ವೀಕ್ಷಿಸಲು ಸ್ಥಳೀಯ ಆಡಳಿತ ಅನುಮತಿ ನೀಡಿಲ್ಲ. ಕಟ್ಟಡ ನಿರ್ಮಾಣ ಸಂಬಂಧ ತಮಿಳುನಾಡು ಕ್ರಿಕೆಟ್ ಸಂಸ್ಥೆ ಹಾಗೂ ಸ್ಥಳೀಯ ಆಡಳಿತದ ನಡುವಿನ ವಿವಾದ ಇದಕ್ಕೆ ಕಾರಣ. ಹಾಗಾಗಿ ಜಿ, ಎಚ್ ಹಾಗೂ ಐ ಸ್ಟ್ಯಾಂಡ್ಗಳು ಪ್ರತಿ ಪಂದ್ಯ ನಡೆಯುವಾಗಿ ಖಾಲಿ ಬಿದ್ದಿರುತ್ತವೆ.
ಐಪಿಎಲ್ ಪಂದ್ಯಗಳು ನಡೆಯುತ್ತಿರುವ ಬೇರೆ ಕ್ರೀಡಾಂಗಣಗಳು ಬಹುತೇಕ ಭರ್ತಿಯಾಗಿರುತ್ತವೆ. ಆದರೆ ಚೆನ್ನೈನಲ್ಲಿ ಮಾತ್ರ ಈ ಸಮಸ್ಯೆ ಕಾಡುತ್ತಿದೆ. ಹಾಗಾಗಿ ಫೈನಲ್ ಹಾಗೂ ಪ್ಲೇ ಆಫ್ನ ಒಂದು ಪಂದ್ಯವನ್ನು ನವಿ ಮುಂಬೈ, ಪುಣೆ, ಬೆಂಗಳೂರು ಅಥವಾ ದೆಹಲಿಗೆ ವರ್ಗಾಯಿಸುವ ಬಗ್ಗೆ ಬಿಸಿಸಿಐ ಚಿಂತನೆ ನಡೆಸುತ್ತಿದೆ. ಆದರೆ ಈ ಬಗ್ಗೆ ಯಾರೂ ಅಧಿಕೃತ ಹೇಳಿಕೆ ನೀಡಿಲ್ಲ.
`ಈ ಬಾರಿಯ ಐಪಿಎಲ್ನಲ್ಲಿ ಹೆಚ್ಚಿನ ಕ್ರೀಡಾಂಗಣಗಳು ಭರ್ತಿಯಾಗುತ್ತಿವೆ. ಆದರೆ ಫೈನಲ್ ಪಂದ್ಯ ಖಾಲಿ ಇರುವ ಕ್ರೀಡಾಂಗಣದಲ್ಲಿ ನಡೆದರೆ ಆಕರ್ಷಣೆ ಕಳೆದುಕೊಳ್ಳುತ್ತದೆ. ಹಾಗಾಗಿ ಬೇರೆಡೆಗೆ ಸ್ಥಳಾಂತರಿಸುವ ಬಗ್ಗೆ ಸಮಾಲೋಚನೆ ನಡೆಸುತ್ತಿದ್ದೇವೆ~ ಎಂದು ಬಿಸಿಸಿಐ ಪದಾಧಿಕಾರಿಯೊಬ್ಬರು ನುಡಿದಿದ್ದಾರೆ.