ಮುಂಬೈ (ಪಿಟಿಐ): ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟ್ವೆಂಟಿ-20 ಟೂರ್ನಿಯ ನಾಲ್ಕನೇ ಅವತರಣಿಕೆಯ ಆಟಗಾರರ ಹರಾಜಿನಲ್ಲಿ ಮೋಸ ನಡೆದಿರುವ ಬಗ್ಗೆ ಈ ಮೊದಲು ನೀಡಿದ್ದ ದೂರಿಗೆ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಸರಿಯಾಗಿ ಸ್ಪಂದಿಸದ್ದಕ್ಕೆ ಅಸಮಾಧಾನ ವ್ಯಕ್ತಪಡಿಸಿ ಮುಂಬೈ ಇಂಡಿಯನ್ ಮತ್ತೊಂದು ಪತ್ರ ಬರೆದಿದೆ ‘ಬಿಸಿಸಿಐ ಸೂಕ್ತವಾದ ಪ್ರತಿಕ್ರಿಯೆ ನೀಡುವಲ್ಲಿ ವಿಫಲವಾಗಿದ್ದು ಹಾಗೂ ಮೌನವಾಗಿ ಕುಳಿತಿದ್ದು ಗಮನಿಸಿದರೆ ಹರಾಜು ವಿವಾದಾಸ್ಪದ ರೀತಿಯಲ್ಲಿ ನಡೆದಿದೆ ಎನ್ನುವುದು ಸ್ಪಷ್ಟವಾಗುತ್ತದೆ’ ಎಂದು ಮುಂಬೈ ಇಂಡಿಯನ್ಸ್ ಹೇಳಿದೆ.
ಜನವರಿ 8 ಮತ್ತು 9ರಂದು ಬೆಂಗಳೂರಿನಲ್ಲಿ ನಡೆದ ಹರಾಜಿನಲ್ಲಿ ಮೋಸ ನಡೆದಿರುವ ಕುರಿತು ಸ್ಪಷ್ಟವಾಗಿ ಕೆಲವು ಅಂಶಗಳನ್ನು ಗುರುತಿಸಿ ದೂರು ನೀಡಲಾಗಿತ್ತು. ಆದರೆ ಐಪಿಎಲ್ ಫ್ರಾಂಚೈಸಿಯಾದ ನಮ್ಮ ಪತ್ರಕ್ಕೆ ಬೆಲೆಯನ್ನೂ ನೀಡದೇ ಸುಮ್ಮನಿದ್ದುಬಿಟ್ಟಿದೆ. ಇದು ಅನುಮಾನ ಬಲಗೊಳ್ಳುವುದಕ್ಕೆ ಕಾರಣವಾಗಿದೆ ಎಂದು ತಿಳಿಸಿದೆ.
ಬಿಸಿಸಿಐ ಕಾರ್ಯದರ್ಶಿ ಎನ್.ಶ್ರೀನಿವಾಸನ್ ಅವರು ಫೆಬ್ರುವರಿ 4ರಂದು ಹೇಳಿಕೆ ನೀಡಿ ‘ಆಟಗಾರರ ಹರಾಜು ಪಾರದರ್ಶಕವಾಗಿ ಹಾಗೂ ನ್ಯಾಯಸಮ್ಮತವಾಗಿ ನಡೆದಿದೆ’ ಎಂದು ತಿಳಿಸಿದ್ದರು. ಅದನ್ನು ಒಪ್ಪದ ಮುಂಬೈ ಇಂಡಿಯನ್ಸ್ ತನ್ನ ಎಲ್ಲ ಅನುಮಾನಗಳಿಗೆ ಕ್ರಿಕೆಟ್ ಮಂಡಳಿಯು ಸೂಕ್ತವಾದ ಉತ್ತರಗಳನ್ನು ನೀಡಲೇಬೇಕು ಎಂದು ಒತ್ತಾಯಿಸಿದೆ.