ಬ್ಯಾಂಕಾಕ್ (ಪಿಟಿಐ): ಥಾಯ್ಲೆಂಡ್ ಪ್ರಧಾನಿ ಯಿಂಗ್ಲುಕ್ ಶಿನವತ್ರಾ ಅವರ ಪದಚ್ಯುತಿಗೆ ಆಗ್ರಹಿಸಿ ಸರ್ಕಾರಿ ವಿರೋಧಿಗಳು ನಡೆಸುತ್ತಿರುವ ‘ಜನದಂಗೆ’ಯ ಪ್ರತಿಭಟನೆ ಹಿಂಸಾರೂಪಕ್ಕೆ ತಿರುಗಿ, ಅಪಾಯಕಾರಿ ಹಂತ ತಲುಪಿದೆ.
ಇದರಿಂದ ಪೊಲೀಸ್ ಭದ್ರತಾ ತಾಣದಲ್ಲಿದ್ದ ಪ್ರಧಾನಿ ಸುರಕ್ಷಿತ ಸ್ಥಳಕ್ಕೆ ಪಲಾಯನ ಮಾಡಿದ್ದಾರೆ ಎನ್ನಲಾಗಿದ್ದು, ಆದರೆ ಸರ್ಕಾರ ಇದನ್ನು ನಿರಾಕರಿಸಿದೆ. ಭಾನುವಾರ ಇಲ್ಲಿ ಸರ್ಕಾರದ ಪರ ಮತ್ತು ವಿರೋಧಿ ಪ್ರತಿಭಟನಾಕಾರರ ನಡುವೆ ನಡೆದ ಘರ್ಷಣೆಯಲ್ಲಿ ಕನಿಷ್ಠ ಐವರು ಮೃತಪಟ್ಟು, ಇತರ ಸುಮಾರು ೪೫ ಜನ ಗಾಯಗೊಂಡಿದ್ದಾರೆ ಎಂದು ವರದಿಗಳು ತಿಳಿಸಿವೆ.
ಸರ್ಕಾರಿ ಭವನಕ್ಕೆ ಮುತ್ತಿಗೆ ಹಾಕಿ, ವಶಕ್ಕೆ ಪಡೆಯಲು ಯತ್ನಿಸಿದ 30 ಸಾವಿರಕ್ಕೂ ಹೆಚ್ಚಿನ ಪ್ರತಿಭಟನಾಕಾರರನ್ನು ತಡೆಯಲು ಪೊಲೀಸರು ಅಶ್ರುವಾಯು ಷೆಲ್ಗಳನ್ನು ಸಿಡಿಸಿದರು ಮತ್ತು ಜಲಫಿರಂಗಿ ಪ್ರಯೋಗಿಸಿದರು. ರಾಮ್ಖಾಮ್ಹೇಂಗ್ ವಿಶ್ವವಿದ್ಯಾಲಯದ ಆವರಣದಲ್ಲಿ ಶನಿವಾರ ಪ್ರತಿಭಟನೆ ನಡೆಸುತ್ತಿದ್ದಾಗ ಆರಂಭವಾದ ಹಿಂಸೆ ಭಾನುವಾರ ಬೆಳಿಗ್ಗೆವರೆಗೂ ಮುಂದುವರಿದು, ಐವರ ಸಾವಿಗೆ ಕಾರಣವಾಗಿದೆ.
ರೆಡ್ಶರ್ಟ್ ನಾಯಕ ಜತುಪಾರ್ನ್ ಪ್ರಾಂಫಾನ್ ಅವರ ಪ್ರಕಾರ, ಮೃತರಲ್ಲಿ ನಾಲ್ವರು ಸರ್ಕಾರಿ ಬೆಂಬಲಿಗರು. ವಿವಿ ಒಳಗಡೆ ಸಂಕಷ್ಟದಲ್ಲಿದ್ದ ಸುಮಾರು ೨,೦೦೦ ವಿದ್ಯಾರ್ಥಿಗಳನ್ನು ಪೊಲೀಸರು ತೆರವು ಮಾಡಿದ್ದಾರೆ. ಮೃತರಲ್ಲಿ ೨೧ ವರ್ಷದ ವಿದ್ಯಾರ್ಥಿ ಮತ್ತು ಸರ್ಕಾರಿ ಬೆಂಬಲಿಗ ಸೇರಿದ್ದಾರೆ. ವಿವಿ ಆವರಣದಲ್ಲಿ ಸ್ಫೋಟಕ ಪತ್ತೆಯಾಗಿದ್ದು, ಅದನ್ನು ನಿಷ್ಕ್ರಿಯಗೊಳಿಸಲಾಗಿದೆ
ಈ ಮಧ್ಯೆ, ಸರ್ಕಾರಿ ವಿರೋಧಿ ಪ್ರತಿಭಟನಾಕಾರರು, ಪ್ರಧಾನಿ ಯಿಂಗ್ಲುಕ್ ನೇತೃತ್ವದ ಸರ್ಕಾರದ ರಾಜೀನಾಮೆಗೆ ಒತ್ತಾಯಿಸಿ, ಸರ್ಕಾರಿ ಭವನದತ್ತ ಮೆರವಣಿಗೆಯಲ್ಲಿ ತೆರಳಿದರು. ನಂತರ ಎಲ್ಲ ಸಚಿವಾಲಯಗಳನ್ನು ವಶಕ್ಕೆ ಪಡೆದು, ಸರ್ಕಾರದ ಕಾರ್ಯನಿರ್ವಹಣೆಯನ್ನು ಸ್ಥಗಿತಗೊಳಿಸಿದರು. ಈ ಸಂದರ್ಭದಲ್ಲಿ ಪ್ರತಿಭಟನಾಕಾರರನ್ನು ಚದುರಿಸಲು ಪೊಲೀಸರು ಅಶ್ರುವಾಯು ಷೆಲ್ಗಳು ಮತ್ತು ಜಲಫಿರಂಗಿ ಬಳಸಿದರು.
ಸರ್ಕಾರಿ ವಿರೋಧಿ ಪ್ರತಿಭಟನಾಕಾರರು ಥಾಯಿ ಪಿಬಿಎಸ್ ಟೆಲಿವಿಷನ್ ಕೇಂದ್ರವನ್ನು ತಮ್ಮ ನಿಯಂತ್ರಣಕ್ಕೆ ತೆಗೆದುಕೊಂಡಿದ್ದು, ಇನ್ನೊಂದು ಗುಂಪು ಎಲ್ಲ ಅಡೆತಡೆಗಳನ್ನು ಮುರಿದು ಒಳಾಡಳಿತ ಸಚಿವಾಲಯದ ಆವರಣವನ್ನು ಪ್ರವೇಶಿಸುವಲ್ಲಿ ಯಶಸ್ವಿಯಾಯಿತು.
ಪ್ರತಿಭಟನಾಕಾರರನ್ನು ಹುರಿದುಂಬಿ ಸಿದ ವಿರೋಧಿ ಡೆಮಾಕ್ರಟ್ ಪಕ್ಷದ ನಾಯಕ ಮತ್ತು ಮಾಜಿ ಸಂಸದ ಸುದೀಪ್ ತಾಗ್ಸುಬನ್, ಅಧಿಕಾರಿಗಳು ಪ್ರತಿಕ್ರಮಕ್ಕೆ ತಯಾರಾಗುವ ಮುನ್ನವೇ ಅವರ ಮೇಲೆ ನಿಯಂತ್ರಣ ಸಾಧಿಸಿ, ಸರ್ಕಾರದ ಕಾರ್ಯನಿರ್ವಹಣೆಯನ್ನು ನಿತ್ರಾಣಗೊಳಿಸುವಂತೆ ಕರೆ ನೀಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.