ಧಾರವಾಡ: ಮಂಗಳವಾರ ನಡೆದ ಕರ್ನಾಟಕ ವಿಶ್ವವಿದ್ಯಾಲಯದ 61ನೇ ಘಟಿಕೋತ್ಸವದಲ್ಲಿ ಐವರು ಗಣ್ಯರಿಗೆ ಗೌರವ ಡಾಕ್ಟರೇಟ್ ಪದವಿ ನೀಡಿ ಗೌರವಿಸಲಾಯಿತು.
ಒಟ್ಟು ಆರು ಜನರಿಗೆ ಗೌರವ ಡಾಕ್ಟರೇಟ್ ಪದವಿ ಘೋಷಿಸಲಾಗಿತ್ತು. ಆದರೆ ಪಂಜಾಬ್ ರಾಜ್ಯಪಾಲ ಶಿವರಾಜ ಪಾಟೀಲ ಅವರು ಆಗಮಿಸಿರಲಿಲ್ಲ. ಪ್ರೊ.ನ.ವಜ್ರಕುಮಾರ, ಫಾದರ್ ಪಿ.ಜೆ. ಜೇಕಬ್, ಪ್ರೊ.ಸುಖದೇವ್ ಥೋರಟ್, ಕುಂ.ವೀರಭದ್ರಪ್ಪ, ಬಿ.ಎಫ್. ದಂಡಿನ ಅವರಿಗೆ ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಗೌರವ ಡಾಕ್ಟರೇಟ್ ಪದವಿ ಪ್ರದಾನ ಮಾಡಿದರು.
ಇದೇ ವೇಳೆ ಹಿಂದಿನ ಕುಲಪತಿ ಪ್ರೊ. ಶ್ರೀನಿವಾಸ ಸೈದಾಪುರ ಅವರಿಗೆ ಜೀವಮಾನ ಪ್ರೊಫೆಸರ್ ಪುರಸ್ಕಾರವನ್ನು ಪ್ರಕಟಿಸಲಾಯಿತು. ಕವಿವಿಗೆ ಅವರು ನೀಡಿದ ಕೊಡುಗೆ ಹಾಗೂ ಶೈಕ್ಷಣಿಕ ಕ್ಷೇತ್ರದಲ್ಲಿನ ಸಾಧನೆಗೆ ಈ ಪುರಸ್ಕಾರ ನೀಡಲಾಗಿದೆ. ಆಡಳಿತ ಕಚೇರಿ ಎದುರು ಕುಲಾಧಿಪತಿಗಳಿಗೆ ಗೌರವ ಸಲ್ಲಿಸಲಾಯಿತು.
ನಂತರ ಮೆರವಣಿಗೆಯಲ್ಲಿ ಗಾಂಧಿ ಭವನಕ್ಕೆ ಕರೆತರಲಾಯಿತು. ಪ್ರಮಾಣಪತ್ರ ಸ್ವೀಕರಿಸುವ ಅಭ್ಯರ್ಥಿಗಳು, ವಿದ್ಯಾವಿಷಯಕ ಪರಿಷತ್ ಸದಸ್ಯರು, ಕುಲಸಚಿವರು, ಸಿಂಡಿಕೇಟ್ ಸದಸ್ಯರು, ಗೌರವ ಡಾಕ್ಟರೇಟ್ ಪದವೀಧರರು ಮೆರವಣಿಗೆಯಲ್ಲಿದ್ದರು.