ಬೆಂಗಳೂರು (ಪಿಟಿಐ): ಪಕ್ಷದ 12 ಮಂದಿ ಬಂಡುಕೋರ ಶಾಸಕರ (ವಿಧಾನಸಭಾ ಸದಸ್ಯರು) ಅನರ್ಹತೆಗೆ ಮನವಿ ಸಲ್ಲಿಸಿದ ಒಂದು ದಿನದ ಬಳಿಕ ಮಂಗಳವಾರ ಇದೇ ಮಾದರಿಯ ಇನ್ನೊಂದು ಕ್ರಮವನ್ನು ಕೈಗೊಂಡಿರುವ ಆಡಳಿತಾರೂಢ ಬಿಜೆಪಿ, ಪಕ್ಷದ ಐವರು ವಿಧಾನಪರಿಷತ್ ಸದಸ್ಯರನ್ನು 'ಪಕ್ಷ ವಿರೋಧಿ ಚಟುವಟಿಕೆಗಳಿಗಾಗಿ' ಅನರ್ಹಗೊಳಿಸುವಂತೆ ಕೋರಿಕೆ ಸಲ್ಲಿಸಿತು.
ವಿಧಾನಪರಿಷತ್ ಸದಸ್ಯರೂ ಆಗಿರುವ ಬಿಜೆಪಿ ವಕ್ತಾರ ಅಶ್ವತ್ಥನಾರಾಯಣ ಮತ್ತು ಸೋಮಣ್ಣ ಬೇವಿನಮರದ ಅವರು ವಿಧಾನ ಪರಿಷತ್ ಕಾರ್ಯದರ್ಶಿ ವಿ. ಶ್ರೀಷ ಅವರಿಗೆ ದೂರು ನೀಡಿ ಐವರು ವಿಧಾನ ಪರಿಷತ್ ಸದಸ್ಯರನ್ನು ಅನರ್ಹಗೊಳಿಸಬೇಕು ಎಂದು ಮನವಿ ಮಾಡಿದರು.
ಬಿ ಜೆ ಪುಟ್ಟಸ್ವಾಮಿ, ಮೋಹನ ಲಿಂಬಿಕಾಯಿ, ಭಾರತಿ ಶೆಟ್ಟಿ, ಮುಮ್ತಾಜ್ ಅಲಿಖಾನ್ ಮತ್ತು ಶಿವರಾಜ ಸಜ್ಜನರ ಅವರನ್ನು ಹಾವೇರಿಯಲ್ಲಿ ಕೆಜೆಪಿ ಸಮಾವೇಶ ನಡೆದ 2012 ಡಿಸೆಂಬರ್ 9ರಿಂದ ಜಾರಿಯಾಗುವಂತೆ ಸದಸ್ಯತ್ವದಿಂದ ಅನರ್ಹಗೊಳಿಸಬೇಕು ಎಂದು ಪಕ್ಷ ಬಯಸಿದೆ.
ಬಿಜೆಪಿ ಸದಸ್ಯರಾಗಿ ಆಯ್ಕೆಯಾಗಿದ್ದರೂ ಬೇರೊಂದು ರಾಜಕೀಯ ಪಕ್ಷದ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವ ಮೂಲಕ ಸಂವಿಧಾನದ 10ನೇ ಷೆಡ್ಯೂಲಿನ 2(1) ವಿಧಿಯನ್ನು ವಿಧಾನ ಪರಿಷತ್ತಿನ ಈ ಸದಸ್ಯರು ಉಲ್ಲಂಘಿಸಿದ್ದಾರೆ ಎಂದು ಬಿಜೆಪಿ ಪ್ರತಿಪಾದಿಸಿದೆ.
ಬಿ.ಎಸ್. ಯಡಿಯೂರಪ್ಪ ಅವರ ಕರ್ನಾಟಕ ಜನತಾ ಪಕ್ಷ (ಕೆಜೆಪಿ) ಜೊತೆಗೆ ಗುರುತಿಸಿಕೊಂಡ 12 ಮಂದಿ ವಿಧಾನಸಭಾ ಸದಸ್ಯರನ್ನು ಅನರ್ಹಗೊಳಿಸಬೇಕು ಎಂದು ಬಿಜೆಪಿ ಸೋಮವಾರ ದೂರು ಸಲ್ಲಿಸಿತ್ತು.