ಬೆಂಗಳೂರು: ಒಂದಂಕಿ ಲಾಟರಿ ದಂಧೆ ಯನ್ನು ಕೂಡಲೇ ನಿಲ್ಲಿಸಬೇಕು, ಇಲ್ಲವೇ ಗೃಹ ಸಚಿವ ಕೆ.ಜೆ. ಜಾರ್ಜ್ ರಾಜೀ ನಾಮೆ ನೀಡಬೇಕೆಂದು ವಿಧಾನ ಸಭೆಯ ವಿರೋಧ ಪಕ್ಷದ ನಾಯಕ ಎಚ್.ಡಿ. ಕುಮಾರಸ್ವಾಮಿ ಒತ್ತಾಯಿಸಿದರು.
ರಾಮನಗರ ಸೇರಿದಂತೆ ರಾಜ್ಯದ ಎಲ್ಲ ಕಡೆ ದಿನನಿತ್ಯ ಒಂದಂಕಿ ಲಾಟರಿ ದಂಧೆ ನಡೆಯುತ್ತಿದೆ. ಫಲಿತಾಂಶ ವಿಜೇತರ ಪಟ್ಟಿ ತೆಲುಗು ಪತ್ರಿಕೆಗಳಲ್ಲಿ ಪ್ರಕಟವಾ ಗುತ್ತಿದೆ. ಇಷ್ಟಾದರೂ ಸರ್ಕಾರ ಯಾವುದೇ ಕ್ರಮಕೈಗೊಂಡಿಲ್ಲ ಎಂದು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದರು.
‘ಬೆಂಗಳೂರಿನ ಮೈಕೆಲ್ ಎಂಬ ವ್ಯಕ್ತಿ ಇದರ ಪ್ರಮುಖ ಸೂತ್ರಧಾರ. ಈತ ಪೊಲೀಸರಿಗೆ ತಿಂಗಳಿಗೆ ಎಷ್ಟು ಹಣ ಕೊಡುತ್ತಾರೆ? ಇದರಲ್ಲಿ ಗೃಹ ಸಚಿವರಿಗೂ ಪಾಲು ಹೋಗುತ್ತಿದೆಯೇ’ ಎಂದು ಖಾರವಾಗಿ ಪ್ರಶ್ನಿಸಿದರು.
‘ಬಡವರು ಕಷ್ಟಪಟ್ಟು ದುಡಿದ ಹಣ ಲಾಟರಿಗೆ ಹೋಗುತ್ತಿದೆ. ಇದನ್ನು ಸರ್ಕಾರದ ಗಮನಕ್ಕೆ ತಂದರೆ ಜಾರ್ಜ್ ಅವರು ನನ್ನ ಬಗ್ಗೆಯೇ ಆರೋಪ ಮಾಡಿದ್ದಾರೆ. ನಾನು ಮುಖ್ಯಮಂತ್ರಿ ಯಾಗಿದ್ದ ಅವಧಿಯಲ್ಲಿ ಕಪ್ಪಕಾಣಿಕೆ ಪಡೆದಿರುವುದನ್ನು ಸಾಬೀತುಪಡಿಸಿದರೆ ರಾಜಕೀಯ ನಿವೃತ್ತಿ ಪಡೆಯುತ್ತೇನೆ’ ಎಂದು ಸವಾಲು ಹಾಕಿದರು.
‘ನಾನು ನಾಲಿಗೆ ತೆವಲಿಗಾಗಿ ಮಾತನಾಡುತ್ತಿಲ್ಲ. ಈ ದಂಧೆಯಲ್ಲಿ ತೊಡಗಿರುವವರು ಪ್ರತಿನಿತ್ಯ ಎಷ್ಟು ಚಂದಾ, ಕಪ್ಪಕಾಣಿಕೆ ಕೊಡುತ್ತಾರೆ ಎಂಬುದು ಗೊತ್ತಿದೆ. ಲಾಟರಿ ಮತ್ತು ಸಾರಾಯಿ ನಿಷೇಧ ಜಾಗೃತದಳ ಏನು ಮಾಡುತ್ತಿದೆ’ ಎಂದು ಪ್ರಶ್ನಿಸಿದರು.
ಈ ವಿಷಯವನ್ನು ಬಯಲಿಗೆ ಎಳೆದ ನಂತರ ಅಂಗಡಿಗಳಲ್ಲಿ ಲಾಟರಿ ಟಿಕೆಟ್ ಮಾರಾಟ ವಾಗುವುದು ನಿಂತಿದೆ. ಜೇಬಿನಲ್ಲಿ ಇಟ್ಟುಕೊಂಡು ಮಾರುತ್ತಿ ದ್ದಾರೆ ಎಂದು ಆರೋಪಿಸಿದರು.
‘ಡಿ.ಸಿ.ಗಳ ವಿರುದ್ಧ ಕ್ರಮ ಕೈಗೊಳ್ಳಿ’
ಗೆಜೆಟೆಡ್ ಅಧಿಕಾರಿ ಆಶಾ ಪರ್ವೀನ್ ಅವರನ್ನು ಸೇವೆಯಿಂದ ವಜಾ ಮಾಡಿರುವ ವಿಷಯಪ್ರಸ್ತಾಪಿಸಿದ ಕುಮಾರಸ್ವಾಮಿ, ಜಾತಿ ಮತ್ತು ಆದಾಯ ಪ್ರಮಾಣ ಪತ್ರವನ್ನು ಪರಿಶೀಲಿಸಿ ದೃಢೀಕರಿಸು ವುದು ಜಿಲ್ಲಾಧಿಕಾರಿಗಳು. ಆದ್ದರಿಂದ ಇದಕ್ಕೆ ಕಾರಣರಾದ ಜಿಲ್ಲಾಧಿಕಾರಿ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
2006ರಲ್ಲಿ ಜಿಲ್ಲಾಧಿಕಾರಿಗಳು ಆದಾಯ ಮತ್ತು ಜಾತಿ ಪ್ರಮಾಣ ಪತ್ರವನ್ನು ದೃಢೀಕರಿಸಿ ವರದಿ ನೀಡಿದ್ದಾರೆ. ಅದಾದ ನಂತರ
ಆಶಾ ಅವರಿಗೆ ನೇಮಕಾತಿ ಆದೇಶ ನೀಡಲಾಗಿದೆ. ಇದಕ್ಕೆ ಜಿಲ್ಲಾಧಿಕಾರಿಗಳು ಹೊಣೆಗಾರರೇ ಹೊರತು ಕರ್ನಾಟಕ ಲೋಕಸೇವಾ ಆಯೋಗ ಅಲ್ಲ ಎಂದರು.
ತಹಶೀಲ್ದಾರ್ ನೀಡಿರುವ ಆದಾಯ ಮತ್ತು ಜಾತಿ ಪ್ರಮಾಣ ಪತ್ರ ಸರಿ ಇದೆಯೇ ಎಂದು ಪರಿಶೀಲಿ ಸುವುದು ಜಿಲ್ಲಾಧಿಕಾರಿ ಕೆಲಸ. ಅಮಾಯಕರ ವಿರುದ್ಧ ಕ್ರಮ ಕೈ ಗೊಳ್ಳುವ ಬದಲು ದೃಢೀಕರಣ ಮಾಡಿದ ಹಿರಿಯ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದುಆಗ್ರಹಿಸಿದರು.
ಕೆಪಿಎಸ್ಸಿ, ಬೆಂಗಳೂರು ಕೃಷಿ ವಿವಿ, ಕರ್ನಾಟಕ ರಾಜ್ಯ ಮುಕ್ತ ವಿವಿ ಸೇರಿದಂತೆ ಬಹುತೇಕ ಎಲ್ಲ ಸಂಸ್ಥೆಗಳ ಮೇಲೂ ಆರೋಪ ಮಾಡಲಾ ಗುತ್ತಿದೆ. ಆಪಾದನೆ ಬಂದ ಕೂಡಲೇ ತನಿಖೆ ನಡೆಸುವ ಬದಲು ಮೊದಲು ಸತ್ಯಾಸತ್ಯತೆಯನ್ನು ಅರಿಯಬೇಕು.
ಈ ರೀತಿ ಆರೋಪ ಮಾಡುತ್ತಾ ಹೋದರೆ ಇದಕ್ಕೆ ಕೊನೆ ಇರುವುದಿಲ್ಲ. ಈಗಾಗಲೇ 1.25 ಲಕ್ಷ ಹುದ್ದೆಗಳು ಖಾಲಿ ಇವೆ. ಸರ್ಕಾರಿ ಕೆಲಸಕ್ಕೆ ಸೇರಲು ಮುಂದೆ ಬಾರದ ಸ್ಥಿತಿ ನಿರ್ಮಾಣ ಆಗಬಹುದು ಎಂದರು.
ಸಿಐಡಿಯಲ್ಲಿ ಇರುವ ಅಧಿಕಾರಿ ಗಳೆಲ್ಲ ಸತ್ಯ ಹರಿಶ್ಚಂದ್ರರಲ್ಲ. ಕೆಲವರನ್ನು ಬಲಿಪಶು ಮಾಡುವ ಉದ್ದೇಶದಿಂದ ಬಿ.ಎಸ್. ಯಡಿಯೂರಪ್ಪ ಅವರು ಮುಖ್ಯ ಮಂತ್ರಿಯಾಗಿದ್ದಾಗ ಜಾತಿ ವಿಷಯ ದಲ್ಲಿ ಸಂಕುಚಿತವಾಗಿ ನಡೆದು ಕೊಂಡರು. ಇದಕ್ಕೆ ಕಡಿವಾಣ ಹಾಕದಿದ್ದರೆ ಪರಿಹಾರ ಸಿಗುವುದಿಲ್ಲ ಎಂದು ಆತಂಕ ವ್ಯಕ್ತಪಡಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.