ಈಟೀವಿ ಕನ್ನಡ ವಾಹಿನಿ `ಒಂದಾನೊಂದು ಕಾಲದಲ್ಲಿ ಮೂಕಾಂಬಿಕಾ~ ಹೆಸರಿನ ಧಾರಾವಾಹಿ ಆರಂಭಿಸುತ್ತಿದೆ.
ಕನಕದುರ್ಗವನ್ನು ಆಳುತ್ತಿದ್ದ ಚಿತ್ರಶೇಖರ ಎನ್ನುವ ಪ್ರಜಾವತ್ಸಲ ರಾಜ ಹಾಗೂ ದೀನರ ಸಂಕಟಕ್ಕೆ ಸ್ಪಂದಿಸುವ ಮದನಾಂಬಿಕೆ ಎನ್ನುವ ಮಹಾರಾಣಿಯ ಕಥನವಿದು. ಈ ರಾಜ ದಂಪತಿಗೆ ಎಷ್ಟು ವರ್ಷಗಳಾದರೂ ಮಕ್ಕಳಾಗಲಿಲ್ಲ. ಆಗವರು ದೇವಿ ಮೂಕಾಂಬಿಕೆಯ ಮೊರೆ ಹೋದರು. ಮೂಕಾಂಬಿಕೆಯ ಕೃಪೆಯಿಂದ ಮುದ್ದಾದ ಹೆಣ್ಣುಮಗು ಜನಿಸಿತು. ಅವಳ ಹೆಸರನ್ನು ಮೂಕಾಂಬಿಕೆ ಎಂದೇ ಕರೆದರು.
ಈ ರಾಜಕುಮಾರಿಯ ಸುತ್ತ ಹೆಣೆಯಲಾದ ಕಥೆ ಈ ಧಾರಾವಾಹಿಯದು. ಬೃಹತ್ ಸೆಟ್ಗಳು, ವೈಭವ ತುಂಬಿದ ವಸ್ತ್ರಗಳು, ಹಾಡು ಕುಣಿತ ಇವೆಲ್ಲವೂ ಸೇರಿದಂತೆ ಉತ್ತಮವಾದ ಕಥೆ ಈ ಧಾರಾವಾಹಿಯಲ್ಲಿದೆ ಎನ್ನುತ್ತಾರೆ ನಿರ್ಮಾಪಕ ಚೈತನ್ಯ ಕಾರೇಹಳ್ಳಿ. ಕತೆ, ಚಿತ್ರಕತೆಯನ್ನೂ ಅವರೇ ಬರೆದಿದ್ದಾರೆ. ನಿರ್ದೇಶನ ರಾಜೇಂದ್ರ ಸಿಂಗ್ ಅವರದ್ದು.
ಬೇಬಿ ನಿಶ್ಚಿತ, ಸುನೀಲ್ ಪುರಾಣಿಕ್, ಗಿರಿಜಾ ಲೋಕೇಶ್, ಅರವಿಂದ್ ರಾವ್, ಏಣಗಿ ನಟರಾಜ್, ನಿಧಿ ಚಕ್ರವರ್ತಿ, ಅರ್ಚನ ಮತ್ತಿತರರು ತೆರೆಯ ಮೇಲೆ ಕಾಣಿಸಿಕೊಳ್ಳಲಿದ್ದಾರೆ. ಅಕ್ಟೋಬರ್ 31ರಿಂದ ಪ್ರತಿ ಸೋಮವಾರದಿಂದ ಶುಕ್ರವಾದವರೆಗೆ ಸಂಜೆ 7-30ಕ್ಕೆ ಧಾರಾವಾಹಿ ಪ್ರಸಾರವಾಗಲಿದೆ.