ರಾಜರಾಜೇಶ್ವರಿನಗರ: `ನೈಸ್~ ಸಂಸ್ಥೆ ನಿರ್ಮಿಸಲಿರುವ ರಸ್ತೆಗೆ ಎಷ್ಟು ಬೇಕಾದರೂ ಜಮೀನು ನೀಡಲು ಸರ್ಕಾರ ಸಿದ್ದವಿದೆ. ಆದರೆ, ಉಪನಗರ ಯೋಜನೆಯಡಿ ರಿಯಲ್ ಎಸ್ಟೇಟ್ ದಂಧೆ ಮಾಡಲು ಯಾವುದೇ ಕಾರಣಕ್ಕೂ ಒಂದಿಂಚೂ ಭೂಮಿ ನೀಡುವುದಿಲ್ಲ ಎಂದು ಸಚಿವೆ ಶೋಭಾ ಕರಂದ್ಲಾಜೆ ತಿಳಿಸಿದ್ದಾರೆ.
ಯಶವಂತಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕೆ. ಗೊಲ್ಲಹಳ್ಳಿಯಲ್ಲಿ ಕೆರೆ ಅಭಿವೃದ್ಧಿ ಮತ್ತು ವಿವಿಧ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.
`ಅನ್ನದಾತನ ಜಮೀನನ್ನು ಯಾರೂ ಅಭಿವೃದ್ಧಿ ಹೆಸರಿನಲ್ಲಿ ಕಸಿದುಕೊಳ್ಳಬಾರದು. ಸಂಪುಟ ಸಭೆಯಲ್ಲಿ ತೀರ್ಮಾನ ಕೈಗೊಂಡಂತೆ ಜಮೀನು ನೀಡುವ ರೈತರಿಗೆ ಎಕರೆಗೆ ರೂ. 41 ಲಕ್ಷ ಹಾಗೂ ಒಂದು ನಿವೇಶನ ನೀಡಲು `ನೈಸ್~ ಸಂಸ್ಥೆ ಕೂಡ ಬದ್ಧವಾಗಿರಬೇಕು~ ಎಂದು ಅವರು ಮನವಿ ಮಾಡಿದರು.
`ಕ್ಷೇತ್ರದ ವ್ಯಾಪ್ತಿಯಲ್ಲಿ ಕೆರೆಗಳ ಒತ್ತುವರಿ ಜಾಗ ತೆರವುಗೊಳಿಸಲು ಅಧಿಕಾರಿಗಳು ಮುಂದಾಗುವ ಮೂಲಕ ನಮ್ಮ ಪೂರ್ವಿಕರು ನಿರ್ಮಿಸಿರುವ ಕೆರೆ ಕಟ್ಟೆಗಳನ್ನು ಉಳಿಸಬೇಕು~ ಎಂದು ಸಚಿವೆ ಕೋರಿದರು.
ಜಿಲ್ಲಾ ಪಂಚಾಯಿತಿ ಸದಸ್ಯ ಎ.ಶಿವಕುಮಾರ್ ಮಾತನಾಡಿ, ಗ್ರಾಮೀಣ ಭಾಗದ ಸಮಗ್ರ ಅಭಿವೃದ್ಧಿಗಾಗಿ ವಿಶೇಷ ಅನುದಾನ ಬಿಡುಗಡೆ ಮಾಡಲು ಸರ್ಕಾರದ ಮೇಲೆ ಒತ್ತಡ ಹೇರುವಂತೆ ಸಚಿವೆ ಶೋಭಾ ಕರಂದ್ಲಾಜೆ ಅವರಲ್ಲಿ ಮನವಿ ಮಾಡಿದರು.
ಜಿ.ಪಂ. ಸದಸ್ಯೆ ಸರ್ವಮಂಗಳಾ ಕೃಷ್ಣಪ್ಪ, ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಎಂ.ನಾಗರಾಜು, ಜಾಗೃತ ಸಮಿತಿ ಅಧ್ಯಕ್ಷ ಜಿ.ವಿಜಯಕುಮಾರ್, ಕ್ಷೇತ್ರದ ಆಶ್ರಯ ಸಮಿತಿ ಅಧ್ಯಕ್ಷ ರೇಣುಕಪ್ಪ, ಭೂ ನ್ಯಾಯಮಂಡಳಿ ಮಾಜಿ ನಿರ್ದೇಶಕ ರಾಮೋಹಳ್ಳಿ ವಿ.ವೇಣುಗೋಪಾಲ್, ಕ್ಷೇತ್ರದ ಬಿಜೆಪಿ ಅಧ್ಯಕ್ಷ ಎಚ್.ಎನ್.ಕೃಷ್ಣ, ಬಿಬಿಎಂಪಿ ಸದಸ್ಯೆ ವೀಣಾ ನಾಗರಾಜು, ತಾ.ಪಂ. ಸದಸ್ಯೆ ಪ್ರಮೀಳಾ ಮಂಜುನಾಥ್, ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಎಸ್.ಆರ್.ಬಾಬು, ಬಿಜೆಪಿ ಮುಖಂಡರಾದ ನಜೀರ್, ಉಗ್ರ ನರಸಿಂಹಯ್ಯ, ವಿಜಯಕುಮಾರ್, ವಿವಿಧ ಗ್ರಾ.ಪಂ. ಅಧ್ಯಕ್ಷರಾದ ಬೆಟ್ಟಯ್ಯ ಮುನಿಕಾಳಪ್ಪ, ಗೋಪಾಲಕೃಷ್ಣ, ನಂಜುಂಡೇಶ್, ತಾ.ಪಂ. ಮಾಜಿ ಅಧ್ಯಕ್ಷರಾದ ಬಿ.ಕೃಷ್ಣಪ್ಪ, ಎಚ್. ನಾಗರಾಜು ಸೇರಿದಂತೆ ಹಲವಾರು ಮುಖಂಡರು ಹಾಜರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.