ಗಂಗಾವತಿ: ಒಂದೇ ಆಸ್ತಿ ಇಬ್ಬರು ವಾರಸುದಾರರನ್ನು ಹಾಗೂ ಎರಡು ದಾಖಲೆಗಳನ್ನು ಸೃಷ್ಟಿಸುವ ಮೂಲಕ ಇಲ್ಲಿನ ನಗರಸಭೆಯ ಕಂದಾಯ ವಿಭಾಗದ ಸಿಬ್ಬಂದಿ, ಆಸ್ತಿಯ ಮೂಲ ವಾರಸುದಾರರನ್ನು ವಂಚಿಸಲು ಯತ್ನಿಸಿರುವ ಘಟನೆ ಬೆಳಕಿಗೆ ಬಂದಿದೆ.
ಆಸ್ತಿಯ ಮೂಲ ವಾರಸುದಾರರು ಎನ್ನಲಾದ ಅಂಬಮ್ಮ ಗಂಡ ಲಿಂಗಪ್ಪ ಕೋರಿ, ತಮ್ಮ ಆಸ್ತಿಗೆ ಸಂಬಂಧಿಸಿದ ಎಲ್ಲ ದಾಖಲೆ, ತೆರಿಗೆ ಪಾವತಿ ರಸೀದಿ ಸಂಗ್ರಹಿಸಿ ಇದೀಗ ನಗರಸಭೆಯ ವಿರುದ್ಧ ಕಾನೂನು ಸಮರದ ಮೊರೆ ಹೋಗುತ್ತಿರುವುದರಿಂದ ಪ್ರಕರಣ ಬಯಲಿಗೆ ಬಂದಿದೆ.
ಪ್ರಕರಣದ ವಿವರ: ನಗರಸಭಾ ವ್ಯಾಪ್ತಿಯ ಮುರಹರಿ ನಗರದ ಕುರಿ ಕಮೇಲಿ ಸಮೀಪ ಬ್ಲಾಕ್ ನಂಬರ್ ಪ್ಲಾಟ್ ನಂಬರ್ 23ನ್ನು ನಗರಸಭೆ, 1992ರಲ್ಲಿ 15X20 ಸೈಜಿನ ಟಿಎಂಜಿ/ ಪ್ಲಾಟ್/48/91–92 ನಿವೇಶನವನ್ನು ಅಂಬಮ್ಮ ಅವರಿಗೆ ₨ 900 ಪಡೆದು ವಿತರಿಸಿತ್ತು.
ಆರ್ಥಿಕ ದುರ್ಬಲರ ಕೋಟಾದಡಿ ಅಂಬಮ್ಮರಿಗೆ 1992ರ ಜೂನ್ 17ರಂದು ನಗರಸಭೆಯು ನಿವೇಶನಕ್ಕೆ ಸಂಬಂಧಿಸಿದ ಹಕ್ಕುನ್ನು ಖರೀದಿ ಪತ್ರದ ಮೂಲಕ ಬಿಟ್ಟು ಕೊಟ್ಟಿತ್ತು. ನಿವೇಶನದ ಸುತ್ತಲಿನ ಚಕ್ಕುಬಂದಿಯ ಮಾಹಿತಿಯನ್ನು ಹಕ್ಕುಪತ್ರದಲ್ಲಿ ವಿವರಿಸಲಾಗಿತ್ತು.
1992ರಿಂದ 2013ರ ನವೆಂಬರ್ವರೆಗೂ ಅಂಬಮ್ಮರ ಹೆಸರಲ್ಲಿರುವ ನಿವೇಶನಕ್ಕೆ ವಾರಸುದಾರರು ತೆರಿಗೆ ಪಾವತಿಸುತ್ತಾ ಬಂದಿದ್ದಾರೆ. ಸದರಿ ಪ್ಲಾಟ್ನ ದಾಖಲೆಗಳನ್ನು ಪರಿಶೀಲಿಸಿದ ನಗರಸಭೆಯ ಪೌರಾಯುಕ್ತ, ನಿವೇಶನ ಅಂಬಮ್ಮರಿಗೆ ಸೇರಿದ್ದು ಎಂದು 24.10.2013ರಂದು ದೃಢೀಕರಣ ನೀಡಿದ್ದಾರೆ.
ಮತ್ತೊಬ್ಬರ ಸೃಷ್ಟಿ: ಆದರೆ ನಗರಸಭೆಯ ಕಂದಾಯ ವಿಭಾಗದ ಸಿಬ್ಬಂದಿಯು ನಗರಸಭೆಯಿಂದ ಅಂಬಮ್ಮರಿಗೆ ಮಂಜೂರಾಗಿದ್ದ ನಿವೇನಕ್ಕೆ ಫಾತೀಮಾ ಗಂಡ ಇಮಾಮ್ಸಾಬರನ್ನು ವಾರಸುದಾರರಾಗಿ ಸೃಷ್ಟಿಸಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ಬಸವರಾಜ ಬೆಣಕಲ್ ಆರೋಪಿಸಿದ್ದಾರೆ.