ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಂದೇ ಕಂಪ್ಯೂಟರ್‌ನಲ್ಲಿ ಎಲ್ಲಾ ದಾಖಲೆ ಸಿದ್ಧ !

ವಿಐಎಸ್ಎಲ್ ವಂಚನೆ ಪ್ರಕರಣ
Last Updated 14 ಸೆಪ್ಟೆಂಬರ್ 2013, 5:55 IST
ಅಕ್ಷರ ಗಾತ್ರ

ಭದ್ರಾವತಿ: ವಿಐಎಸ್‌ಎಲ್‌ ಕಾರ್ಖಾನೆ ಇತಿಹಾಸದಲ್ಲಿ 22ವರ್ಷಗಳ ನಂತರ ನಡೆದಿರುವ ವಂಚನೆ ಪ್ರಕರಣದಲ್ಲಿ ಒಬ್ಬ ಅಧಿಕಾರಿ ಸೇರಿದಂತೆ ಐದು ಮಂದಿ ಖರೀದಿದಾರರ ವಿರುದ್ಧ ದಾಖಲಾಗಿರುವ ಮೊಕದ್ದಮೆಯ ತನಿಖೆಯಲ್ಲಿ ಸಾಕಷ್ಟು ಹೊಸ ವಿಚಾರಗಳು ಬೆಳಕಿಗೆ ಬಂದಿದೆ. 

ಯಾವುದೇ ಕಾರಣಕ್ಕೂ ಪಿಗ್‌ಐರನ್‌ ಮಾರಾಟವನ್ನು ಸಾಲದ ರೂಪದಲ್ಲಿ ಮಾಡುವಂತಿಲ್ಲ. ಹಾಗೇನಾದರೂ ಮಾರಲು ಮುಂದಾದಲ್ಲಿ, ಕಾರ್ಖಾನೆ ಕಾರ್ಯಪಾಲಕ ನಿರ್ದೇಶಕರ ಅನುಮತಿ ಪಡೆಯಬೇಕೆಂಬ ನಿಯಮವನ್ನು ಗಾಳಿಗೆ ತೂರಲಾಗಿದೆ.

ವಂಚನೆಗೆ ದಾರಿ: ಮಾರುಕಟ್ಟೆ ವಿಭಾಗದ ಗಣಕೀಕೃತ ಯಂತ್ರದಲ್ಲೇ ಪಿಗ್‌ ಐರನ್‌ ಮಾರಾಟದ ಬಿಲ್‌, ಅದರ ಸಾಗಣೆ ಅನುಮತಿ ಹಾಗೂ ಇನ್ನಿತರ ದಾಖಲೆಗಳು  ಸದ್ಯದ ತನಿಖೆಯಿಂದ ತಿಳಿದಿದೆ ಎಂದು ಮೂಲಗಳು  ತಿಳಿಸಿವೆ.

ಒಂದು ವಸ್ತುವಿನ ಮಾರಾಟ ವಿಚಾರದಲ್ಲಿ ಅನುಸರಿಬೇಕಾದ  ಕ್ರಮಗಳನ್ನು  ಈ ಪ್ರಕರಣದಲ್ಲಿ ಗಾಳಿಗೆ ತೂರಿ ಸ್ಟಾಕ್‌, ಹಣಕಾಸು, ಅಡಿಟ್‌ ವಿಭಾಗಕ್ಕೆ ವರದಿ ರವಾನೆಯಾಗದ ರೀತಿಯಲ್ಲಿ ಪಿಗ್‌ಐರನ್‌ ಸಾಗಟ ನಡೆದಿರುವುದು ಈಗ ಬಯಲಾಗಿದೆ.

ಆದರೆ, ಈ ಎಲ್ಲಾ ಕೆಲಸವನ್ನು ಪ್ರಕರಣದ ಪ್ರಮುಖ ಆರೋಪಿಯಾಗಿರುವ ಮಾರುಕಟ್ಟೆ ವಿಭಾಗದ ಸಹಾಯಕ ವ್ಯವಸ್ಥಾಪಕ ಮಲ್ಲಿಕಾರ್ಜುನಪ್ಪ ಒಬ್ಬರಿಂದ ಮಾಡಲು ಸಾಧ್ಯವಿಲ್ಲ. ಇದರಲ್ಲಿ ಮತ್ತಷ್ಟು ಕಾಣದ ಕೈಗಳ ಕೆಲಸ ಮಾಡಿವೆ ಎಂಬ ಮಹತ್ವ ಅಂಶ ಬೆಳಕಿಗೆ ಬಂದಿದೆ ಎಂದು ಮೂಲಗಳು ತಿಳಿಸಿವೆ.

ಕಾರ್ಖಾನೆ ಅಡಿಟ್‌ ಮೌನ: ಕಳೆದ ಆರು ತಿಂಗಳ ಲೆಕ್ಕಪತ್ರ ತಪಾಸಣೆ, ಮಾರಾಟ ಲೆಕ್ಕ ಹಾಗೂ ಇನ್ನಿತರ ಹಣಕಾಸು ಪಟ್ಟಿ ಬಿಡುಗಡೆ ಸಂದರ್ಭದಲ್ಲಿ ಪತ್ತೆಯಾಗದ ಈ ಬಾರಿ ವಂಚನೆ ಪ್ರಕರಣ ಹೊರಗಡೆ ಲೆಕ್ಕಪರಿಶೋಧಕರ ತಪಾಸಣೆ ನಂತರ ಬೆಳಕಿಗೆ ಬಂದಿರುವುದು ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ.

ಹೊಸದಾಗಿ ಆಗಮಿಸಿದ ಕಾರ್ಯಪಾಲಕ ನಿರ್ದೇಶಕ ವರ್ಮಾ ಅವರ ಆಗಮನ ನಂತರ ಪ್ರತ್ಯೇಕ ಅಡಿಟ್‌ ಮಾಡಿಸಿದ ಸಂದರ್ಭದಲ್ಲಿ ವಂಚನೆ ಜಾಲ ಬಯಲಿಗೆ ಬಂದಿದ್ದು, ಕಾರ್ಖಾನೆ ಲೆಕ್ಕಪತ್ರ ಇಲಾಖೆಯ ಮೇಲೂ ಸಾಕಷ್ಟು ಅನುಮಾನ ಮೂಡಿದೆ.  

ಅಡಿಟ್‌ ಮೂಲಕ ಬಾಕಿ ಉಳಿದ ಹಣದ ವಿಚಾರ ತಿಳಿದ ನಂತರ ಕಾರ್ಖಾನೆ ಆಡಳಿತ ಮಂಡಳಿ ವಂಚನೆ ಆಗಿರುವ ಮೂಲ ಹಿಡಿಯುವ ಪ್ರಯತ್ನ ನಡೆಸಿದೆ. ಅದರ ಜತೆಗೆ ವಸೂಲಿಗೆ ಹಲವು ಕ್ರಮ ಜರುಗಿಸಿದರು ಯಾವುದೇ ಫಲ ನೀಡದ ಕಾರಣ ದೂರು ದಾಖಲಿಸಲು ಮುಂದಾಗಿದೆ.

ಈ ನಡುವೆ ಶಿಪ್‌ಮೆಂಟ್‌, ಮಾರಾಟ ಲೆಕ್ಕಪತ್ರ, ಅಂತರಿಕ ಲೆಕ್ಕ ಪರಿಶೋಧಕ ವಿಭಾಗಗಳ ನಿರ್ವಹಣೆಯಲ್ಲಿನ ಲೋಪಗಳ ಕಾರಣದಿಂದ  `2.71ಕೋಟಿ ವಂಚನೆ ಪ್ರಕರಣ ಸದ್ಯಕ್ಕೆ ಬೆಳಕಿಗೆ ಬಂದಿದ್ದು, ಇದರ ಹೊರತಾಗಿ ಸಾಕಷ್ಟು ಅವ್ಯವಹಾರ ನಡದಿದೆ ಎಂಬ ಮಾತುಗಳು ಕೇಳಿಬರುತ್ತಿವೆ.

  ತನಿಖಾ ಸಂದರ್ಭದಲ್ಲೂ ಸಹ ಮೇಲಿನ ಎಲ್ಲಾ ಇಲಾಖೆಯಲ್ಲಿನ ಕೆಲವು ದೌರ್ಬಲ್ಯದ ಸಂಗತಿಗಳು ಬೆಳಕಿಗೆ ಬಂದಿವೆ ಎಂದು ಮೂಲಗಳು ತಿಳಿಸಿದ್ದು, ಈ ನಡುವೆ  ಸರ್ಕಲ್‌ ಇನ್‌ಸ್ಪೆಕ್ಟರ್‌ ತಿರುಮಲೇಶ್‌ ನೇತೃತ್ವದ ತಂಡ ತನಿಖೆ ಚುರುಕು ಮಾಡುವ ನಿಟ್ಟಿನಲ್ಲಿ ಮುಂದಾಗಿದೆ.

  ಒಟ್ಟಿನಲ್ಲಿ ಎರಡು ದಶಕದ ನಂತರ ಬೆಳಕಿಗೆ ಬಂದಿರುವ ಈ ವಂಚನೆ ಪ್ರಕರಣ ಇತಿಹಾಸದಲ್ಲಿ ಅಡಗಿರುವ ಅನೇಕ ಘಟನೆಗಳನ್ನು ಹೊರ ತೆಗೆಯುವಲ್ಲಿ ಮುಂದಾಗುವುದೇ ಎಂಬುದು ಸದ್ಯಕ್ಕೆ ಕಾರ್ಮಿಕರಲ್ಲಿ ಚರ್ಚೆಯಾಗುತ್ತಿರುವ ಸಂಗತಿ.                                                                                                                                             

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT