ಮಂಡ್ಯ: ನಗರದ ವಿ.ವಿ. ನಗರದ ಒಂದನೇ ಕ್ರಾಸ್ನಲ್ಲಿ ಒಂದೇ ಕುಟುಂಬದ ಮೂವರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಂಗಳವಾರ ಬೆಳಕಿಗೆ ಬಂದಿದೆ.ಸೋಮಣ್ಣ ಕಾಳೇಗೌಡ (45), ಪತ್ನಿ ಸಾಕಮ್ಮ (40) ಮಗಳು ಪ್ರತಿಮಾ (21) ಆತ್ಮಹತ್ಯೆ ಮಾಡಿಕೊಂಡವರು.
ಸೋಮಣ್ಣ ಹಾಗೂ ಅವರ ಪತ್ನಿ ನೇಣು ಹಾಕಿಕೊಂಡಿದ್ದರೆ, ಮಗಳ ಶವ ಮನೆಯ ಒಳಗಡೆ ಬಿದ್ದಿದೆ. ಪ್ರತಿಮಾಳ ಸಾವು ಹೇಗಾಗಿದೆ ಎಂಬುದು ಗೊತ್ತಾಗಿಲ್ಲ. ಒಳಗಿನಿಂದ ಬಾಗಿಲು ಹಾಕಿಕೊಳ್ಳಲಾಗಿತ್ತು. ಮೃತ ಸೋಮಣ್ಣ ಬೆಂಗಳೂರಿನ ಕರ್ನಾಟಕ ಹಾಲು ಮಹಾಮಂಡಳಿಯಲ್ಲಿ ಟೈಪಿಸ್ಟ್ ಆಗಿ ಕೆಲಸ ಮಾಡುತ್ತಿದ್ದರು ಎಂದು ಪಶ್ಚಿಮ ಠಾಣೆಯ ಪೊಲೀಸರು ತಿಳಿಸಿದ್ದಾರೆ.
ಭಾನುವಾರವೇ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದ್ದು, ಭಾನುವಾರದಿಂದ ಯಾರೂ ಮನೆಯಿಂದ ಹೊರಗಡೆ ಬಂದಿರಲಿಲ್ಲ. ಶವ ಕೊಳೆತು, ವಾಸನೆ ಸುತ್ತಲು ಹರಡಿಕೊಂಡಿರುವುದರಿಂದ ಶಂಕಿತಗೊಂಡು ಸಂಬಂಧಿಕರು ಠಾಣೆಗೆ ತಿಳಿಸಿದರು. ಬಾಗಿಲು ತೆಗೆಸಿ ನೋಡಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ.