ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಂದೇ ದಿನ ಎರಡು ಊರಲ್ಲಿ ಸಭೆ!

Last Updated 2 ಜೂನ್ 2011, 8:45 IST
ಅಕ್ಷರ ಗಾತ್ರ

ಕುಷ್ಟಗಿ: ಶಾಸಕರ ಅಧ್ಯಕ್ಷತೆಯಲ್ಲಿ ನಡೆಯುವ ತ್ರೈಮಾಸಿಕ ಕೆಡಿಪಿ ಪ್ರಗತಿ ಪರಿಶೀಲನಾ ಸಭೆ ಮತ್ತು ಪ್ರತಿ ತಿಂಗಳು ಮೊದಲ ಶನಿವಾರ ನಡೆಯುವ ಜನಸ್ಪಂದನ ಸಭೆಗಳನ್ನು ಒಂದೇ ದಿನ ಎರಡು ಗ್ರಾಮಗಳಲ್ಲಿ ಹಮ್ಮಿಕೊಳ್ಳಲು ನಿರ್ಧರಿಸಿರುವ ಇಲ್ಲಿಯ ಅಧಿಕಾರಿಗಳ ಕ್ರಮಕ್ಕೆ ಅಚ್ಚರಿ ವ್ಯಕ್ತವಾಗಿದೆ.

ಕಂದಾಯ ಮತ್ತು ತಾ.ಪಂ ಕಚೇರಿ ಸೂಚನೆಯ ಪ್ರಕಾರ ಬೆಳಿಗ್ಗೆ 11 ಗಂಟೆಗೆ ಜನಸ್ಪಂದನ ಸಭೆ ಸುಮಾರು 60 ಕಿಮೀ ದೂರದ ವಕ್ಕಂದುರ್ಗ ಗ್ರಾಮದಲ್ಲಿ ನಡೆದರೆ ಅದೇ ದಿನ ಮಧ್ಯಾಹ್ನ 12 ಗಂಟೆಗೆ ನಿಲೋಗಲ್ ಗ್ರಾಮದಲ್ಲಿ ತ್ರೈಮಾಸಿಕ ಕೆಡಿಪಿ ಸಭೆ ನಡೆಯಲಿದೆ. ಅಲ್ಲಿಗೂ ಹಾಜರಾಗುವಂತೆ ತಾ.ಪಂ ಎಲ್ಲ ಅಧಿಕಾರಿಗಳು ಮತ್ತು ಚುನಾಯಿತ ಪ್ರತಿನಿಧಿಗಳು, ಮಾಧ್ಯಮಗಳಿಗೆ ನೋಟಿಸ್ ನೀಡಿದೆ. ಅಂದರೆ ವಕ್ಕಂದುರ್ಗ ಗ್ರಾಮದಲ್ಲಿ ನಡೆಯುವ ಜನಸ್ಪಂದನ ಸಭೆಗೆ ನಿಗದಿಯಾಗಿರುವ ಸಮಯ ಕೇವಲ ಒಂದು ತಾಸು ಮಾತ್ರ.

ಜನಸ್ಪಂದನ ಸಭೆ ಮುಗಿಸಿ ಅಧಿಕಾರಿಗಳು ನಿಲೋಗಲ್ ಗ್ರಾಮಕ್ಕೆ ಬಂದು ಸಭೆಗೆ ಆಗಮಿಸುವುದಕ್ಕೆ ಅರ್ಧಗಂಟೆ. ಬಂದಮೇಲೆ ಊಟೋಪಚಾರ, ಯಾರಿಗಾಗಿ ಕಾಯುವುದು ಬೇಡ ಎಂದರೂ ಸಭೆ ಆರಂಭವಾಗುವ ಹೊತ್ತಿಗೆ ಗಡಿಯಾರದ ಮುಳ್ಳು ಮಧ್ಯಾಹ್ನ 2 ಗಂಟೆ ದಾಟಿರುತ್ತದೆ. ಉಳಿದ ಮೂರು ತಾಸುಗಳಲ್ಲಿ ಸುಮಾರು 25ಕ್ಕೂ ಅಧಿಕ ಇಲಾಖೆಗಳ ಪ್ರಗತಿ, ಸಾಧಕ ಬಾಧಕಗಳು, ಸಮಸ್ಯೆಗಳ ಮೇಲೆ ಪರಾಮರ್ಷೆ ನಡೆಯಬೇಕು.

ಸರ್ಕಾರವೇ ಜನರ ಮನೆ ಬಾಗಿಲಿಗೆ ಹೋಗಿ ಸಮಸ್ಯೆಗಳಿಗೆ ಸ್ಪಂದಿಸಬೇಕೆಂಬುದು ಸರ್ಕಾರದ ಆಶಯ. ರೀತಿ ಪುರಸಭೆ ಸೇರಿದಂತೆ ಎಲ್ಲ ಇಲಾಖೆಗಳಿಗೆ ಸಂಬಂಧಿಸಿದ ವಿಷಯಗಳ ಸಮಗ್ರ ಪರಿಶೀಲನೆ ನಡೆಸುವ ಮೂಲಕ ತಾಲ್ಲೂಕಿನ ಅಭಿವೃದ್ಧಿ ಕುರಿತ ಚಿಂತನೆ ತ್ರೈಮಾಸಿಕ ಕೆ.ಡಿ.ಪಿ ಸಭೆಯಲ್ಲಿ ನಡೆಯಬೇಕು. ಅತ್ಯಂತ ಪ್ರಾಮುಖ್ಯತೆ ಹೊಂದಿರುವ ಈ ಎರಡೂ ಸಭೆಗಳನ್ನು ಒಂದೇ ದಿನ ಅದೂ ಎರಡು ಊರುಗಳಲ್ಲಿ ನಿಗದಿಮಾಡಿರುವುದು ಎಷ್ಟರಮಟ್ಟಿಗೆ ಸರಿ ಎಂಬುದು ಚರ್ಚೆಗೆ ಗ್ರಾಸ ಒದಗಿಸಿದೆ.

ದೂರದ ನಗರಗಳಲ್ಲಿ ಮನೆ ಮಾಡಿರುವ ಬಹುತೇಕ ಅಧಿಕಾರಿಗಳು, ಚುನಾಯಿತ ಪ್ರತಿನಿಧಿಗಳು ಪಟ್ಟಣದಲ್ಲಿ ನಡೆಯುವ ಸಭೆಗೆ ಬರುವುದೇ ತಡವಾಗಿ. ಇನ್ನು ಪಟ್ಟಣದಿಂದ 60-70 ಕಿಮೀ ದೂರದಲ್ಲಿ ನಡೆಯುವ ಈ ಎರಡೂ ಸಭೆಗಳಿಗೆ ಎಲ್ಲರೂ ಸರಿಯಾದ ಸಮಯಕ್ಕೆ ಬರುತ್ತಾರೆ ಬಂದರೂ ಎರಡು ಮೂರು ತಾಸಿನಲ್ಲಿ ಪರಿಶೀಲನೆ ನಡೆಸುತ್ತೇವೆ ಎಂಬುದು ಹಾಸ್ಯಾಸ್ಪದ ಸಂಗತಿಯಾಗುತ್ತದೆ. ಹಾಗಾಗಿ ಈ ಪರಿಶೀಲನೆ ಸಭೆ ಎಂಬುದು `ಪ್ರಹಸನ~ ಎಂಬಂತಾಗುತ್ತದೆ ಎಂಬುದು ಜನರ ಅಭಿಪ್ರಾಯ.

ಅಲ್ಲದೇ ತಾಲ್ಲೂಕು ಕೇಂದ್ರದಲ್ಲಿ ನಡೆಯುವ ಸಭೆ ಸರಿಯಾದ ಸಮಯಕ್ಕೆ ಆರಂಭಗೊಂಡರೂ ಹೊತ್ತು ಮುಳುಗಿದರೂ ಹತ್ತು ಇಲಾಖೆ ಮೇಲಿನ ಚರ್ಚೆ ಮುಗಿಯುವುದಿಲ್ಲ. ಹೀಗಾಗಿ ನಿಲೋಗಲ್‌ದಲ್ಲಿ ನಡೆಯುವುದು ಕೆಡಿಪಿ ಅಲ್ಲ ಕಾಟಾಚಾರದ ಸಭೆ~ ಎಂದೆ ಹೇಳಲಾಗುತ್ತಿದೆ.

ನಿರ್ಧಾರ ಶಾಸಕರದು: ಜನಸ್ಪಂದನ ಸಭೆಯಂದೇ ತ್ರೈಮಾಸಿಕ ಕೆಡಿಪಿ ಸಭೆ ನಡೆಸುವ ಅಗತ್ಯವೇನು? ಎಂಬುದಕ್ಕೆ ಪ್ರತಿಕ್ರಿಯಿಸಿದ ತಾ.ಪಂ ಇ.ಒ ಜಯರಾಮ ಚವ್ಹಾಣ, `ಈ ನಿರ್ಧಾರ ನಮ್ಮದಲ್ಲ ಶಾಸಕರೇ ಸಭೆ ಅಧ್ಯಕ್ಷರು ಅವರ ಸೂಚನೆಯಂತೆ ದಿನ ಮತ್ತು ಸ್ಥಳ ನಿಗದಿಮಾಡಲಾಗಿದೆ~ ಎಂದು ಸ್ಪಷ್ಟಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT