ಕನ್ನಡ ಚಿತ್ರರಂಗವನ್ನು ಶ್ರೀಮಂತಗೊಳಿಸಿ ಕಣ್ಮರೆಯಾದ ನಟ - ನಟಿಯರು, ತಂತ್ರಜ್ಞರನ್ನು ಸ್ಮರಿಸುವುದು ಎಲ್ಲ ಕನ್ನಡಿಗರ ಕರ್ತವ್ಯ. ರಾಜ್ಯ ಸರ್ಕಾರ ಪ್ರತಿಯೊಬ್ಬ ಮೃತ ಕಲಾವಿದರಿಗೆ ಪ್ರತ್ಯೇಕವಾಗಿ ಸ್ಮಾರಕಗಳನ್ನು ನಿರ್ಮಿಸಲು ಜನರ ಹಣ ಖರ್ಚು ಮಾಡುವ ಬದಲು 10-20 ಎಕರೆ ಜಾಗದಲ್ಲಿ ಎಲ್ಲಾ ದಿವಂಗತ ಕಲಾವಿದರಿಗೆ ಸಾಮೂಹಿಕವಾಗಿ ಸ್ಮಾರಕ ಕಲ್ಪಿಸಬಹುದಲ್ಲವೇ?
ಹೀಗೆ ಮಾಡುವುದರಿಂದ ಕಲಾವಿದರ ಸ್ಮಾರಕಗಳು ಅಲ್ಲಲ್ಲಿ ಚೆದುರಿ ಹೋಗುವ ಅಪಾಯ ತಪ್ಪುತ್ತದೆ. ಎಲ್ಲ ಕಲಾವಿದರನ್ನೂ ಸಮಾನವಾಗಿ ಪರಿಗಣಿಸಿ ಗೌರವ ಸಲ್ಲಿಸಲು ಅವಕಾಶ ಮಾಡಿಕೊಟ್ಟಂತೆಯೂ ಆಗುತ್ತದೆ.
ಕನ್ನಡ ಚಿತ್ರರಂಗವನ್ನು ಶ್ರೀಮಂತಗೊಳಿಸಿದ ದಿ. ಉದಯಕುಮಾರ್, ಕಲ್ಯಾಣಕುಮಾರ್, ಧಿರೇಂದ್ರ ಗೋಪಾಲ್, ಕೆ. ಎಸ್. ಅಶ್ವತ್, ವಿಷ್ಣುವರ್ಧನ್, ವಾದಿರಾಜ್, ನಾಗೇಂದ್ರರಾವ್,ನರಸಿಂಹರಾಜು, ಟಿ. ಎನ್. ಬಾಲಕೃಷ್ಣ, ದಿನೇಶ್, ಎಂ. ಪಿ. ಶಂಕರ್, ಸುಂದರ ಕೃಷ್ಣ ಅರಸ್, ವಜ್ರಮುನಿ, ಪ್ರಭಾಕರ್, ಶಂಕರ್ನಾಗ್, ಶಕ್ತಿಪ್ರಸಾದ್, ತೂಗುದೀಪ ಶ್ರೀನಿವಾಸ್, ಪಿ. ಕಾಳಿಂಗರಾವ್, ಪಂಡರೀಬಾಯಿ, ಕಲ್ಪನಾ, ಮಂಜುಳಾ, ಪುಟ್ಟಣ್ಣ ಕಣಗಾಲ್ ಇತ್ಯಾದಿ ಅನೇಕ ಗಣ್ಯರ ಸ್ಮಾರಕಗಳನ್ನು ಒಂದೆಡೆ ನಿರ್ಮಿಸಿ ಅವರನ್ನು ಸ್ಮರಿಸಲು ಅವಕಾಶ ಮಾಡಿಕೊಡಬಹುದಲ್ಲವೇ?