ತುಮಕೂರು: ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕರ ಸ್ಥಾನದ ಚುನಾವಣೆ ರಂಗೇರಿದ್ದು, ಈಗಾಗಲೇ 8 ಮಂದಿ ನಾಮಪತ್ರ ಸಲ್ಲಿಸಿದ್ದಾರೆ. ನಾಮಪತ್ರ ಸಲ್ಲಿಸಲು ಡಿ. 17 ಕೊನೆ ದಿನವಾಗಿದ್ದು, ಇನ್ನೂ ಸಾಕಷ್ಟು ಮಂದಿ ಕಣಕ್ಕಿಳಿಯಲು ಸಿದ್ಧತೆ ನಡೆಸಿದ್ದಾರೆ.
ಜೆಡಿಎಸ್ ಮುಖಂಡರೂ ಆದ ವಕೀಲ ಜಿ.ಎಲ್.ನರೇಂದ್ರಬಾಬು ತಮ್ಮ ಬೆಂಬಲಿಗರೊಂದಿಗೆ ಗುರುವಾರ ನಾಮಪತ್ರ ಸಲ್ಲಿಸಿದರು.
ಮೆರವಣಿಗೆ: ಸಿ.ಎನ್.ಶಶಿಕಿರಣ್ ಬೆಂಬಲಿಗರೊಂದಿಗೆ ಮೆರವಣಿಗೆಯಲ್ಲಿ ಬಂದು ನಾಮಪತ್ರ ಸಲ್ಲಿಸಿದರು. ನಗರದ ಟೌನ್ಹಾಲ್ ವೃತ್ತದಿಂದ ಮೆರವಣಿಗೆ ಹೊರಟು ಜಿಲ್ಲಾಧಿಕಾರಿ ಕಚೇರಿ ತಲುಪಿದರು.
ಇದುವರೆಗೆ ಬಿ.ಎಚ್.ಜಗದೀಶ್, ವತ್ಸಲಾ ನಾಗರಾಜ್, ಹನಮಂತರಾಯಪ್ಪ, ಎಚ್.ಕೆ.ಮಲ್ಲಿಕಾರ್ಜುನ, ಯಲಚವಾಡಿ ನಾಗರಾಜ್, ಎ.ಕೃಷ್ಣಮೂರ್ತಿ ಸೇರಿದಂತೆ 8 ಮಂದಿ ನಾಮಪತ್ರ ಸಲ್ಲಿಸಿದಂತಾಗಿದೆ.
ರಾಜ್ಯ ಸಂಘದ ನಿರ್ದೇಶಕರ ಸ್ಥಾನಕ್ಕೆ ಚುನಾವಣೆ ನಡೆಯುತ್ತಿದ್ದು, ಜಿಲ್ಲೆಯಿಂದ ಇಬ್ಬರನ್ನು ಆಯ್ಕೆ ಮಾಡಲು ಅವಕಾಶವಿದೆ. ಆದರೆ 2 ಸ್ಥಾನಗಳಿಗೆ 10ಕ್ಕೂ ಹೆಚ್ಚು ಆಕಾಂಕ್ಷಿಗಳಿದ್ದು, ಪರಸ್ಪರ ತುರುಸಿನ ಸ್ಪರ್ಧೆ ಏರ್ಪಡಲಿದೆ.
ಜಿಲ್ಲೆಯಲ್ಲಿ ಸುಮಾರು 23 ಸಾವಿರ ಮಂದಿ ಮತದಾರರಿದ್ದು, ಮತದಾರರನ್ನು ಓಲೈಸುವ ಕಸರತ್ತು ಅಭ್ಯರ್ಥಿಗಳಿಂದ ಈಗಾಗಲೇ ಆರಂಭವಾಗಿದೆ. ಸಾಮಾನ್ಯ ಚುನಾವಣೆಯಂತೆಯೇ ಆಸೆ ಆಮಿಷದ ಮೂಲಕ ಮತ ಸೆಳೆಯಲು ಮುಂದಾಗಿದ್ದಾರೆ. ಅಲ್ಲದೆ ಬಹಿರಂಗವಾಗಿ ಮೆರವಣಿಗೆ ಮೂಲಕ ತಮ್ಮ ಬಲಾಬಲ ಪ್ರದರ್ಶಿಸುವ ಕಸರತ್ತು ನಡೆಯುತ್ತಿದೆ.
ಜಿಲ್ಲೆಯ ತುಮಕೂರು ಸೇರಿದಂತೆ 8 ತಾಲ್ಲೂಕು ಕೇಂದ್ರಗಳಲ್ಲಿ ಚುನಾವಣೆ ನಡೆಯಲಿದೆ. ಒಬ್ಬ ಸದಸ್ಯ ಎರಡು ಮತ ಚಲಾಯಿಸಬಹುದು.
ನಾಮಪತ್ರ ಹಿಂತೆಗೆದುಕೊಳ್ಳಲು ಡಿ. 19 ಅಂತಿಮ ದಿನ. ಜ. 5ರಂದು ಚುನಾವಣೆ ನಡೆಯಲಿದ್ದು, 6ರಂದು ಫಲಿತಾಂಶ ಪ್ರಕಟವಾಗಲಿದೆ ಎಂದು ಸಹಕಾರ ಇಲಾಖೆ ಉಪ ನಿಬಂಧಕ ಬಾಲಶೇಖರ್ ತಿಳಿಸಿದ್ದಾರೆ.