ಚಿಕ್ಕಬಳ್ಳಾಪುರ: ರಾಜ್ಯ ಒಕ್ಕಲಿಗರ ಸಂಘದ ಕಾರ್ಯಕಾರಿ ಸಮಿತಿಯ ಮತದಾನಕ್ಕೆ ಇನ್ನು ಒಂದೇ ದಿನ ಬಾಕಿಯುಳಿದಿದ್ದು, ಅಂತಿಮ ಹಂತದ ಪ್ರಚಾರ ವೇಗ ಪಡೆದಿದೆ. ಈಗಾಗಲೇ ಒಂದೆರಡು ಸುತ್ತು ಪ್ರಚಾರ ಕಾರ್ಯ ಪೂರ್ಣಗೊಳಿಸಿರುವ ಅಭ್ಯರ್ಥಿಗಳು ಈಗ ಬೆಂಬಲಿಗರ ಮೂಲಕ ಅಂತಿಮ ಹಂತದ ಪ್ರಚಾರ ನಡೆಸುತ್ತಿದ್ದಾರೆ.
ಜಿಲ್ಲಾ ಕೇಂದ್ರದಲ್ಲಿ ಅಷ್ಟೇ ಅಲ್ಲ, ತಾಲ್ಲೂಕು ಕೇಂದ್ರಗಳಲ್ಲೂ ಭಾರಿ ಪ್ರಚಾರ ಕೈಗೊಳ್ಳಲಾಗಿದ್ದು, ಅಭ್ಯರ್ಥಿಗಳ ಜತೆಗೆ ಬೆಂಬಲಿಗರೂ ಮನೆ–ಮನೆಗೆ, ಅಂಗಡಿ, ಮುಂಗಟ್ಟುಗಳಿಗೆ ತೆರಳಿ ಮತ ಯಾಚಿಸುತ್ತಿದ್ದಾರೆ.
ರಾಜ್ಯ ಅಥವಾ ರಾಷ್ಟ್ರಮಟ್ಟದಲ್ಲಿ ಕಾಂಗ್ರೆಸ್, ಜೆಡಿಎಸ್ ಮತ್ತು ಬಿಜೆಪಿ ನಾಯಕರು ಒಬ್ಬ ಅಭ್ಯರ್ಥಿ ಪರವಾಗಿ ಒಂದೇ ವೇದಿಕೆಯಲ್ಲಿ ಕಾಣಿಸಿಕೊಳ್ಳುವುದು ಅಥವಾ ಒಂದುಗೂಡಿಸುವುದು ಸಾಧ್ಯವೇ ಇಲ್ಲ ಎಂಬ ವಾತಾವರಣ ಇದೆ. ಆದರೆ ಒಕ್ಕಲಿಗರ ಸಂಘದ ಚುನಾವಣೆಯಲ್ಲಿ ವಿವಿಧ ರಾಜಕೀಯ ಪಕ್ಷದ, ಸಿದ್ಧಾಂತದ ಮುಖಂಡರು ತಮ್ಮ ಅಭ್ಯರ್ಥಿ ಗೆಲುವಿಗೆ ಪಣ ತೊಟ್ಟಿದ್ದಾರೆ.
ಫ್ಲೆಕ್ಸ್, ಬಂಟಿಂಗ್ಸ್ ಮುಂತಾದ ಪ್ರಚಾರದ ಖರ್ಚು– ವೆಚ್ಚಗಳಿಗೆ ಅಭ್ಯರ್ಥಿಗಳು ಜತೆಗೆ ವಿವಿಧ ಪಕ್ಷಗಳಲ್ಲಿರುವ ಅವರ ಬೆಂಬಲಿಗರು ಕೈಜೋಡಿಸುತ್ತಿದ್ದಾರೆ. ಚಿಕ್ಕಬಳ್ಳಾಪುರ ತಾಲ್ಲೂಕಿನಲ್ಲಿ ಜೆಡಿಎಸ್ ಜಿಲ್ಲಾ ಘಟಕದ ಅದ್ಯಕ್ಷ ಕೆ.ವಿ.ನಾಗರಾಜ್, ಮಾಜಿ ಶಾಸಕ ಕೆ.ಪಿ.ಬಚ್ಚೇಗೌಡ, ಕಾಂಗ್ರೆಸ್ನ ಎಂ.ಪ್ರಕಾಶ್, ಚದುಲಪುರ ನಾರಾಯಣಸ್ವಾಮಿ, ಬಿಜೆಪಿಯ ಎ.ವಿ.ಬೈರೇಗೌಡ, ನಾರಾಯಣಸ್ವಾಮಿ ಜೊತೆಗೂಡಿ ಅಭ್ಯರ್ಥಿ ಪರ ನಗರ, ಗ್ರಾಮೀಣ ಪ್ರದೇಶದಲ್ಲಿ ಪ್ರಚಾರ ನಡೆಸಿದ್ದಾರೆ.
ಆಯಾ ಪಕ್ಷಗಳ ಕಾರ್ಯಕರ್ತರು ವಿಧಾನಸಭೆ ಚುನಾವಣೆ ಮಾದರಿಯಲ್ಲೇ ಕರಪತ್ರಗಳನ್ನು ಹಂಚುತ್ತಿದ್ದಾರೆ.
‘ರಾಜಕೀಯ ವಿಷಯದಲ್ಲಿ ನಾವೆಲ್ಲರೂ ಬೇರೆ ಪಕ್ಷದವರು. ಬೇರೆ ವಿಚಾರ ಮತ್ತು ಸಿದ್ಧಾಂತಗಳನ್ನು ನಂಬಿದವರು. ವಿಧಾನಸಭೆ, ಲೋಕಸಭೆ ಚುನಾವಣೆಯಲ್ಲಿ ನಾವೆಲ್ಲರೂ ಜಿದ್ದಾಜಿದ್ದಿನ ಸ್ಪರ್ಧಿಗಳೇ. ಆದರೆ ಒಕ್ಕಲಿಗರ ಸಂಘದ ಚುನಾವಣೆಯಲ್ಲಿ ಸೂಕ್ತ ಅಭ್ಯರ್ಥಿ ಗೆಲುವಿಗಾಗಿ ಒಂದಾಗಿದ್ದೇವೆ’ ಎಂದು ವಿವಿಧ ಪಕ್ಷಗಳ ಮುಖಂಡರು ಹೇಳುತ್ತಾರೆ.
ಕೋಲಾರ ಕ್ಷೇತ್ರದಿಂದ ಮೂವರು ಅಭ್ಯರ್ಥಿಗಳು ಸ್ಪರ್ಧಿಸಲು ಅವಕಾಶವಿದ್ದು, ಒಮ್ಮತದ ನಿರ್ಣಯ ತೆಗೆದುಕೊಂಡು ಮೂವರನ್ನು ಅವಿರೋಧವಾಗಿ ಆಯ್ಕೆ ಮಾಡುವ ಬಗ್ಗೆ ಕೆಲ ದಿನಗಳ ಹಿಂದೆ ಚರ್ಚೆ ನಡೆದಿತ್ತು.
ಆದರೆ, ಇದಕ್ಕೆ ಕೆಲ ಮುಖಂಡರು ಸಹಮತ ವ್ಯಕ್ತಪಡಿಸಿದರೆ, ಇನ್ನೂ ಕೆಲವರು ವಿರೋಧ ವ್ಯಕ್ತಪಡಿಸಿದ್ದರು. ಸಂಘದ ಮುಖಂಡರು, ಕಾರ್ಯಕರ್ತರಲ್ಲೇ ಅಸಮಾಧಾನ ಭುಗಿಲೆದ್ದಿತ್ತು. ಮಾತಿನ ಚಕಮಕಿಗೂ ಕಾರಣವಾಗಿತ್ತು. ಅಭ್ಯರ್ಥಿಗಳ ಆಯ್ಕೆಗೆ ಸಂಬಂಧಿಸಿದಂತೆ ಒಮ್ಮತದ ನಿರ್ಣಯ ಕೈಗೊಳ್ಳಲು ಸಾಧ್ಯವಾಗದಿದ್ದಾಗ 14 ಮಂದಿ ಚುನಾವಣೆ ಕದನಕ್ಕೆ ಇಳಿದರು. ಕೆಲ ಅಭ್ಯರ್ಥಿಗಳಿಗೆ ರಾಜಕೀಯ ಪಕ್ಷ ಮತ್ತು ಮಾಜಿ ಶಾಸಕರ ಬೆಂಬಲ ವ್ಯಕ್ತವಾಗಿದ್ದು, ಇನ್ನೂ ಕೆಲವರಿಗೆ ಅಭಿಮಾನಿಗಳ ಬೆಂಬಲವಿದೆ.
ಸಂಘದ ಕಾರ್ಯಕಾರಿ ಸಮಿತಿಗೆ ಒಟ್ಟು 35 ಮಂದಿ ಸದಸ್ಯರನ್ನು ಆಯ್ಕೆ ಮಾಡಲಾಗುತ್ತದೆ. ಬೆಂಗಳೂರು ನಗರ, ಗ್ರಾಮಾಂತರ ಮತ್ತು ಜಿಲ್ಲಾ ವ್ಯಾಪ್ತಿಯಲ್ಲಿ 15 ಮಂದಿ, ತುಮಕೂರು–2, ಮಂಡ್ಯ–4, ಮೈಸೂರು–3, ಕೋಲಾರ–3, ಹಾಸನ–3, ಶಿವಮೊಗ್ಗ–1, ಚಿಕ್ಕಮಗಳೂರು–1, ಚಿತ್ರದುರ್ಗ–1, ಕೊಡಗು–1 ಮತ್ತು ದಕ್ಷಿಣ ಕನ್ನಡ–1 ಸದಸ್ಯರನ್ನು ಆಯ್ಕೆ ಮಾಡಲಾಗುತ್ತದೆ.
ಬೆಂಗಳೂರು ಸೇರಿದಂತೆ ಮೂರು ಜಿಲ್ಲೆಗಳು ಹೊರತುಪಡಿಸಿದರೆ ಉಳಿದ ಜಿಲ್ಲೆಗಳಿಂದ 20 ಮಂದಿ ಸದಸ್ಯರನ್ನು ಆಯ್ಕೆ ಮಾಡಲಾಗುತ್ತದೆ ಎಂದು ಒಕ್ಕಲಿಗರ ಸಂಘದ ಮುಖಂಡರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.
ಗುಡಿಬಂಡೆ ಹೊರತುಪಡಿಸಿ ಚಿಕ್ಕಬಳ್ಳಾಪುರ ಮತ್ತು ಕೋಲಾರ ಜಿಲ್ಲೆಗಳ ಎಲ್ಲಾ ತಾಲ್ಲೂಕು ಕೇಂದ್ರಗಳಲ್ಲೂ ಮತದಾನಕ್ಕೆ ವ್ಯವಸ್ಥೆ ಮಾಡಲಾಗುವುದು. ಜ.5ರಂದು ಬೆಳಿಗ್ಗೆ 8 ರಿಂದ ಸಂಜೆ 4ರವರೆಗೆ ಮತದಾನ ನಡೆಯಲಿದೆ. ಎರಡೂ ಜಿಲ್ಲೆ ಸೇರಿ ಕೋಲಾರ ಕ್ಷೇತ್ರದಲ್ಲಿ 35,010 ಮತದಾರರು ಇದ್ದಾರೆ. ಜ.6ರಂದು ಮತ ಎಣಿಕೆ ನಡೆಸಿದ ಬಳಿಕ ಫಲಿತಾಂಶ ಪ್ರಕಟಿಸಲಾಗುವುದು ಎಂದು ಅವರು ಮಾಹಿತಿ ನೀಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.