ಬೆಂಗಳೂರು: `ಪ್ರಾದೇಶಿಕ ಬದುಕಿನ ಅನನ್ಯತೆಯನ್ನು ಕಾಪಾಡುವ ನಿಟ್ಟಿನಲ್ಲಿ ಒಕ್ಕೂಟ ವ್ಯವಸ್ಥೆಯು ಬಲಗೊಳ್ಳಬೇಕು' ಎಂದು ಹಿರಿಯ ಕವಿ ಪ್ರೊ.ಎಸ್.ಜಿ.ಸಿದ್ಧರಾಮಯ್ಯ ಅಭಿಪ್ರಾಯಪಟ್ಟರು.
ಕನ್ನಡ ಸಂಘರ್ಷ ಸಮಿತಿಯು ನಗರದಲ್ಲಿ ಗುರುವಾರ ಹಮ್ಮಿಕೊಂಡಿದ್ದ `ಒಕ್ಕೂಟದ ವ್ಯವಸ್ಥೆ: ಕರ್ನಾಟಕದ ಹಿತ' ಕುರಿತು ಮಾತನಾಡಿದರು."
`ಒಕ್ಕೂಟ ವ್ಯವಸ್ಥೆಯ ಮೇಲೆ ಅಪಾರ ಗೌರವವಿದೆ. ಬಹುತ್ವದ ನಾಡಾಗಿರುವ ಈ ನೆಲದಲ್ಲಿ ಇತರೆ ದೇಶಗಳ ಮಾದರಿಯಲ್ಲಿ ಒಕ್ಕೂಟವನ್ನು ಅನ್ವಯಿಸಲು ಸಾಧ್ಯವಿಲ್ಲ. ವೈವಿಧ್ಯದ ಅಸ್ಮಿತೆಯನ್ನು ಉಳಿಸುವ ನಿಟ್ಟಿನಲ್ಲಿ ಒಕ್ಕೂಟ ವ್ಯವಸ್ಥೆ ಬದ್ಧಗೊಳ್ಳಬೇಕು' ಎಂದರು.
`ರಾಜ್ಯದ ನಾಡು, ನುಡಿ, ಸಂಸ್ಕೃತಿ, ಜಲ, ನೆಲದ ವಿಚಾರದಲ್ಲಿ ಕೇಂದ್ರ ಎಂದಿಗೂ ಮಲತಾಯಿ ಧೋರಣೆಅನುಸರಿಸುವುದು ಸಲ್ಲ. ಪರಸ್ಪರ ಹೊಂದಾಣಿಕೆಯ ಮೂಲಕವೇ ರಾಜ್ಯ ಮತ್ತು ಕೇಂದ್ರದ ನಡುವಿನ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸಾಧ್ಯ' ಎಂದರು.
ಲೇಖಕ ಬಂಜಗೆರೆ ಜಯಪ್ರಕಾಶ್, `ಬ್ರಿಟಿಷರಿಂದ ದೇಶದಲ್ಲಿ ಒಕ್ಕೂಟದ ಪರಿಕಲ್ಪನೆ ಹುಟ್ಟಿಕೊಂಡಿತ್ತು. ಆದರೆ, ಸ್ವಾಯತ್ತತೆ ಮತ್ತು ಸ್ಥಿರತೆಯನ್ನು ಭದ್ರಪಡಿಸದ ಒಕ್ಕೂಟ ವ್ಯವಸ್ಥೆಯಿಂದ ಪ್ರತಿಕೂಲಗಳೇ ಹೆಚ್ಚು' ಎಂದು ತಿಳಿಸಿದರು. ಸಮಿತಿ ಅಧ್ಯಕ್ಷ ಡಾ.ಕೋ.ವೆಂ.ರಾಮಕೃಷ್ಣೇಗೌಡ ಇತರರು ಉಪಸ್ಥಿತರಿದ್ದರು.