ಶಿವಮೊಗ್ಗ: ಒಡವೆ ಖರೀದಿ ಹಾಗೂ ನೀರಿನ ಬಳಕೆ ಬಗ್ಗೆ ಮಹಿಳೆಯರಲ್ಲಿ ಜಾಗೃತಿ ಮೂಡಿಸುವ ಅಗತ್ಯವಿದೆ ಎಂದು ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಶುಭಾ ಕೃಷ್ಣಮೂರ್ತಿ ಹೇಳಿದರು.
ಬಿಜೆಪಿ ರೈತ ಮೋರ್ಚಾ ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದ ಮಹಿಳೆಯರಿಗೆ ಜಿಲ್ಲಾ ಕಚೇರಿಯಲ್ಲಿ ಮಂಗಳವಾರ ಒಡವೆಗಳ ಖರೀದಿ ಹಾಗೂ ಗ್ರಾಮೀಣ ನೀರಿನ ಬಳಕೆ ಕುರಿತು ಹಮ್ಮಿಕೊಂಡಿದ್ದ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಮಹಿಳೆಯರು ಶೃಂಗಾರ ಮಾಡಿಕೊಳ್ಳಬೇಕು. ಆದರೆ, ಅದು ಬೇರೆಯವರನ್ನು ಆಕರ್ಷಿಸುವುದಕ್ಕಲ್ಲ; ಸಮಾಜ ಆರೋಗ್ಯ ಸ್ಥಿತಿಯಲ್ಲಿದೆ ಎನ್ನುವುದಕ್ಕೆ. ಅಗತ್ಯವಿದ್ದಷ್ಟು ಒಡವೆ ಹಾಕಿಕೊಳ್ಳುವುದು ಮಹಿಳೆಯರ ಸಾಮಾನ್ಯ ಆಸೆ. ಆದರೆ, ಇವುಗಳ ಖರೀದಿಯಲ್ಲಿ ನಾವು ಮೋಸ ಹೋಗಬಾರದು ಎಂದರು.
ನೀರು ಜೀವನದ ಅವಿಭಾಜ್ಯ ಅಂಗ. ಅದರ ಮಿತಬಳಕೆ ಬಗ್ಗೆ ಗ್ರಾಮೀಣ ಮಹಿಳೆಯರಿಗಷ್ಟೇ ಅಲ್ಲ, ನಗರ ಪ್ರದೇಶದಲ್ಲೂ ಜಾಗೃತಿ ಮೂಡಬೇಕಿದೆ ಎಂದರು.
ಶಿವಮೊಗ್ಗ ಆಭರಣ ಜ್ಯುವೆಲರ್ಸ್ನ ಗಣಪತಿ, ಬಂಗಾರದ ಆಭರಣಗಳ ಗುಣಮಟ್ಟ, ಪರೀಕ್ಷಿಸುವ ವಿಧಾನ ಮತ್ತಿತರ ವಿಷಯಗಳ ಬಗ್ಗೆ ಮಾಹಿತಿ ನೀಡಿದರು. ಜಿ.ಪಂ. ಭೂ ವಿಜ್ಞಾನಿ ಶಿವಮೂರ್ತಿ, ನೀರಿನ ಗುಣಮಟ್ಟದ ಬಗ್ಗೆ ತಿಳಿಸಿದರು.
ಜಿಲ್ಲಾ ರೈತ ಮೋರ್ಚಾದ ಅಧ್ಯಕ್ಷ ಗಂಗಾಧರ್ ಪ್ರಾಸ್ತಾವಿಕ ಮಾತನಾಡಿದರು. ಹಾಪ್ಕಾಮ್ಸ ಅಧ್ಯಕ್ಷ ಸೋಮಶೇಖರ್, ಜಿ.ಪಂ. ಶಿಕ್ಷಣ ಮತ್ತು ಸಾಮಾಜಿಕ ಸ್ಥಾಯಿ ಸಮಿತಿ ಅಧ್ಯಕ್ಷ ಅಶೋಕ್ ನಾಯಕ್, ಸದಸ್ಯರಾದ ಪ್ರೇಮಾ ಸುಧಾಕರ್, ಗಾಯತ್ರಿ ಪ್ರಭಾಕರ್, ಹೇಮಾ ಪಾವನಿ ಮತ್ತಿತರರು ಉಪಸ್ಥಿತರಿದ್ದರು.
ಕ್ಷೇತ್ರ ರೈತ ಮೋರ್ಚಾ ಅಧ್ಯಕ್ಷ ಯಡೇಹಳ್ಳಿ ನಂಜುಂಡಪ್ಪ ಅಧ್ಯಕ್ಷತೆ ವಹಿಸಿದ್ದರು. ಪ್ರಧಾನ ಕಾರ್ಯದರ್ಶಿ ಕೃಷ್ಣಾಜಿರಾವ್ ನಿರೂಪಿಸಿದರು.