ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಡಿಶಾ: 14 ಜಿಲ್ಲೆಗಳಲ್ಲಿ ಪ್ರವಾಹ

Last Updated 9 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

ಭುವನೇಶ್ವರ: ಒಡಿಶಾದ 30 ಜಿಲ್ಲೆಗಳ ಪೈಕಿ  14 ಜಿಲ್ಲೆಗಳು ಪ್ರವಾಹಕ್ಕೆ ತುತ್ತಾಗಿದ್ದು 6 ಲಕ್ಷ ಜನರು ತೊಂದರೆಗೀಡಾಗಿದ್ದಾರೆ.ಬಹುತೇಕ ಕರಾವಳಿ ಮತ್ತು ಪಶ್ಚಿಮ ಪ್ರಾಂತ್ಯದಲ್ಲಿ `ಮಹಾನದಿ~ ಮತ್ತು ಅದರ ಉಪನದಿಗಳಲ್ಲಿ  ಭಾರಿ ಪ್ರವಾಹದಿಂದಾಗಿ ತೀವ್ರ ತೊಂದರೆಯಾಗಿದೆ. ಒಡಿಶಾ ಮತ್ತು ಪಕ್ಕದ ಛತ್ತಿಸ್‌ಗಢದಲ್ಲಿ ಭಾರಿ ಮಳೆಯಿಂದಾಗಿ ಪ್ರವಾಹ ಉಂಟಾಗಿದೆ.

ರಾಜ್ಯದ ಬಹುದೊಡ್ಡ ನದಿಯಾಗಿರುವ ಮಹಾನದಿ ಛತ್ತಿಸ್‌ಗಢದಲ್ಲಿ ಹುಟ್ಟುತ್ತದೆ. ಮುಂದಿನ 48 ಗಂಟೆಗಳಲ್ಲಿ ಎರಡೂ ರಾಜ್ಯಗಳಲ್ಲಿ ಭಾರಿ ಮಳೆ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದ್ದು ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಲಿದೆ.  
 
ಈಗಾಗಲೇ ಮಹಾನದಿಗೆ ಕಟ್ಟಲಾದ ಹಿರಾಕುಡ್ ಜಲಾಶಯದ 64 ಗೇಟುಗಳ ಪೈಕಿ 59 ಗೇಟುಗಳನ್ನು ತೆರೆದು ನೀರನ್ನು ನದಿಗೆ ಬಿಡಲಾಗಿದೆ. ಜಲಾಶಯದಲ್ಲಿ ನೀರಿನ ಮಟ್ಟ  628.5 ಅಡಿ ಇತ್ತು. ಪಶ್ಚಿಮ  ಒಡಿಶಾದ ಸಂಬಾಲ್‌ಪುರ ಜಿಲ್ಲೆಯಲ್ಲಿರುವ ಈ ಜಲಾಶಯದ ಗರಿಷ್ಠ ಮಟ್ಟ 630 ಅಡಿ.

ಶುಕ್ರವಾರ ಬೆಳಿಗ್ಗೆ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರು ಪ್ರವಾಹ ಪರಿಸ್ಥಿತಿ ಬಗ್ಗೆ ಉನ್ನತ ಮಟ್ಟದ  ತುರ್ತು ಸಭೆಯನ್ನು ಕರೆದಿದ್ದರು. ಪ್ರವಾಹ ಎದುರಿಸಲು ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ವರದಿಗಾರರಿಗೆ ತಿಳಿಸಿದ್ದಾರೆ.

`ನಾವು ಪರಿಸ್ಥಿತಿಯನ್ನು ಗಮನಿಸುತ್ತಿದ್ದೇವೆ. ಪ್ರವಾಹ ಪೀಡಿತ ಜಿಲ್ಲೆಗಳಲ್ಲಿ ಸ್ಥಳೀಯ ಆಡಳಿತ ಯಾವುದೇ ರೀತಿಯ ಪರಿಸ್ಥಿತಿ ಎದುರಿಸಲು ಸಿದ್ದವಿದೆ. ಪ್ರವಾಹ ಪೀಡಿತರಿಗೆ ತುರ್ತು ಪರಿಹಾರವನ್ನು ಏಳು ದಿನಗಳ ಕಾಲ ಒದಗಿಸುವಂತೆ ಈಗಾಗಲೇ  ಜಿಲ್ಲಾಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ~ ಎಂದು ಪಟ್ನಾಯಕ್ ತಿಳಿಸಿದ್ದಾರೆ.

ಕರಾವಳಿ ಜಿಲ್ಲೆಯ ಕಟಕ್, ಕೇಂದ್ರಪಾಡ, ಜಗತ್‌ಸಿಂಗ್‌ಪುರ್ ಮತ್ತು ಪಶ್ಚಿಮ ಜಿಲ್ಲೆಗಳಾದ ಸೋನೆಪುರ್, ಬೌಧ್ ಮತ್ತು ಸಂಬಾಲ್‌ಪುರ್‌ನ ನೂರಾರು ಗ್ರಾಮಗಳು ಪ್ರವಾಹದಲ್ಲಿ ಮುಳಗಿದೆ ಎಂದು ಕಂದಾಯ ಇಲಾಖೆ ಮೂಲಗಳು ತಿಳಿಸಿವೆ. ಪ್ರವಾಹ ಪೀಡಿತ ಪ್ರದೇಶಗಳಲ್ಲಿ ತಗ್ಗು ಪ್ರದೇಶದ ಜನರನ್ನು ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ತಿಳಿಸಲಾಗಿದೆ. ಕೆಲವು ಜಿಲ್ಲೆಗಳಲ್ಲಿ ಸ್ಥಳೀಯ ಆಡಳಿತ ಜನರನ್ನು ಸ್ಥಳಾಂತರ ಮಾಡಿದೆ.

ರಕ್ಷಣಾ ಮತ್ತು ಪರಿಹಾರ ಕಾರ್ಯಗಳಿಗಾಗಿ  ಸ್ಥಳೀಯ ಆಡಳಿತದ ಸಹಾಯಕ್ಕಾಗಿ ವಿವಿಧ ಜಿಲ್ಲೆಗಳಿಗೆ ಒಡಿಶಾ ಪ್ರಕೃತಿ ವಿಕೋಪ ಕ್ಷಿಪ್ರ ಕಾರ್ಯಾಚರಣೆ ಪಡೆಯನ್ನು ಈಗಾಗಲೇ ಕಳುಹಿಸಲಾಗಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT