ಭುವನೇಶ್ವರ (ಪಿಟಿಐ): ಮಧ್ಯಾಹ್ನದ ಊಟ ಮತ್ತು ಪೂರಕ ಪೌಷ್ಟಿಕಾಂಶ ಕಾರ್ಯಕ್ರಮದಡಿ ಬೇಳೆಯನ್ನು ಖರೀದಿಸುವಾಗ 700 ಕೋಟಿ ರೂಪಾಯಿ ಅವ್ಯವಹಾರ ನಡೆದಿದೆ ಎಂಬ ಆಪಾದನೆ ಹಿನ್ನೆಲೆಯಲ್ಲಿ ಒಡಿಶಾ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಪ್ರಮೀಳಾ ಮಲ್ಲಿಕ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಬಿಜೆಡಿ ಪಕ್ಷದ ಹಿತಾಸಕ್ತಿಯನ್ನು ಗಮನದಲ್ಲಿ ಇಟ್ಟುಕೊಂಡು ಮತ್ತು ಸರ್ಕಾರದ ಘನತೆಯನ್ನು ಕಾಪಾಡುವ ದೃಷ್ಟಿಯಿಂದ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಿರುವುದಾಗಿ ಅವರು ತಿಳಿಸಿದ್ದಾರೆ.
ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರನ್ನು ಭೇಟಿ ಮಾಡಿದ ನಂತರ ಅವರು ರಾಜೀನಾಮೆ ನೀಡಿರುವುದನ್ನು ಪ್ರಕಟಿಸಿದರು. ಐವತ್ತು ಲಕ್ಷ ಶಾಲಾ ಮಕ್ಕಳೂ ಸೇರಿದಂತೆ ಒಟ್ಟು 9.5 ಲಕ್ಷ ಫಲಾನುಭವಿಗಳಿಗೆ ಪೌಷ್ಟಿಕಾಂಶಯುಕ್ತ ಆಹಾರ ನೀಡುವ ಉದ್ದೇಶದಿಂದ ಬೇಳೆಯನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಖರೀದಿಸಿತ್ತು.
‘ಬಿಜೆಡಿ ಮತ್ತು ಸರ್ಕಾರದ ಸಲುವಾಗಿ ನಾನು ತ್ಯಾಗ ಮಾಡಿದ್ದೇನಾದರೂ ಪಿತೂರಿಗೆ ಬಲಿಯಾಗಿದ್ದೇನೆ’ ಎಂದು ಹೇಳಿದರಲ್ಲದೆ, ‘ಯಾವುದೇ ರೀತಿಯ ತನಿಖೆ ಎದುರಿಸಲು ನಾನು ಸಿದ್ಧ’ ಎಂದರು.
ಪ್ರಮೀಳಾ ಅವರ ರಾಜೀನಾಮೆಯನ್ನು ಅಂಗೀಕರಿಸುವಂತೆ ರಾಜ್ಯಪಾಲರಿಗೆ ಶಿಫಾರಸು ಮಾಡಿರುವುದಾಗಿ ಮುಖ್ಯಮಂತ್ರಿ ತಿಳಿಸಿದ್ದಾರೆ.