ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಡೆದು ಆಳುವ ನೀತಿ ಬೇಡ: ಮುಮ್ತಾಜ್

Last Updated 6 ಮಾರ್ಚ್ 2011, 9:40 IST
ಅಕ್ಷರ ಗಾತ್ರ

ಕಾರ್ಕಳ: ದೇಶದ ರಾಷ್ಟ್ರೀಯತೆಗೆ ಎಲ್ಲರೂ ಬದ್ಧರಾಗಿರಬೇಕು ಎಂದು ರಾಜ್ಯ ಹಜ್, ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಮುಮ್ತಾಜ್ ಆಲಿಖಾನ್ ಇಲ್ಲಿ ತಿಳಿಸಿದರು.
ಇಲ್ಲಿನ ಸಾಲ್ಮರದ ಗ್ಯಾಲಕ್ಸಿ ಹಾಲ್‌ನಲ್ಲಿ ಶನಿವಾರ ನಡೆದ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ತಾಲ್ಲೂಕು ಮಟ್ಟದ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.

ದೇಶದ ರಾಷ್ಟ್ರೀಯತೆ, ಸಂಸ್ಕತಿಯನ್ನು ಒಂದಾಗಿ ಕಾಪಾಡಿಕೊಳ್ಳಬೇಕು. ಒಡೆದು ಆಳುವ ನೀತಿ ನಮಗೆ ಬೇಕಾಗಿಲ್ಲ. ಯಾರೂ ಮಾಡದಿರುವ ಸಾಧನೆಯನ್ನು ರಾಜ್ಯದಲ್ಲಿ ಬಿಜೆಪಿ ಸರ್ಕಾರ ಮಾಡಿದೆ. ಬಿಜೆಪಿ ಮುಖಂಡರು ಇಸ್ಲಾಂ ಧರ್ಮದ ಮಹತ್ವ ಎತ್ತಿಹಿಡಿದಿದ್ದಾರೆ. ಮತಾಂತರವು ಹಣ ಹೆಣ್ಣುಗಳ ಕಾರಣಕ್ಕಾಗಿ ನಡೆಯಬಾರದು ಎಂದರು.

ವಾಜಪೇಯಿ ಸರ್ಕಾರ ಬಂದ ಬಳಿಕ ಭಾರತ- ಪಾಕಿಸ್ಥಾನ ಸಂಬಂಧ ಉತ್ತಮಗೊಂಡಿದೆ. ಎರಡೂ ದೇಶಗಳಲ್ಲಿ ಇರುವ ರಕ್ತಸಂಬಂಧಿಗಳು ಒಂದಾಗುವಂತೆ ಮಾಡಿದೆ. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಬಂದ ಬಳಿಕ ಮುಸ್ಲಿಂ ಸಮುದಾಯಕ್ಕೆ ಒಳಿತಾಗಿದೆ ರಾಜ್ಯ ಸರ್ಕಾರ ರೂ 326 ಕೋಟಿಗಳನ್ನು ಅಲ್ಪಸಂಖ್ಯಾತರ ಅಭಿವೃದ್ಧಿಗಾಗಿ ವಿನಿಯೋಗಿಸುತ್ತಿದೆ ಎಂದರು.

ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಆದ್ಯತೆ ನೀಡಿದೆ. ಹೆಣ್ಣು ಮಕ್ಕಳಿಗಾಗಿ ಪ್ರತ್ಯೇಕವಾಗಿ ಕಾಲೇಜು ಸ್ಥಾಪನೆ, ಉದ್ಯೋಗ ನಿರತ ಹೆಣ್ಣುಮಕ್ಕಳಿಗೆ ಹಾಸ್ಟೆಲ್‌ಗಳ ನಿರ್ಮಾಣ, ಅಲ್ಪಸಂಖ್ಯಾತ ಇಲಾಖೆಯಿಂದ ಅಲ್ಪಸಂಖ್ಯಾತರ ಹೆಣ್ಣುಮಕ್ಕಳ ಮೂತ್ರಪಿಂಡ ಕಾಯಿಲೆ, ಹೃದಯ ಕಾಯಿಲೆ, ಕ್ಯಾನ್ಸರ್ ಕಾಯಿಲೆಗಳಿಗೆ ನೀಡಲಾಗುವ ಸಹಾಯಧನವನ್ನು ರೂ 25 ಸಾವಿರದಿಂದ ರೂ 1ಲಕ್ಷಕ್ಕೆ ಹೆಚ್ಚಿಸಲಾಗಿದೆ ಎಂದರು.

ರಾಜ್ಯ ಅಲ್ಪಸಂಖ್ಯಾತ ಆಯೋಗದ ಅಧ್ಯಕ್ಷ ಅನ್ವರ್ ಮಾಣಿಪ್ಪಾಡಿ ಮಾತನಾಡಿ ಕಳೆದ 60 ವರ್ಷಗಳಲ್ಲಿ ಕಾಂಗ್ರೆಸ್ ಮಾಡದ ಸಾಧನೆಯನ್ನು ಕೇವಲ ಎರಡೂವರೆ ವರ್ಷದಲ್ಲಿ ಬಿಜೆಪಿ ಸರ್ಕಾರ ಮಾಡಿ ತೋರಿಸಿದೆ. ಬಿಜೆಪಿಯಲ್ಲಿ ಅಲ್ಪಸಂಖ್ಯಾತರಿಗೆ ಸಿಕ್ಕಷ್ಟು ಸೌಲಭ್ಯಗಳು ಮತ್ತೆಲ್ಲೂ ಸಿಗಲು ಅಸಾಧ್ಯ ಎಂದರು.

ಬಿಜೆಪಿ ಉಡುಪಿ ಜಿಲ್ಲಾ ಘಟಕ ಅಧ್ಯಕ್ಷ ಉದಯಕುಮಾರ್ ಶೆಟ್ಟಿ ಮಾತನಾಡಿ ಸಮಾವೇಶದಲ್ಲಿ ಬೃಹತ್  ಸಂಖ್ಯೆಯಲ್ಲಿ ಅಲ್ಪಸಂಖ್ಯಾತರರು ಸೇರಿರುವುದು ಪ್ರೇರಣೆ ನೀಡಿದೆ. ಮುಂದಿನ ತಿಂಗಳು ಉಡುಪಿಯಲ್ಲಿ ಇದೇ ಬಗೆಯ ಸಮಾವೇಶ ನಡೆಸುವುದಾಗಿ ತಿಳಿಸಿದರು.

ರಾಜ್ಯ ಯುವಮೋರ್ಚಾ ಅಧ್ಯಕ್ಷ, ಮಾಜಿ ಶಾಸಕ ವಿ.ಸುನಿಲ್ ಕುಮಾರ್ ಮಾತನಾಡಿ, ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಸಾಮಾನ್ಯ ಜನರ ಬದುಕಿಗೆ ಅನುಕೂಲವಾಗಿದೆ. ಬಿಜೆಪಿ ಯಾರನ್ನೂ ಓಲೈಸುವ ಕೆಲಸ ಮಾಡುತ್ತಿಲ್ಲ. ಅಲ್ಪಸಂಖ್ಯಾತರು ರಾಷ್ಟ್ರೀಯ ಮುಖ್ಯವಾಹಿನಿಗೆ ಬರಬೇಕಾಗಿದೆ. ದೇಶದ್ರೋಹಿ ಕೆಲಸ ನಡೆಯುವಾಗ ಅಲ್ಪಸಂಖ್ಯಾತರು ಮೌನವಾಗಿರುವುದು ಸರಿಯಲ್ಲ. ಎಲ್ಲ ಸಮುದಾಯದವರು ಒಗ್ಗೂಡಿ ದೇಶವನ್ನು ಎತ್ತರಕ್ಕೆ ನಿಲ್ಲಿಸುವ ಕೆಲಸ ಮಾಡಬೇಕಾಗಿದೆ ಎಂದರು. 

ಬಿಜೆಪಿ ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮ ಅಧ್ಯಕ್ಷ ಎನ್.ಬಿ.ಅಬೂಬಕ್ಕರ್, ವಕೀಲ ಎಂ.ಕೆ.ವಿಜಯ ಕುಮಾರ್, ಸಲೀಂ ಅಂಬಾಗಿಲು, ಕ್ಷೇತ್ರಾಧ್ಯಕ್ಷ ಮಣಿರಾಜ್ ಶೆಟ್ಟಿ, ಅಂತೋನಿ ಡಿ ಸೋಜ ನಕ್ರೆ, ಮೋರ್ಚಾದ ತಾಲ್ಲೂಕು ಅಧ್ಯಕ್ಷ ಮೌರೀಸ್ ಮೆಂಡೋನ್ಸಾ, ಯುವಮೋರ್ಚಾ ತಾಲ್ಲೂಕು ಅಧ್ಯಕ್ಷ ಮಹಾವೀರ್ ಹೆಗ್ಡೆ, ಮಹಿಳಾ ಮೋರ್ಚಾ ಜಿಲ್ಲಾ ಘಟಕ ಅಧ್ಯಕ್ಷೆ ರೇಷ್ಮಾ ಉದಯ ಶೆಟ್ಟಿ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಜಯರಾಮ್ ಸಾಲ್ಯಾನ್, ರಾಜ್ಯ ಕಾರ್ಯಕಾರಿಣಿ ಸದಸ್ಯ ಆರೀಫ್ ಕಲ್ಲೊಟ್ಟೆ, ಶ್ಯಾಮಲ ಕುಂದರ್, ಗೀತಾ ಎಸ್.ಶೇರಿಗಾರ್, ಲವೀನಾ, ಮಹಮ್ಮದ್ ಮೀರಾ ಎಣ್ಣೆಹೊಳೆ, ಮೊಹಮ್ಮದ್ ಜರಿಗುಡ್ಡೆ, ವಿಜಯಲಕ್ಷ್ಮಿ ಕಿಣಿ ಇದ್ದರು.

ಕರಾಟೆಯಲ್ಲಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ತೋರಿದ ಸಲೀಂ ಜಾವೇದ್ ಅವರನ್ನು ಅಭಿನಂದಿಸಲಾಯಿತು. ಸಾಂಕೇತಿಕವಾಗಿ ವಿಮಾ ಬಾಂಡ್ ವಿತರಿಸಲಾಯಿತು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT