ಮಳವಳ್ಳಿ: ಕೃಷ್ಣರಾಜಸಾಗರ ಅಣೆಕಟ್ಟೆಯ 165 ಕಿ.ಮೀ. ದೂರದಲ್ಲಿರುವ ತಾಲ್ಲೂಕಿನ ಚೊಟ್ಟನಹಳ್ಳಿ ಕೆರೆಗೆ ಇನ್ನೂ ನೀರು ತಲುಪಿಲ್ಲ. ಕೆರೆ ಸಂಪೂರ್ಣವಾಗಿ ಒಣಗಿದ್ದು, ಜಾನುವಾರುಗಳು ಕುಡಿಯುವ ನೀರಿಗಾಗಿ ಪರದಾಡಬೇಕಾದಂತಹ ಸ್ಥಿತಿ ಇದೆ.
ನಂಜಾಪುರ ಏತ ನೀರಾವರಿ ಯೋಜನೆಯ ಕಾಲುವೆ ಮೂಲಕ ಕೆರೆಗೆ ನೀರನ್ನು ತುಂಬಿಸಲಾಗುತ್ತಿತ್ತು. ಆದರೆ ಈ ಬಾರಿಗೆ ಇಲ್ಲಿಯವರೆಗೂ ಸಾಧ್ಯವಾಗಿಲ್ಲ.
ಮೇಲಿನ ಭಾಗದಲ್ಲಿ ಹೆಚ್ಚು ನೀರು ಬಳಸಿಕೊಳ್ಳುತ್ತಿರುವುದರಿಂದ ನಿಗದಿತ ಪ್ರಮಾಣದಲ್ಲಿ ನೀರು ಬರುತ್ತಿಲ್ಲ. ಪರಿಣಾಮ ಕೆರೆ ತುಂಬಿಸಲು ಸಾಧ್ಯವಾಗಿಲ್ಲ ಎನ್ನುತ್ತಾರೆ ರೈತ ಸಿದ್ದರಾಜು.
ಕೆರೆಯಲ್ಲಿ ನೀರಿಲ್ಲದ್ದರಿಂದಾಗಿ ಜಾನುವಾರುಗಳಿಗೆ ಕುಡಿಯಲೂ ನೀರಿಲ್ಲದಂತಾಗಿದೆ. ಮೇವಿನ ಅಭಾವವೂ ಎದುರಾಗಿದೆ. ಇದೇ ಪರಿಸ್ಥಿತಿ ಮುಂದುವರೆದರೆ ಜಾನುವಾರುಗಳನ್ನು ಕಾಡಿಗೆ ಅಟ್ಟಬೇಕಾಗುತ್ತದೆ. ಕೆಲ ರೈತರು, ಕೆರೆಯ ಗುಂಡಿಯೊಂದನ್ನು ಕೊಳವೆಬಾವಿಗಳಿಂದ ತುಂಬಿಸಿರುವುದರಿಂದ ಸಧ್ಯಕ್ಕೆ ಬದುಕಿಕೊಂಡಿದ್ದೇವೆ ಎಂಬುದು ರೈತರ ಅಭಿಪ್ರಾಯ.
ಒಂದು ಬಾರಿ ಮೆಳೆ ಬಂದಾಗ ಜೋಳ ಹಾಕಿದ್ದೆ. ಮಳೆ ಬಾರದ್ದರಿಂದ ಒಣ ತೊಡಗಿದೆ. ಮೇವಿಗೂ ತೊಂದರೆಯಾಗಿದೆ. ಒಂದು ಕಂತೆ ಒಣಹುಲ್ಲಿಗೆ 30 ರಿಂದ 35 ರೂ ಆಗಿದ್ದು, ಅದು ಸಹ ಸಿಗುತ್ತಿಲ್ಲ. ಕಳೆದೆರಡು ದಿನಗಳಿಂದ ಆಗಿರುವ ಮಳೆಯಿಂದ ಸ್ವಲ್ಪ ನೆಮ್ಮದಿ ಮೂಡಿದೆ ಎನ್ನುತ್ತಾರೆ. ಮಾದೇಗೌಡ.
ತಾಲ್ಲೂಕಿನಲ್ಲಿ 11 ಸಾವಿರ ಹೆಕ್ಟೇರ್ ನೀರಾವರಿ ಪ್ರದೇಶವಿದ್ದು, ಕೇವಲ 4 ಸಾವಿರ ಹೆಕ್ಟೇರ್ ಜಮೀನಿನಲ್ಲಿ ಬತ್ತ ಹಾಗೂ 3 ಸಾವಿರ ಹೆಕ್ಟೇರ್ನಲ್ಲಿ ಕಬ್ಬು ಇದೆ. ಉಳಿದಂತೆ ಬಿತ್ತನೆಯೇ ಆಗಿಲ್ಲ.
ನೀರು ನಿರೀಕ್ಷಿತ ಪ್ರಮಾಣದಲ್ಲಿ ಕಾಲುವೆಗಳಲ್ಲಿ ಹರಿಯುತ್ತಿಲ್ಲವಾದ್ದರಿಂದ ಕೆರೆ ಭರ್ತಿ ಮಾಡಲು ಆಗಿಲ್ಲ. ನೀರು ತಲುಪಿಸುವ ಯತ್ನ ಮಾಡಲಾಗುತ್ತಿದ್ದು, ಶೀಘ್ರವೇ ಕೆರೆ ಭರ್ತಿ ಮಾಡಲಾಗುವುದು ಎನ್ನುತ್ತಾರೆ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು.