ಬೆಂಗಳೂರು: `ಸಂಚಾರ ವಿಭಾಗದ ಪೊಲೀಸ್ ಸಿಬ್ಬಂದಿ ಯಾವಾಗಲೂ ಬಿಸಿಲು, ಮಾಲಿನ್ಯ, ಹೊಗೆ ಮತ್ತು ಮಳೆಯಲ್ಲಿ ಹಗಲಿರುಳು ಶ್ರಮವಹಿಸಿ ಕೆಲಸ ಮಾಡಬೇಕಾಗುತ್ತದೆ~ ಎಂದು ಸಂಚಾರ ವಿಭಾಗದ ಹೆಚ್ಚುವರಿ ಪೊಲೀಸ್ ಕಮಿಷನರ್ ಡಾ.ಎಂ.ಎ. ಸಲೀಂ ಅವರು ಹೇಳಿದರು.
ಮ್ಯಾಕ್ ಸಂಸ್ಥೆ ಮತ್ತು ಬೆಂಗಳೂರು ಸಾರಿಗೆ ಪೊಲೀಸ್ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಸೋಮವಾರ ನಗರದಲ್ಲಿ ಸಂಚಾರ ಪೊಲೀಸರಿಗೆ ಆಯೋಜಿಸಿದ್ದ `ಒತ್ತಡ ನಿವಾರಣೆ~ ಕುರಿತ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.
`ಸಂಚಾರ ಪೊಲೀಸರ ಕೆಲಸವು ಮಾಲಿನ್ಯಯುಕ್ತವಾದ ವಾತಾವರಣದಲ್ಲಿ ಇರುವುದರಿಂದ ಅವರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಅವರು ಮಾನಸಿಕವಾಗಿ ಒತ್ತಡಕ್ಕೆ ಒಳಗಾಗುತ್ತಾರೆ. ಆದ್ದರಿಂದ ಅವರು ತಮ್ಮ ಮಾನಸಿಕ ಒತ್ತಡವನ್ನು ಕಡಿಮೆ ಮಾಡಿಕೊಳ್ಳಲು ಈ ಕಾರ್ಯಾಗಾರವು ಅನುಕೂಲವಾಗಲಿದೆ~ ಎಂದರು.
`ಸಾರಿಗೆ ಇಲಾಖೆಯಿಂದ ಅನೇಕ ಶಿಬಿರಗಳನ್ನು, ಕಾರ್ಯಾಗಾರಗಳನ್ನು ಆಯೋಜಿಸಲಾಗಿದೆ. ಈಗ ಈ ಕಾರ್ಯಾಗಾರದಲ್ಲಿ ಅವರಿಗೆ ಒತ್ತಡ ಕಡಿಮೆ ಮಾಡಿಕೊಳ್ಳುವಂತಹ ಅನೇಕ ತಂತ್ರಗಳನ್ನು ಹೇಳಿಕೊಡಲಾಗುತ್ತದೆ. ಮನೆಗೆ ಹೋಗಿ ಇದನ್ನು ಅಭ್ಯಾಸ ಮಾಡಬೇಕು. ಇದರಿಂದ ಅವರ ಆರೋಗ್ಯ ಸುಧಾರಣೆಯಾಗುತ್ತದೆ~ ಎಂದು ಹೇಳಿದರು.
ಮ್ಯಾಕ್ ಸಂಸ್ಥೆಯ ಉಪಾಧ್ಯಕ್ಷ ಶಾಜಾನ್ ಸ್ಯಾಮ್ಯುಯೆಲ್ ಮಾತನಾಡಿ, `ಬೆಳಿಗ್ಗೆಯಿಂದ ರಾತ್ರಿವರೆಗೂ ಕೆಲಸ ಮಾಡಿದರೂ ಒಂದು ಧನ್ಯವಾದವನ್ನು ಹೇಳದ ಕೆಲಸವಿದು. ಇದರಲ್ಲಿ ತುಂಬ ಒತ್ತಡಗಳಿರುತ್ತವೆ. ಇಲ್ಲಿ ಮುಖ್ಯವಾಗಿ ಸಂಚಾರ ಪೊಲೀಸರಿಗಿಂತ ವಾಹನ ಸವಾರರದೇ ತಪ್ಪಿರುತ್ತದೆ.