ಸಿಂದಗಿ: ಇಂದಿನ ಮಕ್ಕಳಿಗೆ ಒತ್ತಡದ ಶಿಕ್ಷಣವನ್ನು ನೀಡುವುದರ ಬದಲಾಗಿ ಅವರ ಇಷ್ಟದ ಶಿಕ್ಷಣವನ್ನು ನೀಡುವುದು ಉತ್ತಮ ಎಂದು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಅಧ್ಯಕ್ಷ ಎಂ.ಎಸ್.ಮಠ ಸಲಹೆ ನೀಡಿದರು.
ಪಟ್ಟಣದ ರೈತ ಭವನದ ಶಾಲಾ ಆವರಣದಲ್ಲಿ ಆಯೋಜಿಸಿದ್ದ ಸೈಕಲ್ ವಿತರಣಾ ಸಮಾರಂಭದಲ್ಲಿ ಅವರು ಮಾತನಾಡಿದರು.
ವಿದ್ಯಾರ್ಥಿಗಳು ಜೀವನದಲ್ಲಿ ಉನ್ನತವಾದ ಗುರಿಯನ್ನಿಟ್ಟುಕೊಂಡು ಉಜ್ವಲವಾದ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ತಿಳಿಸಿದರು.ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಮುಖ್ಯಾಧ್ಯಾಪಕ ಎಸ್.ಕೆ.ಗುಗ್ಗರಿ ಸೈಕಲ್ ಸವಾರಿ ಶಾರೀರಿಕವಾಗಿ ಅಷ್ಟೇ ಅಲ್ಲ ಮಾನಸಿಕವಾಗಿಯೂ ಮನೋಲ್ಲಾಸ ನೀಡುವಂಥದ್ದು.
ಭಾರತದ ಪ್ರಪ್ರಥಮ ಬಾಹ್ಯಾಕಾಶಯಾನಿಗಳಾದ ರಾಕೇಶ ಶರ್ಮಾ, ಕಲ್ಪನಾ ಚಾವ್ಲಾ ಇವರೆಲ್ಲ ಮೊದಲಿಗೆ ಸೈಕಲ್ ಮೇಲೆ ಸವಾರಿ ಮಾಡುತ್ತಲೇ ಅಂತರಿಕ್ಷದಲ್ಲಿ ಹಾರಾಡಿದವರು ಎಂದರು.ಎ.ಪಿ.ಎಂ.ಸಿ ಉಪಾಧ್ಯಕ್ಷ ಶರಣು ಧರಿ ಅತಿಥಿಯಾಗಿದ್ದರು. ಅಧ್ಯಾಪಕ ಎಂ.ಎಚ್.ಬಂಥನಾಳ ಸ್ವಾಗತಿಸಿದರು. ಆಫ್ರಿನ್ ಜಮಾದಾರ ನಿರೂಪಿಸಿದರು. ಎಸ್.ಸಿ.ಮುಚ್ಚಂಡಿ ವಂದಿಸಿದರು.