ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒತ್ತಡವಿಲ್ಲದಾಗ ಗಳಿಸಿದ ಶತಕವಿದು

Last Updated 15 ನವೆಂಬರ್ 2011, 19:30 IST
ಅಕ್ಷರ ಗಾತ್ರ

ಕೋಲ್ಕತ್ತ: ವಿ.ವಿ.ಎಸ್.ಲಕ್ಷ್ಮಣ್ ಮುಡಿಗೆ ಮತ್ತೊಂದು ಮೂರಂಕಿಯ ಮೊತ್ತದ ಗರಿ. ಅದೇ ಟೆಸ್ಟ್ ಕ್ರಿಕೆಟ್ ಜೀವನದ ಹದಿನೇಳನೇ ಶತಕ. ಆದರೆ ಈ ಬಾರಿ ಅವರು ನೂರರ ಗಡಿದಾಟಿ ಮುನ್ನುಗ್ಗಿದ್ದು ತಂಡವು ಒತ್ತಡದಲ್ಲಿ ಸಿಲುಕಿರದ ಸ್ಥಿತಿಯಲ್ಲಿ.

ಇಂಥ ಪರಿಸ್ಥಿತಿ `ವಿವಿಎಸ್~ಗೆ ಸಿಕ್ಕಿದ್ದೇ ಅಪರೂಪ. ಯಾವಾಗಲೂ ಅವರು ತಂಡವು ಭಾರಿ ಸಂಕಷ್ಟದಲ್ಲಿ ಇದ್ದಾಗ ಕ್ರೀಸ್‌ನಲ್ಲಿ ಗಟ್ಟಿಯಾಗಿ ಶತಕ ಗಳಿಸಿದ್ದಾರೆ. ಆದ್ದರಿಂದಲೇ ಅವರು ಈಡನ್ ಗಾರ್ಡನ್ಸ್ ಕ್ರೀಡಾಂಗಣದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಆಡಿದ ಇನಿಂಗ್ಸ್ ಅನ್ನು `ಒತ್ತಡವಿಲ್ಲದಾಗ ಗಳಿಸಿದ ಶತಕವಿದು~ ಎಂದು ಕರೆದರು. ದ್ವಿತೀಯ   ಟೆಸ್ಟ್‌ನ ಮಂಗಳವಾರದ ಆಟದ ನಂತರ ಮಾತಿಗಿಳಿದ ಅವರು ಅನೇಕ ವಿಷಯಗಳನ್ನು ಹಂಚಿಕೊಂಡರು. ಅವುಗಳಲ್ಲಿ ಕೆಲವನ್ನು ಇಲ್ಲಿ ಜೋಡಿಸಿಡಲಾಗಿದೆ.

- `ಈಡನ್~ಗೆ  ನಿಮ್ಮ ಹೆಸರು ಇಡಬಹುದೇ?

ಗೊತ್ತಿಲ್ಲ! ಆದರೆ ನನಗೆ ಇದು `ವೆರಿ ವೆರಿ ಸ್ಪೇಷಲ್~ ಕ್ರೀಡಾಂಗಣ. ಕಾರಣ ನನಗೂ ಗೊತ್ತಿಲ್ಲ. ಇಲ್ಲಿನ ಪ್ರೇಕ್ಷಕರನ್ನು ನೋಡಿದಾಗ ಸಂತೋಷವಾಗುತ್ತದೆ. ಆಡಲು ಉತ್ಸಾಹ ಸಿಗುತ್ತದೆ. ಈಗ ಏಕೋ ಜನರು ಕಡಿಮೆ. ಹಿಂದೆ ಆಡಿದ್ದಾಗ ರೋಮಾಂಚನ ಎನಿಸಿತ್ತು. ಈ ಅಂಗಳವು ದೊಡ್ಡ ಇತಿಹಾಸ ಹೊಂದಿದೆ. ಇಲ್ಲಿ ಕ್ರಿಕೆಟ್ ಸಂಪ್ರದಾಯ ಎನ್ನುವುದಿದೆ. ಅದರಲ್ಲಿಯೂ ಟೆಸ್ಟ್ ಪ್ರೀತಿಸುವ ಜನರು ಇಲ್ಲಿದ್ದಾರೆ. ಅವರೇ ಇದಕ್ಕೆ ವಿಶಿಷ್ಟವಾದ ಸ್ಥಾನ ದೊರಕಿಸಿಕೊಟ್ಟಿದ್ದು.

-ವಿಂಡೀಸ್ ವಿರುದ್ಧದ ಇನಿಂಗ್ಸ್ ಮೌಲ್ಯ?
ನಾನೆಂದೂ ಆಡಿದ ಇನಿಂಗ್ಸ್‌ಗಳನ್ನು ತೂಗಿ ನೋಡುವುದಿಲ್ಲ. ಆದರೆ ಒಂದು ವಿಷಯದಲ್ಲಿ ಸ್ಪಷ್ಟವಾಗಿ ಯೋಚಿಸುತ್ತೇನೆ. ಗಳಿಸಿದ ಶತಕವು ತಂಡದ ಗೆಲುವಿಗೆ ಕಾರಣವಾಗಬೇಕು. ವಿಂಡೀಸ್ ವಿರುದ್ಧವೂ ನನ್ನ ಈ ಆಟವು ಜಯಕ್ಕೆ ಸಹಕಾರಿ ಆದರೆ ಅದರ ಬೆಲೆ ಹೆಚ್ಚು. ಸೋಲಿನ ಪಂದ್ಯಗಳಲ್ಲಿ ಗಳಿಸಿದ ರನ್‌ಗಳ ಲೆಕ್ಕವನ್ನು ಬದಿಗಿಟ್ಟು ನನ್ನ ಸಾಧನೆಯನ್ನು ವಿಶ್ಲೇಷಣೆ ಮಾಡುತ್ತೇನೆ.

- ಗೆಲುವಿನ ಸಾಧ್ಯತೆ?
ಬ್ಯಾಟ್ಸ್‌ಮನ್‌ಗಳು ತಮ್ಮ ಹೊಣೆಯನ್ನು ನಿಭಾಯಿಸಿದ್ದಾರೆ. ಈಗ ಬೌಲರ್‌ಗಳ ಮೇಲೆ ಜವಾಬ್ದಾರಿ. ವೆಸ್ಟ್ ಇಂಡೀಸ್ ತಂಡವನ್ನು ಈಗಿರುವ 631 ರನ್‌ಗಳಲ್ಲಿ ಎರಡು ಬಾರಿ ತಡೆಯಲು ಸಾಧ್ಯವಾದರೆ ಅದು ಅದ್ಭುತ. 

-ದ್ವಿಶತಕದ ಯೋಚನೆ ಮಾಡಲಿಲ್ಲವೆ?
ಪಂದ್ಯದ ಯೋಜನೆಗೆ ತಕ್ಕಂತೆ ಸಾಗುವುದು ಮುಖ್ಯ. ವೈಯಕ್ತಿಕ ಸಾಧನೆಗೆ ಮಹತ್ವ ನೀಡುವ ಅಗತ್ಯವಿಲ್ಲ.    ಇನಿಂಗ್ಸ್ ಡಿಕ್ಲೇರ್ ಮಾಡಿಕೊಳ್ಳಲು ಸಲಹೆ ನೀಡಿದ್ದು ಕೂಡ ನಾನೇ. ಮಂದವಾಗಿತ್ತು. ಆದ್ದರಿಂದ ಬೇಗ ಇನಿಂಗ್ಸ್ ಕೊನೆಗೊಳಿಸುವ ನಿರ್ಧಾರ ಪ್ರಕಟಿಸಲು ದೋನಿಗೆ ಅಂಗಳದಿಂದಲೇ ಸಂದೇಶ ಕಳುಹಿಸಿದೆ.

-ದೋನಿ ಅವರೊಂದಿಗೆ ಜೊತೆಯಾಟ?
ಹಾಸ್ಯಪ್ರಜ್ಞೆಯಿರುವ ನಾಯಕ `ಎಂಎಸ್~ (ಮಹೇಂದ್ರ ಸಿಂಗ್). ಕ್ರೀಸ್‌ನಲ್ಲಿದ್ದಾಗ ಅನೇಕ ಬಾರಿ ಮಾತನಾಡಿಕೊಂಡಿದ್ದೆವು. ವಿಚ್ರಿವೆಂದರೆ ಅವರು ಪ್ರತಿಯೊಂದು ಸಿಕ್ಸರ್ ಸಿಡಿಸಿದ ನಂತರ ನನ್ನ ಹತ್ತಿರ ಬಂದು ಚೆಂಡು ಸರಿಯಾಗಿ ಬ್ಯಾಟ್‌ಗೆ ತಾಗಲಿಲ್ಲ ಎಂದು ಹೇಳುತ್ತಿದ್ದರು. ಅವರ ಮಾತೇ ಹಾಗೆ. ದಣಿವಿನ ನಡುವೆಯೂ ಮನಸ್ಸು ಉಲ್ಲಸಿತವಾಗುವಂತೆ ಮಾಡುತ್ತಾರೆ. ದೋನಿ ಬಿರುಸಿನಿಂದ ಬ್ಯಾಟ್ ಬೀಸುತ್ತಿದ್ದರೂ, ನಾನು ಅವರಿಗೆ ಸ್ಪರ್ಧೆ ನೀಡಲು ಸಾಧ್ಯವಿರಲಿಲ್ಲ. 

- ಬೆನ್ನು ನೋವಿದೆ ಎನಿಸುತ್ತದೆ?
ಖಂಡಿತ ಇಲ್ಲ. ದೀರ್ಘ ಇನಿಂಗ್ಸ್ ಆಡಿದ್ದರಿಂದ ಸ್ವಲ್ಪ ಸೆಳೆತವಿತ್ತು. ಒಮ್ಮೆ ಬ್ಯಾಟ್ ಬೀಸುವ ಯತ್ನದಲ್ಲಿ ನೋವಿನ ಅನುಭವ ಆಯಿತು. ಆದರೆ ಅದು ಆ ಕ್ಷಣಕ್ಕೆ ಮಾತ್ರ. ಮತ್ತೆ ನಾನು ಕ್ಷೇತ್ರ ರಕ್ಷಣೆ ಮಾಡಲು ಬಂದೆ. ಯಾವುದೇ ತೊಂದರೆಯಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT