ಮಂಡ್ಯ: ರೈತರಿಗೆ ನೀಡಿದ ಟ್ರಾಕ್ಟರ್ ಸಾಲ ವಸೂಲಿ ಮಾಡುವಾಗ ಬಲ ಪ್ರಯೋಗ ಮಾಡುವುದು, ನಿಯಮ ಗಳನ್ನು ಮೀರಿ ಟ್ರಾಕ್ಟರ್ ಜಫ್ತಿ ಮಾಡುವ ಕ್ರಮಗಳನ್ನು ಕೈಬಿಡಬೇಕು ಎಂದು ಬುಧವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಸಭೆ ಆಗ್ರಹಿಸಿದೆ. ಸಭೆಯಲ್ಲಿ ಮಾತನಾಡಿದ ರೈತ ಮುಖಂಡರ ಅಭಿಪ್ರಾಯಗಳನ್ನು ಆಧರಿಸಿ ಜಿಲ್ಲಾಧಿಕಾರಿ ಡಾ. ಪಿ.ಸಿ. ಜಾಫರ್ ಅವರು ಈ ಕುರಿತು ಸಭೆಯಲ್ಲಿ ಬ್ಯಾಂಕ್ಗಳ ಪ್ರತಿನಿಧಿಗಳಿಗೆ ಸೂಚನೆ ನೀಡಿದರು.
ಯಾವುದೇ ಕಾರಣಕ್ಕೂ ಬಲ ಪ್ರಯೋಗದ ಮೂಲಕ ಟ್ರಾಕ್ಟರ್ ಜಫ್ತಿ ಮಾಡುವುದು ಸಲ್ಲದು. ಸಾಲವನ್ನು ಮರುಪಾವತಿಸಲು ರೈತರಿಗೆ ಮನ ವರಿಕೆ ಮಾಡಬೇಕು ಹಾಗೂ ನಿಯಮ ಗಳ ಅನುಸಾರವೇ ಕ್ರಮ ಜರುಗಿಸ ಬೇಕು ಎಂದು ಅವರು ಸಲಹೆ ಮಾಡಿ ದರು.
ಸಭೆಯಲ್ಲಿ ಮಾತನಾಡಿದ ರೈತ ಸಂಘದ ರಾಜ್ಯ ಘಟಕದ ಅಧ್ಯಕ್ಷ ಕೆ.ಎಸ್.ಪುಟ್ಟಣ್ಣಯ್ಯ ಅವರು, ಸಾಲ ನೀಡುವಾಗಲೂ ಬ್ಯಾಂಕ್ಗಳ ಪ್ರತಿ ನಿಧಿಗಳು ಅಗತ್ಯವನ್ನು ಪರಿಶೀಲಿಸು ವುದಿಲ್ಲ. ಸಾಲ ನೀಡುತ್ತಾರೆ. ನಂತರ ಬಲವಂತದಿಂದ, ರೌಡಿಗಳ ನೆರವು ಪಡೆದು ಟ್ರ್ಯಾಕ್ಟರ್ ಜಫ್ತಿಗೆ ಕ್ರಮ ಕೈಗೊಳ್ಳುತ್ತಾರೆ ಎಂದು ತರಾಟೆಗೆ ತೆಗೆದುಕೊಂಡರು.
ಅಲ್ಲದೆ, ಉದ್ಯೋಗ ಸೃಷ್ಟಿಸಲು ಪೂರಕವಾದ ಸಾಲವನ್ನು ನೀಡುವುದು ಉತ್ತಮ. ಟ್ರಾಕ್ಟರ್ ಸಾಲಕ್ಕಿಂತಲೂ ಎತ್ತಿನಗಾಡಿ ಸಾಲ ನೀಡಲಿ.ಇದರಿಂದ ಕನಿಷ್ಠ ಉದ್ಯೋಗ ಅವಕಾಶಗಳಾದರೂ ಸೃಷ್ಟಿ ಆಗಲಿದೆ ಎಂದು ಸಲಹೆ ಮಾಡಿದರು.
ಆದರೆ, ಯಾವುದೇ ಕಾರಣಕ್ಕೂ ಅಕ್ರಮವಾಗಿ, ಬಲವಂತದಿಂದ ಸಾಲ ವಸೂಲಿ, ರೌಡಿಗಳ ನೆರವು ಪಡೆದು ಟ್ರ್ಯಾಕ್ಟರ್ ಜಫ್ತಿ ಮಾಡುವ ಕ್ರಮ ಗಳನ್ನು ರೈತ ಸಂಘ ಸಹಿಸುವುದಿಲ್ಲ ಎಂದರು. ಇನ್ನು ಮುಂದೆ ಕನಿಷ್ಠ 8 ಎಕರೆ ಭೂಮಿ ಇರುವ ರೈತರಿಗೆ ಮಾತ್ರವೇ ಟ್ರ್ಯಾಕ್ಟರ್ ಸಾಲ ನೀಡುವ ಕುರಿತು ಕಟ್ಟು ನಿಟ್ಟಾಗಿ ನಿಯಮ ಪಾಲಿಸಲಾಗುವುದು. ಈಗ ಕೆಲ ಪ್ರಕರಣಗಳಲ್ಲಿ 4 ಎಕರೆ ಭೂಮಿ ಇರುವವರೆಗೂ ಸಾಲ ನೀಡಲಾಗಿದೆ ಎಂಬುದನ್ನು ಬ್ಯಾಂಕ್ ಪ್ರತಿನಿಧಿಗಳು ಒಪ್ಪಿಕೊಂಡರು.
ಹೆಚ್ಚುವರಿ ಜಿಲ್ಲಾಧಿಕಾರಿ ಪುಟ್ಟ ಮಾದಯ್ಯ, ಜಿಲ್ಲಾ ರೈತ ಸಂಘದ ಅಧ್ಯಕ್ಷ ಕೋಣಸಾಲೆ ನರಸರಾಜು, ನಬಾರ್ಡ್ನ ಬಿಂದು ಮಾಧವ ವಡವಿ, ಜಿಲ್ಲಾ ಲೀಡ್ ಬ್ಯಾಂಕ್ನ ವ್ಯವಸ್ಥಾಪಕರಾದ ಸುರೇಶ್, ರೈತ ಮುಂಡರಾದ ಅಶೋಕ್, ಸುರೇಶ್, ಮರಿಚನ್ನೇಗೌಡ ಮುಖಂಡರು ಹಾಜರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.