ಬೆಂಗಳೂರು:ಲಗ್ಗೆರೆಯಲ್ಲಿ `ರಾಕ್ಷಸಿ ಹಳ್ಳ~ ಎಂದು ಕರೆಯಲಾಗುವ ರಾಜಕಾಲುವೆ ಪ್ರದೇಶದಲ್ಲಿನ 10 ಎಕರೆಯಷ್ಟು ಒತ್ತುವರಿಯನ್ನು ವಾರದೊಳಗೆ ತೆರವುಗೊಳಿಸಬೇಕು ಎಂದು ಮೇಯರ್ ಪಿ.ಶಾರದಮ್ಮ ಸೂಚನೆ ನೀಡಿದರು.
ರಾಜರಾಜೇಶ್ವರಿನಗರ ವಲಯ ವ್ಯಾಪ್ತಿಯಲ್ಲಿನ ಲಗ್ಗೆರೆ ವಾರ್ಡ್ನಲ್ಲಿ ಶನಿವಾರ ತಪಾಸಣೆ ನಡೆಸಿದ ಸಂದರ್ಭದಲ್ಲಿ ಅಧಿಕಾರಿಗಳಿಗೆ ಈ ಆದೇಶ ನೀಡಿದರು.
ಇದಕ್ಕೂ ಮೊದಲು ಪಾಲಿಕೆ ಸದಸ್ಯ ಲಕ್ಷ್ಮಿಕಾಂತರೆಡ್ಡಿ, `ರಾಕ್ಷಸಿ ಹಳ್ಳ ಎಂದು ಕರೆಯಲಾಗುವ ರಾಜಕಾಲುವೆ ಪ್ರದೇಶದಲ್ಲಿ ಸುಮಾರು 10 ಎಕರೆ ಭೂಮಿ ಒತ್ತುವರಿಯಾಗಿದೆ. ಇದರಿಂದ ಮಳೆ ನೀರು ಸರಾಗವಾಗಿ ಹರಿಯದೆ ಸ್ಥಳೀಯರು ತೊಂದರೆ ಅನುಭವಿಸುವಂತಾಗಿದೆ~ ಎಂದರು.
ಇದಕ್ಕೆ ಪ್ರತಿಕ್ರಿಯಿಸಿದ ಮೇಯರ್, ವಾರದೊಳಗೆ ಒತ್ತುವರಿಯನ್ನು ತೆರವುಗೊಳಿಸಿ ಸೂಕ್ತ ಬೇಲಿ ಅಳವಡಿಸುವಂತೆ ಜಂಟಿ ಆಯುಕ್ತ ರಾಮಚಂದ್ರ ಅವರಿಗೆ ಸೂಚನೆ ನೀಡಿದರು. ನಂತರ ಮೇಯರ್, ನಂದಿನಿ ಲೇಔಟ್ನ ಆರೋಗ್ಯ ಕೇಂದ್ರ ಮತ್ತು ಹೆರಿಗೆ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಉಪಮೇಯರ್ ಎಸ್. ಹರಿಶ್, ಆಡಳಿತ ಪಕ್ಷದ ನಾಯಕ ಬಿ.ಆರ್. ನಂಜುಂಡಪ್ಪ ಇತರಇದ್ದರು.